ಬಳ್ಳಾರಿ, ಡಿ.22: ಮಹಿಳೆಯೊಬ್ಬರು ವಿಡಿಯೊ ಮಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಹುಸೇನ್ ನಗರದಲ್ಲಿ ನಡೆದಿದೆ. ಮುನ್ನಿ (23) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮದುವೆಗೆ ಪ್ರಿಯಕರ ಒಪ್ಪದಿದ್ದಕ್ಕೆ ಮಹಿಳೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಮಹಿಳೆಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದು, ಪತಿಯಿಂದ ದೂರವಿದ್ದಳು. ಈ ನಡುವೆ ಮೊಹಮ್ಮದ್ ಶೇಖ್ ಎಂಬಾತನ ಜತೆ ಸ್ನೇಹವಾಗಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಹೀಗಾಗಿ ತನ್ನನ್ನು ಮದುವೆ ಆಗುವಂತೆ ಮೊಹಮ್ಮದ್ ಶೇಖ್ಗೆ ಮುನ್ನಿ ಒತ್ತಾಯ ಮಾಡಿದ್ದಳು ಎನ್ನಲಾಗಿದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಇದೇ ಕಾರಣಕ್ಕೆ ಮುನ್ನಿ ಸಾವಿಗೀಡಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ದುಡುಕಿನ ನಿರ್ಧಾರ ಕೈಗೊಂಡಿರುವ ಮುನ್ನಿ, ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿ, ಕಣ್ಣೀರಿಡುತ್ತಲೇ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ಬಳ್ಳಾರಿಯ ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ನಾರಾ ಭರತ್ ರೆಡ್ಡಿ ಸಾಂತ್ವನ
ವಿಷಯ ತಿಳಿದು ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಗೆ ಶಾಸಕ ನಾರಾ ಭರತ್ ರೆಡ್ಡಿ ಭೇಟಿ ನೀಡಿ, ಪ್ರಕರಣದ ಕುರಿತಂತೆ ಸಿಪಿಐ ಅವರಿಂದ ಮಾಹಿತಿ ಪಡೆದು, ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಇದೇ ವೇಳೆ ಮೃತ ಮುನ್ನಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಭರತ್ ರೆಡ್ಡಿ, ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದ್ದಾರೆ.