ಬೆಂಗಳೂರು, ಫೆ. 6: ಮನುಷ್ಯ ಎಂದಮೇಲೆ ಆರೋಗ್ಯ ಸಮಸ್ಯೆ ಕಾಡುವುದು ಸಾಮಾನ್ಯ. ಆದರೆ ಕೆಲವು ಆರೋಗ್ಯ ಸಮಸ್ಯೆಗಳು (Health Tips) ನಮ್ಮ ಭವಿಷ್ಯದ ಆರೋಗ್ಯದ ಗಂಭೀರ ಸ್ಥಿತಿಯನ್ನು ಸೂಚಿಸುತ್ತವೆ. ಕೆಲವರು ಇದನ್ನು ಸಿರಿಯಸ್ ಆಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡುವವರೂ ಇದ್ದಾರೆ. ಹಾಗಾಗಿ ಯಾವೆಲ್ಲ ಆರೋಗ್ಯ ಸಮಸ್ಯೆ ಕಾಡಿದಾಗ ತಪ್ಪದೆ ವೈದ್ಯರಲ್ಲಿ ತಪಾಸಣೆ ಮಾಡಿಸಬೇಕು? ಯಾವ ಸಮಸ್ಯೆಗೆ ಮನೆಯಲ್ಲಿಯೇ ಕೆಲವು ಆರೈಕೆಗಳು ಸಾಕು? ಎನ್ನುವಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಡಾ. ಸುಮನ್ ತಿಳಿಸಿದ್ದಾರೆ. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ಜತೆ ಅವರು ಮಾತನಾಡಿದರು.
ಕೆಲವೊಮ್ಮೆ ದೀರ್ಘಕಾಲಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂತವರು ವೈದ್ಯರ ಬಳಿ ತೆರಳುತ್ತಾರೆ. ಆದರೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಆರೋಗ್ಯ ಬದಲಾವಣೆ ಕಂಡು ಬಂದರೆ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ವೈದ್ಯಕೀಯ ಸಲಹೆ ಅತ್ಯಗತ್ಯವಾಗುತ್ತದೆ. ಉದಾಹರಣೆಗೆ ಇತ್ತೀಚೆಗೆ ಪ್ರಜ್ಞೆ ತಪ್ಪಿ ಬೀಳುವುದು, ಮೆದುಳಿಗೆ ತಾತ್ಕಾಲಿಕವಾಗಿ ರಕ್ತ ಸಂಚಾರ ಕಡಿಮೆಯಾಗಿ ಪ್ರಜ್ಞೆ ಕಳೆದುಕೊಳ್ಳುವುದು, ರಕ್ತದೊತ್ತಡ ಹೀಗೆ ನಾನಾ ಸಮಸ್ಯೆ ಇದಕ್ಕೆ ಇರಬಹುದು. ಹಾಗಾಗಿ ಇಂತಹ ಸಮಸ್ಯೆ ಬಂದಾಗ ವೈದ್ಯರ ಬಳಿ ತೆರಳಬೇಕಾಗುತ್ತದೆ.
ವಿಡಿಯೊ ನೋಡಿ:
ಅದೇ ರೀತಿ ಅನಿರೀಕ್ಷಿತ ಉಸಿರಾಟ ಸಮಸ್ಯೆ, ಎದೆನೋವು ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯುವುದು ಅವಶ್ಯಕ. ಇದು ಶ್ವಾಸಕೋಶದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಇತ್ಯಾದಿ ಸಮಸ್ಯೆಯಿಂದ ಬರುವ ಸಾಧ್ಯತೆ ಇದೆ. ಅದೇ ರೀತಿ ಅತೀಯಾದ ರಕ್ತಸ್ರಾವ ಆದಾಗ ಕೂಡ ವೈದ್ಯಕೀಯ ನೆರವು ಅಗತ್ಯ. ಹೀಗಾಗಿ ಇದಕ್ಕೆಲ್ಲ ಯಾವುದೇ ಮನೆಯ ಔಷಧ ಉಪಚಾರಗಳು ಮಾಡದೇ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಮಾಡಬೇಕಾ?; ಇಂದಿನಿಂದಲೇ ಮಲಗುವ ಮುನ್ನ ಇಂತಹ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ
ಇತ್ತೀಚಿನ ದಿನಗಳಲ್ಲಿ ಎದೆನೋವನ್ನು ಸಾಮಾನ್ಯ ಎದೆನೋವು ಎಂದು ಕಡೆಗಣಿಸುವ ಹಾಗಿಲ್ಲ. ಹಾಗಾಗಿ ದೀರ್ಘ ಉಸಿರಾಟ ಸಮಸ್ಯೆ, ಕೈ ನೋವು, ಕೆಲಸ ಮಾಡುವಾಗ ಸ್ಥಿರತೆ ಕಳೆದುಕೊಳ್ಳುವುದು ಇತ್ಯಾದಿ ಸಂದರ್ಭದಲ್ಲಿ ವೈದ್ಯರ ಭೇಟಿ ಮಾಡಲೇಬೇಕು. ಕೆಲವೊಮ್ಮೆ ಸಾಮಾನ್ಯವಾಗಿ ಗ್ಯಾಸ್ಟ್ರಿಕ್ನಿಂದಲೂ ಎದೆನೋವು ಕಾಣಿಸಿಕೊಳ್ಳುತ್ತದೆ. ಹಾಗಂತ ಅದನ್ನು ನಿರ್ಲಕ್ಷ ಮಾಡಲು ಸಾಧ್ಯವಿಲ್ಲ.
ಈ ಕಾರಣಗಳಿಗೂ ವೈದ್ಯರ ಸಲಹೆ ಅಗತ್ಯ
- ಪದೇ ಪದೆ ತಲೆನೋವು ಬರುತ್ತಿದರೆ ನೀವಾಗಿಯೇ ಮಾತ್ರೆ ತೆಗೆದುಕೊಳ್ಳದೆ ವೈದ್ಯರನ್ನು ಸಂಪರ್ಕಿಸಿ.
- ಹೆಚ್ಚು ತೂಕ ಇಳಿಕೆಯಾಗಿದ್ದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿ ಮಾಡಿ.
- ಪದೇ ಪದೆ ಜ್ವರ ಬರುವುದು, ಅನಾರೋಗ್ಯಕ್ಕೆ ತುತ್ತಾಗುವುದು.
- ಹೊಟ್ಟೆನೋವು, ಹಸಿವು ಆಗದೆ ಇರುವುದು, ಜೀರ್ಣಕ್ರಿಯೆ ಸಮಸ್ಯೆ ಇತ್ಯಾದಿ.
- ಕೂದಲು ಉದುರುವುದು, ಸ್ಥಿರತೆ ಕಳೆದುಕೊಳ್ಳುವುದು ಇತ್ಯಾದಿ.