ಬೆಳಗಾವಿ: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಹಗರಣಕ್ಕೆ (Shivam Associates scam) ಸಂಬಂಧಿಸಿ ಸಿಐಡಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ. ಇದೀಗ ಪ್ರಕರಣದ ಪ್ರಮುಖ ಆರೋಪಿ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ನನ್ನು (Shivananda Neelannavar) ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೆಚ್ಚಿನ ಬಡ್ಡಿ ಆಮಿಷ ತೋರಿ ಬೆಳಗಾವಿಯಲ್ಲಿ ಮಾಜಿ ಸೈನಿಕರು ಹಾಗೂ ಸಾರ್ವಜನಿಕರಿಂದ ಸಾವಿರಾರು ಕೋಡಿ ಹಣ ಸಂಗ್ರಹಿಸಿರುವ ಆರೋಪ ಶಿವಾನಂದ್ ನೀಲಣ್ಣವರ್ ವಿರುದ್ಧ ಕೇಳಿಬಂದಿದೆ. ಹಣ ದುರಪಯೋಗದ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಿವಾನಂದ್ ನೀಲಣ್ಣವರ್ನನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿತ್ತು. ಶಿವಂ ಅಸೋಸಿಯೇಟ್ಸ್ ವಿರುದ್ಧದ 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದೆ.
ಸಾಕ್ಷಿ ನಾಶಕ್ಕೆ ಯತ್ನ; ಮಹಾರಾಷ್ಟ್ರದ ಯುವಕ ಬಂಧನ
ಇದೇ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುತ್ತಿದ್ದ ಮಹಾರಾಷ್ಟ್ರ ಮೂಲದ ಓಂಕಾರ ಎಂಬ ಯುವಕನನ್ನು ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಯುವಕ ಪ್ರಕರಣದ ತನಿಖೆಗೆ ಅಡ್ಡಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಸಾಕ್ಷ್ಯಗಳನ್ನು ನಾಶ ಮಾಡಲು ಮುಂದಾಗಿದ್ದ ಎನ್ನಲಾಗಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈತನ ಹಿಂದೆ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆಯೇ ಎಂಬ ಕೋನದಲ್ಲೂ ತನಿಖೆ ನಡೆಸುತ್ತಿದ್ದಾರೆ.
ಯಾರು ಈ ಶಿವಾನಂದ ನೀಲಣ್ಣವರ್?
ವಂಚನೆ ಆರೋಪದಡಿ ಬಂಧನವಾಗಿರುವ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಮೂಲತಃ ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದವ. ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಕೆಇಬಿನಲ್ಲಿ ಕೆಲಸ ಮಾಡುತ್ತಿರುವಾಗಲೇ ಸಾವನ್ನಪ್ಪಿದ್ದರಿಂದ ತಂದೆಯ ಕೆಲಸ ಈತನ ಸಹೋದರನಿಗೆ ಲಭಿಸಿದ್ದರಿಂದ ಇಡೀ ಕುಟುಂಬ ಬೆಳಗಾವಿಗೆೆ ಬಂದು ನೆಲೆಸಿತ್ತು.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಈತ ರೂರಲ್ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಆರಂಭಿಸಿ ನಂತರ ಆಟೋದಲ್ಲಿ ಐಸ್ಕ್ರೀಂ ಮಾರುತ್ತಿದ್ದ. ಕೊನೆಗೆ ಈತನೇ ಐಸ್ಕ್ರೀಂ ಫ್ಯಾಕ್ಟರಿ ಕೂಡ ತೆರೆದಿದ್ದ. 2012 ರಿಂದ ಸ್ಟಾಕ್ ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿ 15 ಲಕ್ಷ ಕಳೆದುಕೊಂಡಿದ್ದ. ಸ್ಟಾಕ್ ಮಾರ್ಕೆಟ್ನ ಆರ್ಥಿಕ ವಹಿವಾಟು ಗಮನಿಸಿ ಸ್ವತಃ ಒಂದು ಅಕ್ಯೂಮೆನ್ ಎಂಬ ಆ್ಯಪ್ ಪ್ರಾರಂಭಿಸಿ ಸಾವಿರಾರು ಕೋಟಿ ಹಣ ಸಂಪಾದಿಸಿದ್ದಾನೆ.
ಇಲ್ಲಿಂದ ಆತನ ಅದೃಷ್ಟ ಕುಲಾಯಿಸಿದೆ. ಹಲವು ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದಾನೆ ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ. ಅಲ್ಲದೇ ಪುಣೆ, ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದ ಶಿವಾನಂದ ನೀಲಣ್ಣವರ್ ತಮ್ಮ ಅತಿರೇಕದ ಮಾತಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ. ಹಣ ವಂಚನೆ ಆರೋಪದಡಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ ನೀಲಣ್ಣವರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.