ಬೆಂಗಳೂರು, ಏ.04: ದೇಶದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಕರ್ನಾಟಕ ಪೊಲೀಸ್ ಇಲಾಖೆ (Karnataka police) ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಜಂಟಿಯಾಗಿ ಒಂದು ಮಹತ್ವದ ಹೆಜ್ಜೆ ಇಟ್ಟಿವೆ. ಬೆಂಗಳೂರಿನ (Bengaluru) ವಿವಿಧ ಭಾಗಗಳಲ್ಲಿ ಅಕ್ರಮವಾಗಿ ನೆಲೆಸಿದ್ದ 272 ಬಾಂಗ್ಲಾದೇಶಿ ಪ್ರಜೆಗಳನ್ನು (Bangla immigrants) ಯಶಸ್ವಿಯಾಗಿ ಪತ್ತೆಹಚ್ಚಿ, ಅವರನ್ನು ಅವರ ಸ್ವದೇಶಕ್ಕೆ ಗಡಿಪಾರು (Deportation) ಮಾಡಲಾಗಿದೆ. ಇದು ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಅತ್ಯಂತ ದೊಡ್ಡ ಮಟ್ಟದ ಗಡಿಪಾರು ಪ್ರಕ್ರಿಯೆ ಎಂದು ಗುರುತಿಸಲ್ಪಟ್ಟಿದೆ.
ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಐಟಿ ಹಬ್ಗಳು, ನಿರ್ಮಾಣ ಪ್ರದೇಶಗಳು ಮತ್ತು ಕಸ ವಿಲೇವಾರಿ ಘಟಕಗಳ ಸುತ್ತಮುತ್ತ ಅಕ್ರಮ ವಲಸಿಗರು ನೆಲೆಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಸಿಸಿಬಿ (CCB) ಮತ್ತು ಸ್ಥಳೀಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು.
ಈ ಪೈಕಿ 178 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಸೇರಿದ್ದಾರೆ. ಎಲ್ಲರನ್ನು ಪೊಲೀಸರು ಪತ್ತೆ ಮಾಡಿ ಒಟ್ಟಿಗೆ ಗಡಿಪಾರು ಮಾಡಿದ್ದಾರೆ. ಜೊತೆಗೆ ಸಿಸಿಬಿ ಪೊಲೀಸರು ಬಾಂಗ್ಲಾ ವಲಸಿಗರನ್ನು ಕರೆತರುತ್ತಿದ್ದವರ ಮೂಲಕ್ಕೆ ಕೈ ಹಾಕಿದ್ದಾರೆ.
ಇಂಧನ ಬಿಕ್ಕಟ್ಟು ಎಫೆಕ್ಟ್: ವಿದ್ಯುತ್ ಉಳಿತಾಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚಿದ ಬಾಂಗ್ಲಾದೇಶ
ಸಿಸಿಬಿ ಪೊಲೀಸರು ಇಡೀ ಬೆಂಗಳೂರಿನಾದ್ಯಂತ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಶುರು ಮಾಡಿದ್ದಾರೆ. ಸದ್ಯ ಗುರುತಿಸಲಾದ ಅಕ್ರಮ ವಲಸಿಗರನ್ನು ತಮ್ಮ ದೇಶಕ್ಕೆ ಬಿಡುವ ಕೆಲಸ ಮುಂದುವರಿಸಿದ್ದಾರೆ. ತ್ರಿಪುರಾ ಗಡಿಯಿಂದ ಬಿಎಸ್ಎಫ್ ಮೂಲಕ ಇವರನ್ನು ಗಡಿಪಾರು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ ಎಲೆಕ್ಷನ್ ಹಿನ್ನೆಲೆ ತ್ರಿಪುರಾ ಗಡಿಯಿಂದ ಗಡಿಪಾರು ಮಾಡಲಾಗುತ್ತಿದೆ.