ಬೆಳಗಾವಿ: ಉದ್ಯಮಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 15.45 ಕೋಟಿ ರೂಪಾಯಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಅಜಿತ್ ಗೋಪಾಲಕೃಷ್ಣ ಅವರನ್ನು ಫೆಬ್ರವರಿಯಲ್ಲಿ ಡಿಜಿಟಲ್ ಅರೆಸ್ಟ್ (Belagavi Digital arrest) ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಹೈದರಾಬಾದ್ನಲ್ಲಿ ಬಂಧಿಸಲಾಗಿದೆ.
ಉದ್ಯಮಿ ಬಳಿ ಹಂತ ಹಂತವಾಗಿ ಬರೋಬ್ಬರಿ 15.45 ಕೋಟಿ ರೂಪಾಯಿ ಹಣವನ್ನು ಅವರ ಬ್ಯಾಂಕ್ ಖಾತೆಯಿಂದ ವಂಚಕರು ವರ್ಗಾಯಿಸಿಕೊಂಡಿದ್ದರು. ಈ ಕುರಿತು ಬೆಳಗಾವಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಕಮಾಂಡ್ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದರು.
ತನಿಖೆ ನಡೆಸಿದ ಪೊಲೀಸರು, ಹೈದರಾಬಾದ್ ಮೂಲದ ವೆಂಕದೋತ ಶರತ್ ನಾಯಕ್ ಮತ್ತು ದೇಗಾವತ ಶ್ರೀಪಾದ ನಾಯಕ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳಿಂದ ಎರಡು ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರಿಂದ ಹೆಚ್ಚಿನ ತನಿಖೆ ಮುಂದುವರಿದಿದೆ.
ಏನಿದು ಪ್ರಕರಣ?
ಬೆಳಗಾವಿಯ ತಿಲಕವಾಡಿಯ ಅಜಿತ ಸರಾಫ್ ಎಂಬುವವರಿಗೆ ಸಿಬಿಐ ಡೈರೆಕ್ಟರ್ ಕೆ. ಸುಬ್ರಮಣ್ಯಂ ಹೆಸರಿನಲ್ಲಿ ಕರೆ ಮಾಡಿದ್ದ ವಂಚಕರು, ನಾವು ವಿಮಾನಯಾನ ಕಂಪನಿಯೊಂದರ ಸಿಇಒರನ್ನು ಬಂಧಿಸಿದ್ದೇವೆ. ಈ ಪ್ರಕರಣದ ತನಿಖೆಯಲ್ಲಿ ನಿಮ್ಮ ಕೆನರಾ ಬ್ಯಾಂಕ್ ಖಾತೆಯಿಂದ 25 ಲಕ್ಷ ರೂ. ಅಕ್ರಮ ಹಣ ವರ್ಗಾವಣೆ ಮಾಡಿ, 5 ಲಕ್ಷ ರೂ. ಕಮಿಷನ್ ಪಡೆದಿದ್ದಾಗಿ ಬಂಧಿತ ಸಿಇಒ ಹೇಳಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿ ನೀವು ಆರೋಪಿ, ಅರೆಸ್ಟ್ ಮಾಡುತ್ತೇವೆ ಎಂದು ಹೆದರಿಸಿದ್ದರು.
ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಆರೋಪ: ಟೀಂ ಲೀಡ್ ಸೇರಿ 6 ಜನ ಟೆಕ್ಕಿಗಳ ಬಂಧನ
ಮೊದಲಿಗೆ ನಿಮ್ಮ ಹಣ ಬೇರೆ ಖಾತೆಗೆ ವರ್ಗಾಯಿಸಿ ಎಂದು ವೃದ್ದ ಉದ್ಯಮಿಗೆ ವಂಚಕರು ಅಕೌಂಟ್ ನಂಬರ್ ಕೊಟ್ಟಿದ್ದು, ತನಿಖೆ ಮುಗಿದ ಬಳಿಕ ಮತ್ತೆ ಹಣ ಮರಳಿಸುತ್ತೇವೆ ಎಂದು ತಿಳಿಸಿದ್ದಾರೆ. ಹೀಗೆ ಫೆ. 7ರಿಂದ ಮಾ.9ರ ವರೆಗೆ ಹಂತಹಂತವಾಗಿ ಒಟ್ಟು 15.45 ಕೋಟಿ ರೂ.ಗಳನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದು ವಂಚನೆ ಮಾಡಿದ್ದಾರೆ. ಈ ಬಗ್ಗೆ ನಗರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.