ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಳಿಗಾಲದಲ್ಲಿ ಮುಖಕಾಂತಿ ಹೆಚ್ಚಿಸುವುದು ಹೇಗೆ?

Winter Tips: ಊಟ ಬಲ್ಲವನಿಗೆ ವಯಸ್ಸೂ ಆಗುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಅಂದರೆ ಸರಿಯಾಗಿ ಊಟ ಮಾಡುವವರು ಚಿರಯೌವನಿಗರು ಎಂದಲ್ಲ, ಅವರಿಗೆ ಬೇಗ ವಯಸ್ಸಾದಂತೆ ಕಾಣುವುದಿಲ್ಲ ಎಂಬುದು ಅದರರ್ಥ. ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಾಯುವ ಜೀವಕೋಶಗಳನ್ನು ಮತ್ತೆ ಮತ್ತೆ ಸೃಷ್ಟಿಸಿಕೊಳ್ಳಲು ಸೂಕ್ತವಾದ ಆಹಾರ ಸೇವಿದಾಗ ಮಾತ್ರವೇ, ಚರ್ಮಕ್ಕಾಗುವ ಹಾನಿ ಯನ್ನು ತುಂಬಲು ಸಾಧ್ಯ. ಅದಕ್ಕಾಗಿ ಏನು ಮಾಡಬೇಕು?

ಸಂಗ್ರಹ ಚಿತ್ರ

ನವದೆಹಲಿ,ಡಿ.14: ಚಳಿಗಾಲದಲ್ಲಿ ಚರ್ಮ ಒಣಗುವುದು, ಕಳಾಹೀನವಾಗುವುದು ಹೆಚ್ಚು. ಅದರಲ್ಲೂ ವಯಸ್ಸು 40 ದಾಟುತ್ತಿದ್ದಂತೆ ಒಣ ಚರ್ಮದ ಸಮಸ್ಯೆ (Winter Tips) ಇನ್ನಷ್ಟು ಹೆಚ್ಚುತ್ತದೆ. ಹಾಗೆಂದು ಪ್ರಾಯ ಹೆಚ್ಚುತ್ತಿದ್ದಂತೆ ಸುಂದರವಾಗಿ ಕಾಣಬೇಕೆಂಬ ಆಸೆ ಕಡಿಮೆ ಯಾಗಬೇಕೆಂಬ ನಿಯಮ ವಿಲ್ಲವಲ್ಲ. ಒಣ ಚರ್ಮದ ಸಮಸ್ಯೆಗಳೆಲ್ಲಾ ಹೆಚ್ಚಾಗಿ ಚಿಗುರುವುದೇ ಚಳಿಗಾಲದಲ್ಲಿ. ಇದರಿಂದ ಚರ್ಮ ಸುಕ್ಕಾಗುವುದು, ಕಾಂತಿಹೀನವಾಗುವುದು ಇವೆಲ್ಲ ಸಾಮಾನ್ಯ. ತ್ವಚೆಗೆ ಮೇಲಿಂದ ಏನನ್ನೇ ಹಚ್ಚಿ ಉಪಚಾರ ಮಾಡಿದರೂ ಹೆಚ್ಚಿನವು ತಾತ್ಕಾಲಿಕ ಪರಿಹಾರಗಳು. ಚರ್ಮಕ್ಕೆ ದೇಹದ ಒಳಗಿನಿಂದ ಪೋಷಣೆ ದೊರೆತರೆ ಮಾತ್ರವೇ ಕಳೆಯೂ ಹೆಚ್ಚುವುದಕ್ಕೆ ಸಾಧ್ಯ. ಹಾಗಾಗಿ ಊಟ ಬಲ್ಲವನಿಗೆ ವಯಸ್ಸೂ ಆಗುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಅಂದರೆ ಸರಿಯಾಗಿ ಊಟ ಮಾಡುವವರು ಚಿರಯೌವನಿಗರು ಎಂದಲ್ಲ, ಅವರಿಗೆ ಬೇಗ ವಯಸ್ಸಾದಂತೆ ಕಾಣುವುದಿಲ್ಲ ಎಂಬುದು ಅದರರ್ಥ. ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಾಯುವ ಜೀವಕೋಶ ಗಳನ್ನು ಮತ್ತೆ ಮತ್ತೆ ಸೃಷ್ಟಿಸಿಕೊಳ್ಳಲು ಸೂಕ್ತವಾದ ಆಹಾರ ಸೇವಿದಾಗ ಮಾತ್ರವೇ, ಚರ್ಮಕ್ಕಾಗುವ ಹಾನಿಯನ್ನು ತುಂಬಲು ಸಾಧ್ಯ. ಅದಕ್ಕಾಗಿ ಏನು ಮಾಡಬೇಕು?

