ಬೆಂಗಳೂರು: ಬೆಂಗಳೂರಿನ ಅಪೋಲೋ ಆಸ್ಪತ್ರೆಯ ರೇಡಿಯೇಶನ್ ಆಂಕಾಲಜಿಸ್ಟ್ಸ್ ಮತ್ತು ವೈದ್ಯಕೀಯ ತಜ್ಞರು, ಬೆಂಗಳೂರಿನ 34 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಅತ್ಯಂತ ಅಪರೂ ಪದ, ತೀವ್ರವಾಗಿ ಹರಡುವ ಮತ್ತು ಜೀವಕ್ಕೆ ಕಂಟಕವಾಗಬಹುದಾದ ಬೈಫ್ರಂಟಲ್ ಗ್ಲಿಯೋಬ್ಲಾ ಸ್ಟೋಮಾ (GBM) ಸಮಸ್ಯೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಈ ಮೂಲಕ ಅವರು ಶಸ್ತ್ರ ಚಿಕಿತ್ಸೆಯಿಲ್ಲದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಪರಿಣತಿ ಮತ್ತು ಸಕಾಲಿಕ ನಿಖರ ಮಧ್ಯಪ್ರವೇಶದ ಶಕ್ತಿ ನಿರೂಪಿಸಿದ್ದಾರೆ.
ಅತಿ ಹೆಚ್ಚು ಕೆಲಸದ ಒತ್ತಡವಿರುವ ಕಾರ್ಪೊರೇಟ್ ವೃತ್ತಿಜೀವನ ಹಾಗೂ ವೈಯಕ್ತಿಕ ಜವಾಬ್ದಾರಿ ಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಈ ಯುವ ಉದ್ಯೋಗಿ, ಕಳೆದ ಕೆಲವು ವಾರಗಳಿಂದ ಸಣ್ಣ ಪ್ರಮಾಣದ ತಲೆನೋವಿನಿಂದ ಬಳಲುತ್ತಿದ್ದರು. ಆದರೆ, ಇಂದಿನ ಯುವ ಪೀಳಿಗೆಯ ಅನೇಕರಂತೆ, ಅವರು ಕೂಡ ಇದನ್ನು ಕೆಲಸದ ಒತ್ತಡ ಮತ್ತು ಆಯಾಸದಿಂದ ಬಂದ ಸಾಮಾನ್ಯ ತಲೆನೋವೆಂದು ನಿರ್ಲಕ್ಷಿಸಿದ್ದರು.
ಮನೆಯಲ್ಲಿ ಆಕೆಗೆ ಮೊದಲ ಬಾರಿಗೆ ತೀವ್ರವಾದ ಮೂರ್ಛೆ ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಾಗ ಆಕೆಯ ಪರಿಸ್ಥಿತಿಯ ಗಂಭೀರತೆ ಹಠಾತ್ತನೆ ತೀಗವ್ರಗೊಂಡಿತ್ತು, ಅಲ್ಲದೆ ಆ ಸಮಯದಲ್ಲಿ ಏನಾ ಯಿತು ಎಂಬುದು ಆಕೆಗೆ ಸಂಪೂರ್ಣವಾಗಿ ಮರೆತು ಹೋಗಿತ್ತು. ಪ್ರಾಥಮಿಕ ತಪಾಸಣೆ ಮತ್ತು ಮೂರ್ಛೆ ನಿಯಂತ್ರಣದ ಔಷಧಿಗಳನ್ನು ನೀಡಿದ ನಂತರ, ಆಕೆಯ ಆರೋಗ್ಯ ಸ್ಥಿತಿ ಸುಧಾರಿಸಿದಂತೆ ಕಂಡುಬಂದಿತು.
