ಬೆಳಗಾವಿ: ಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲ್ (countrymade pistols) ತಯಾರಿಸುತ್ತಿದ್ದ 13 ಆರೋಪಿಗಳ ಗ್ಯಾಂಗ್ವೊಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಮಾರುತಿ ಸುತಾರ, ಸೋಮನಾಥ ಚೌಗಲೆ, ಸಂತೋಷ ನಾಯಕ, ಮಾರುತಿ ಗುಡದ್ಯಾಗೋಳ, ಬಾಳು ನಾಯಕ, ಲಕ್ಷ್ಮಣ ಗುಜನಾಳ, ಬಸವರಾಜ ಸಾಲೋಟಗಿ, ಬಸವಂತ ಯರಮಾಳಕರ, ಲಕ್ಷ್ಮಣ ಗುರವ, ಮರಿಯಪ್ಪ ನಾಯಕ, ವಿಶ್ವನಾಥ ದೇಸಾಯಿ ಸೇರಿ 11 ಮಂದಿಯನ್ನು ಬಂಧಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದ್ದ ಕೊಲೆ ಕೇಸ್ನ ತನಿಖೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಕಂಟ್ರಿ ಪಿಸ್ತೂಲ್ನಿಂದ ಕೊಲೆ ಮಾಡಿರುವುದು ಗೊತ್ತಾಗಿತ್ತು. ಬಳಿಕ ಕಂಟ್ರಿ ಪಿಸ್ತೂಲ್ ಮೂಲ ಬೆನ್ನುಬಿದ್ದ ಪೊಲೀಸರಿಗೆ ಖಾನಾಪುರದ ಕಾಟಗಾಳಿ ಗ್ರಾಮದಲ್ಲಿ ಆರೋಪಿಗಳು 2024ರಿಂದ ಅಕ್ರಮವಾಗಿ ತಯಾರಿಸುತ್ತಿರುವ ಸ್ಫೋಟಕ ಅಂಶ ಬೆಳಕಿಗೆ ಬಂದಿತ್ತು.
ಆರೋಪಿ ಮಾರುತಿ ಸಿಂಗಲ್ ಲೋಡೆಡ್, ಡಬಲ್ ಲೋಡೆಡ್ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದು, ಇವುಗಳ ತಯಾರಿಕೆಗೆ ಆರೋಪಿ ಮರಿಯಪ್ಪ ನಾಯಕ ಹಣ ಕೊಡುತ್ತಿದ್ದ. ಮತ್ತೊಬ್ಬ ಆರೋಪಿ ವಿಶ್ವನಾಥ ದೇಸಾಯಿ ಬಂದೂಕಿನ ಬಿಡಿಭಾಗಗಳನ್ನು ಪೂರೈಸುತ್ತಿದ್ದ. ಜೊತೆಗೆ ಬುಕ್ ಸ್ಟಾಲ್ನಲ್ಲಿ ಬಂದುಕಿನ ಬಿಡಿಭಾಗಗಳು ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡಿದ್ದ. ಈತನಿಂದ ಬಂದೂಕಿನ 21 ಟ್ರಿಗರ್ಗಳು, 5 ಹೆಡ್ಗಳು, 15 ನಿಪ್ಪಲಗಳು, 1 ಸಿಲಿಂಗ್ ಬೆಲ್ಟ್, 34 ಮದ್ದು ತುಂಬಿದ ಪ್ಯಾಕೇಟ್, 499 ಸೀಸಿನ ಗೋಲಿಗಳು, 420 ಕೇಪಗಳು, 48 ಜೀವಂತ ಕಾಡತೂಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪರಿಚಯ; ವಿವಾಹವಾಗುವುದಾಗಿ ನಂಬಿಸಿ ದೈಹಿಕ ಕಿರುಕುಳ, 14.8 ಲಕ್ಷ ರುಪಾಯಿ ವಂಚನೆ
ಪಿಸ್ತೂಲ್ಗಳನ್ನು ಬೇಟೆಗೆ ಬಳಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಆರೋಪಿಗಳು ತಯಾರಿಸುತ್ತಿದ್ದ 1 ಹಾಗೂ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದ 8 ಕಂಟ್ರಿ ಪಿಸ್ತೂಲ್ ಸೇರಿ ಒಟ್ಟು 9 ಕಂಟ್ರಿ ಪಿಸ್ತೂಲ್ಗಳನ್ನು ಜಪ್ತಿ ಮಾಡಿದ್ದಾರೆ.