ವಯಸ್ಸಾಗುವುದು ಸಾಮಾನ್ಯ ದೈಹಿಕ ಪ್ರಕ್ರಿಯೆ. ಆಂತರಿಕವಾಗಿ ಕಾಲಕ್ರಮೇಣ ವಯಸ್ಸಾಗು ವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಬಾಹ್ಯಸ್ವರೂಪದಲ್ಲಿ, ಅಂದರೆ ನಿದ್ದೆ ಸಾಕಾಗದೆ, ಪೋಷಣೆ ಕಡಿಮೆಯಾಗಿ, ಚಳಿ, ವಿಪರೀತ ಹವಾಮಾನ, ಧೂಳು, ಹೊಗೆಯಂಥ ಮಾಲಿನ್ಯಗಳಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಅಸಾಧ್ಯವೇನಲ್ಲ. ಜೀವನಶೈಲಿಯನ್ನು ಆರೋಗ್ಯಕರ ವಾಗಿ ಉಳಿಸಿಕೊಂಡು, ಖನಿಜಗಳು ಮತ್ತು ಜೀವಸತ್ವಗಳನ್ನು ಒಳಗೊಂಡ ಆಹಾರ ನಮ್ಮ ಬದುಕಿನ ಭಾಗವಾದರೆ ಚರ್ಮವನ್ನು ನಳನಳಿಸುವಂತೆ ಇರಿಸಿಕೊಳ್ಳಲು ಆಗುತ್ತದೆ. ಯಾವೆಲ್ಲಾ ಪೋಷಕಾಂಶಗಳು ಚಳಿಗಾಲದಲ್ಲಿ ನಮ್ಮ ಚರ್ಮಕ್ಕೆ ಹೆಚ್ಚಾಗಿ ಬೇಕು?

ಸೂಕ್ತ ಪೋಷಣೆ: ವಿಟಮಿನ್‌ ಎ ಅಥವಾ ಕೆರೋಟಿನಾಯ್ಡ್‌ನಂಥ ಸತ್ವಗಳು ಪ್ರಮುಖವಾಗಿ ಬೇಕು. ಕ್ಯಾರೆಟ್‌, ಗೆಣಸು, ದಪ್ಪ ಮೆಣಸು, ಪಪ್ಪಾಯಿ, ಮಾವು ಮುಂತಾದ ಹಣ್ಣು-ತರಕಾರಿಗಳಲ್ಲಿ ವಿಟಮಿನ್‌ ಎ ಯಥೇಚ್ಛವಾಗಿ ದೊರೆಯುತ್ತದೆ. ಇವುಗಳನ್ನು ಊಟದ ತಟ್ಟೆಗೆ ಸೇರಿಸಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡದಿದ್ದರಾಯಿತು.

Health Tips: ಮೊಟ್ಟೆಗಳ ಸೇವನೆ ಮಿತವಾಗಿದ್ದರೆ ಸುರಕ್ಷಿತ; ತಜ್ಞರ ಕಿವಿಮಾತು ಇಲ್ಲಿದೆ

ಲೈಕೋಪೇನ್:‌ ಟೊಮೇಟೊನಂಥ ಅಚ್ಚಕೆಂಪು ಬಣ್ಣದ ಹಣ್ಣು-ತರಕಾರಿಗಳಲ್ಲಿ ದೊರೆಯುವ ಸತ್ವವಿದು. ಗಾಯಗಳನ್ನು ಗುಣಪಡಿಸುವ, ಉರಿಯೂತವನ್ನು ತಗ್ಗಿಸುವ ಮತ್ತು ಕೊಲಾಜಿನ್‌ ಉತ್ಪತ್ತಿಮಾಡುವ ಸಾಮರ್ಥ್ಯವನ್ನು ಲೈಕೋಪೇನ್‌ಗಳು ಹೊಂದಿವೆ. ಚರ್ಮಕ್ಕಾಗುವ ಯಾವುದೇ ಹಾನಿಯನ್ನು ಗುಣಪಡಿಸಲು ಲೈಕೋಪೇನ್‌ ನೆರವು ಬೇಕು.