ಇದನ್ನೂ ಓದಿ: Bangalore News: ಬೂಸ್ಟ್, ಐಐಎಸ್ಸಿಯಲ್ಲಿ 'ವಾಧ್ವಾನಿ ಇನ್ನೋವೇಶನ್ ಸೆಂಟರ್' ಆರಂಭ
ಆದರೆ, ಒಂದು ರಸ್ತೆ ಪ್ರಯಾಣದ ಸಮಯದಲ್ಲಿ ಆಕೆಗೆ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಮೂರು ಬಾರಿ ತೀವ್ರವಾದ ಮೂರ್ಛೆ ಬಿದ್ದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಇದರಿಂದ ಆಕೆಯನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸು ವಂತೆ ಸೂಚಿಸಲಾಯಿತು.
ಆಸ್ಪತ್ರೆಯಲ್ಲಿ ನಡೆಸಲಾದ ವಿವರವಾದ ಡಯಾಗ್ನೊಸ್ಟಿಕ್ ಇಮೇಜಿಂಗ್ ಮತ್ತು ಸುಧಾರಿತ ತಪಾಸಣೆಗಳ ನಂತರ ಅತ್ಯಂತ ಸವಾಲಿನ ಹಾಗೂ ವೈದ್ಯಕೀಯವಾಗಿ ಅಸಹಜವಾದ ಕಾಯಿಲೆ ಯನ್ನು ಬಹಿರಂಗಪಡಿಸಿದವು: ಅದೇ ಬೈಫ್ರಂಟಲ್ ಗ್ಲಿಯೋಬ್ಲಾಸ್ಟೋಮಾ. ಮೆದುಳಿನ ಒಂದು ನಿರ್ದಿಷ್ಟ ಭಾಗಕ್ಕೆ ಮಾತ್ರ ಸೀಮಿತವಾಗಿರುವ ಸಾಮಾನ್ಯ ಜಿಬಿಎಮ್ ಪ್ರಕರಣಗಳಿಗಿಂತ ಭಿನ್ನವಾಗಿ, ಈ ರೋಗಿಯ ಇಮೇಜಿಂಗ್ ವರದಿಯಲ್ಲಿ ಕ್ಯಾನ್ಸರ್ ಮೆದುಳಿನ ಎರಡೂ ಮುಂಭಾಗದ ಹಾಲೆಗಳಿಗೆ ವ್ಯಾಪಕವಾಗಿ ಹರಡಿರುವುದು ಕಂಡುಬಂದಿತು. ಮೆದುಳಿನ ಎರಡೂ ಬದಿಗಳಲ್ಲಿ ಈ ರೀತಿ ವ್ಯಾಪಕ ವಾಗಿ ಹರಡಿದ್ದರಿಂದ, ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದುಹಾಕುವುದು ಅತ್ಯಂತ ಅಪಾಯಕಾರಿಯಾಗಿತ್ತು ಮತ್ತು ಇದು ತೀವ್ರತರವಾದ ನರ ದೌರ್ಬಲ್ಯಕ್ಕೆ ಕಾರಣವಾಗುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿತ್ತು.
ಈ ವೈದ್ಯಕೀಯ ಸವಾಲುಗಳನ್ನು ಎದುರಿಸಲು, ಅಪೋಲೋ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞರನ್ನೊಳಗೊಂಡ ಟ್ಯೂಮರ್ ಬೋರ್ಡ್ ಶಸ್ತ್ರಚಿಕಿತ್ಸೆಯಿಲ್ಲದ, ಅತ್ಯಂತ ನಿಖರವಾದ ರೇಡಿಯೋಥೆರಪಿ ವಿಧಾನವನ್ನು ಆಯ್ಕೆ ಮಾಡಿಕೊಂಡಿತು. ವೈದ್ಯಕೀಯ ತಂಡವು ಅತ್ಯಾಧುನಿಕ ರ್ಯಾಪಿಡ್ ಆರ್ಕ್ ತಂತ್ರಜ್ಞಾನವನ್ನು ಬಳಸಿ, 25 ಸೆಷನ್ಗಳ ಇಮೇಜ್-ಗೈಡೆಡ್ ರೇಡಿಯೋಥೆರಪಿ ಯನ್ನು (IGRT) ಒಳಗೊಂಡ ಅತ್ಯಂತ ನಿಖರ ಗುರಿ-ಆಧರಿತ ಚಿಕಿತ್ಸಾ ಯೋಜನೆಯನ್ನು ಯಶಸ್ವಿ ಯಾಗಿ ನಡೆಸಿತು.