ವಿಟಮಿನ್‌ ಬಿ3: ಈರುಳ್ಳಿ, ಬೆಳ್ಳುಳ್ಳಿ, ಬಾಳೆಹಣ್ಣು, ಬಾರ್ಲಿ, ಓಟ್ಸ್‌ ಮುಂತಾದವುಗಳಿಂದ ದೊರೆಯುವ ಜೀವಸತ್ವವಿದು. ಚರ್ಮದ ಮೇಲೆ ಅತಿಯಾದ ಪಿಗ್‌ಮೆಂಟ್‌ಗಳನ್ನು ತಡೆಯಲು, ಸೂರ್ಯನ ಬಿಸಿಲಿನಿಂದಾಗುವ ಹಾನಿಯನ್ನು ಚರ್ಮ ಒಣಗುವುದನ್ನು ಕಡಿಮೆ ಮಾಡಲು ಅವಶ್ಯವಾಗಿಬೇಕಾದ ಪೋಷಣೆಯಿದು.

ವಿಟಮಿನ್‌ ಸಿ: ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ಕೊಲಾಜಿನ್‌ ಹೆಚ್ಚಿಸುವ ಅತಿ ಮುಖ್ಯ ಉತ್ಕರ್ಷಣ ನಿರೋಧಕವಿದು. ಚಳಿಗಾಲದ ಹುಳಿ ಹಣ್ಣುಗಳಲ್ಲಿ, ಪೇರಲೆ, ಕಿವಿ ಹಣ್ಣು, ಬ್ರೊಕೊಲಿ, ದಪ್ಪಮೆಣಸು- ಹೀಗೆ ಸಿ-ಜೀವಸತ್ವ ಇರುವಂಥ ಹಣ್ಣುತರಕಾರಿಗಳು ಬಹಳಷ್ಟಿವೆ.

ವಿಟಮಿನ್‌ ಡಿ: ತ್ವಚೆಯ ಜೀವಕೋಶಗಳ ಬೆಳವಣಿಗೆ ಮತ್ತು ಗುಣಪಡಿಸುವಲ್ಲಿ ಡಿ-ಜೀವಸತ್ವವೂ ಸಹಕಾರಿ. ಮಾತ್ರವಲ್ಲ, ಸೋಂಕುಗಳು ಕಾಡದಂತೆ ಚರ್ಮವನ್ನು ಕಾಪಾಡುತ್ತದೆ ಇದು. ಸೂರ್ಯರಶ್ಮಿಯ ಹೊರತಾಗಿ, ತೈಲಭರಿತ ಮೀನುಗಳಲ್ಲಿ, ಕೆಂಪು ಮಾಂಸ ಮತ್ತು ಮೊಟ್ಟೆಯ ಹಳದಿ ಭಾಗಗಳಲ್ಲಿ ಇದು ದೊರೆಯುತ್ತದೆ. ಚಳಿಯೆಂದು ಮುದುರಿ ಕೂರುವ ಬದಲು, ಬಿಸಿಲಿಗೆ ಒಡ್ಡಿಕೊಳ್ಳಿ.

ವಿಟಮಿನ್‌ ಇ: ಎಂಟು ಬೇರೆಬೇರೆ ವಸ್ತುಗಳು ಒಟ್ಟಾಗಿ ಸೇರಿ ಇ-ಜೀವಸತ್ವವನ್ನು ಪೂರ್ಣ ಗೊಳಿಸುತ್ತವೆ. ಇವೆಲ್ಲ ಸೇರಿ ವಿಟಮಿನ್‌ ಸಿ ಜೊತೆಗೂಡಿ ದೇಹದಲ್ಲಿನ ಮುಕ್ತ ರ್ಯಾಡಿಕಲ್‌ಗಳನ್ನು ನಿರ್ಬಂಧಿಸುತ್ತವೆ. ಸೂರ್ಯಕಾಂತಿ ಬೀಜ, ಬಾದಾಮಿ, ಅವಕಾಡೊ, ಕೆಲವು ಸಸ್ಯಜನ್ಯ ಎಣ್ಣೆಗಳು, ಸಾಲ್ಮನ್‌ನಂಥ ಮೀನುಗಳಲ್ಲಿ ವಿಟಮಿನ್‌ ಇ ಲಭ್ಯವಿದೆ.