ನಂತರ ಎರಡು ಸೈಬರ್ನೈಫ್ ಬೂಸ್ಟ್ ಸೆಷನ್ಗಳನ್ನು ನೀಡಲಾಯಿತು. ಇದು ಸುತ್ತಮುತ್ತಲಿನ ಆರೋಗ್ಯಕರ ಮೆದುಳಿನ ಅಂಗಾಂಶಗಳಿಗೆ ಯಾವುದೇ ಹಾನಿ ಮಾಡದಂತೆ, ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಕೋಶಗಳಿರುವ ಭಾಗಕ್ಕೆ ಮಾತ್ರ ಮಿಲಿಮೀಟರ್ಗಿಂತಲೂ ಕಡಿಮೆ ನಿಖರತೆಯಲ್ಲಿ ಕೇಂದ್ರೀಕೃತ ವಿಕಿರಣವನ್ನು ನೇರವಾಗಿ ತಲುಪಿಸಿತು.
ಈ ಸಂಕೀರ್ಣವಾದ ಚಿಕಿತ್ಸೆಯನ್ನು ರೋಗಿಯು ಯಾವುದೇ ಪ್ರಮುಖ ಅಡ್ಡಪರಿಣಾಮಗಳಿಲ್ಲದೆ ಯಶಸ್ವಿಯಾಗಿ ಸಹಿಸಿಕೊಂಡರು. ಅಕ್ಟೋಬರ್ 2024 ರಿಂದ, ಅವರು ನಿಯಮಿತ ಡಯಾಗ್ನೊಸ್ಟಿಕ್ ಸ್ಕ್ಯಾನಿಂಗ್ನೊಂದಿಗೆ ತಮ್ಮ ಮಾಸಿಕ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಚಿಕಿತ್ಸೆಯ ನಂತರ, ರೋಗಿಯು ಗಮನಾರ್ಹವಾಗಿ ಚೇತರಿಸಿಕೊಂಡಿದ್ದಾರೆ. ಯಶಸ್ವಿಯಾಗಿ ತಮ್ಮ ಕೆಲಸಕ್ಕೆ ಮರಳಿದ್ದಾರೆ, ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಮತ್ತು ತಮ್ಮ ಸಾಮಾನ್ಯ ಜೀವನ ಶೈಲಿಯನ್ನು ಮರಳಿ ಪಡೆದುಕೊಂಡಿದ್ದಾರೆ.
ಈ ಪ್ರಕರಣದ ಸೂಕ್ಷ್ಮ ಪ್ರವೃತ್ತಿ ಕುರಿತು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಮುಂಚೂಣಿಯ ರೇಡಿಯೇಷನ್ ಆಂಕಾಲಜಿಸ್ಟ್ ಡಾ. ಶ್ರೀಧರ್ ಪಿ.ಎಸ್., " ಇಂದಿನ ಸಕ್ರಿಯ ಯುವ ಪೀಳಿಗೆಯು ಸತತ ತಲೆನೋವು ಅಥವಾ ಸಣ್ಣ ಪ್ರಮಾಣದ ಪ್ರಜ್ಞೆ ತಪ್ಪುವಿಕೆಯಂತಹ ಗಂಭೀರ ನರರೋಗದ ಎಚ್ಚರಿಕೆಯ ಲಕ್ಷಣಗಳನ್ನು, ಜೀವನಶೈಲಿಯಿಂದ ಉಂಟಾದ ಆಯಾಸ ಅಥವಾ ಮಾನಸಿಕ ಒತ್ತಡ ಎಂದು ನಿರ್ಲಕ್ಷಿಸುತ್ತಿರುವ ಅಪಾಯಕಾರಿ ಪ್ರವೃತ್ತಿಯನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ.
ಗ್ಲಿಯೋಬ್ಲಾಸ್ಟೋಮಾ ಎಂಬುದು ಅತ್ಯಂತ ತೀವ್ರವಾಗಿ ಹರಡುವ ಗಡ್ಡೆಯಾಗಿದ್ದು, ಇದಕ್ಕೆ ತಕ್ಷಣದ ಮತ್ತು ಅತ್ಯಂತ ನಿಖರವಾದ ಚಿಕಿತ್ಸೆಯ ಅಗತ್ಯವಿರುತ್ತದೆ. ಕ್ಯಾನ್ಸರ್ ಮೆದುಳಿನ ಎರಡೂ ಮುಂಭಾಗದ ಭಾಗಗಳಿಗೆ ವ್ಯಾಪಕವಾಗಿ ಹರಡಿದ್ದರಿಂದ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಸಾಧ್ಯ ವಿರಲಿಲ್ಲ. ಅಂತಹ ಸಂದರ್ಭದಲ್ಲಿ, ನಮ್ಮ ತಂಡವು ಅತ್ಯಾಧುನಿಕ ಐ.ಜಿ.ಆರ್.ಟಿ. ಮತ್ತು ಸೈಬರ್ನೈಫ್ ತಂತ್ರಜ್ಞಾನಗಳನ್ನು ಬಳಸಿ, ರೋಗವಿರುವ ನಿಖರವಾದ ಜಾಗವನ್ನು ಗುರಿಯಾಗಿಸಿ ಕೊಂಡು ಚಿಕಿತ್ಸೆ ನೀಡಿತು. ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲದಿದ್ದಾಗಲೂ ಸಹ, ಸುಧಾರಿತ ನಿಖರ ಆಂಕಾಲಜಿ ಚಿಕಿತ್ಸೆಯು ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಕೋಶಗಳನ್ನು ಸುರಕ್ಷಿತವಾಗಿ ನಾಶಪಡಿಸಿ, ರೋಗಿಗಳಿಗೆ ಅವರ ಜೀವನವನ್ನು ಮರಳಿ ನೀಡಬಲ್ಲದು ಎಂಬುದನ್ನು ಈ ಚಿಕಿತ್ಸೆಯ ಯಶಸ್ಸು ನಿರೂಪಿಸಿದೆ” ಎಂದರು.
ಅಪೋಲೋ ಆಸ್ಪತ್ರೆಯ ವೈದ್ಯಕೀಯ ತಜ್ಞರು, ಮರುಕಳಿಸುವ ತಲೆನೋವು, ಮೂರ್ಛೆ, ಹಠಾತ್ ತಲೆಸುತ್ತು, ಜ್ಞಾಪಕಶಕ್ತಿ ನಷ್ಟ, ನಡುಕ ಅಥವಾ ದೃಷ್ಟಿ ದೋಷಗಳೂ ಸೇರಿದಂತೆ ನಿರಂತರವಾಗಿ ಕಂಡುಬರುವ ನರರೋಗದ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಒತ್ತಿ ಹೇಳು ತ್ತಾರೆ.
ತೀವ್ರತರವಾದ ಮೆದುಳಿನ ಕಾಯಿಲೆಗಳಲ್ಲಿ ಯಶಸ್ವಿ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಮೊದಲೇ ರೋಗಪರೀಕ್ಷೆ ಮಾಡುವುದು, ತಕ್ಷಣದ ನರರೋಗ ತಜ್ಞರ ಸಮಾಲೋಚನೆ ಮತ್ತು ಸಕಾಲಿಕ ಮೆದುಳಿನ ಎಂಆರ್ಐ ಸ್ಕ್ಯಾನಿಂಗ್ ಅತ್ಯಂತ ನಿರ್ಣಾಯಕವಾಗಿವೆ ಎಂದು ಅವರು ಒತ್ತಿ ಹೇಳುತ್ತಾರೆ.