Assault case: ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ಪ್ರಕರಣ; ಪವಿತ್ರಾ ಗೌಡ ರೀತಿ ಸ್ಕೆಚ್ ಹಾಕಿದ 17 ವರ್ಷದ ಹುಡುಗಿ ಅರೆಸ್ಟ್!
Assault case: ಬಂಧನವಾಗಿರುವ 17 ವರ್ಷದ ಹುಡಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಹಲ್ಲೆಗೊಳಗಾದ ಯುವಕ ಕುಶಾಲ್ನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆದರೆ, ಎರಡು ವರ್ಷದ ಪ್ರೀತಿ ಕೆಲ ದಿನಗಳ ಹಿಂದೆಯಷ್ಟೇ ಬ್ರೇಕ್ ಅಪ್ ಆಗಿತ್ತು. ಯುವಕ ಅಶ್ಲೀಲ ಮೆಸೇಜ್ ಕಳುಹಿಸಿದ್ದರಿಂದ ಸ್ನೇಹಿತರಿಗೆ ಹೇಳಿ ಹಲ್ಲೆ ಮಾಡಿಸಿದ್ದಾಳೆ.


ಬೆಂ.ಗ್ರಾಮಾಂತರ: ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ (Assault case) ಸಂಬಂಧಿಸಿ ಕೇಸ್ನ ಸೂತ್ರಧಾರಿ 17 ವರ್ಷದ ಹುಡಗಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಮೆಸೇಜ್ ಮಾಡಿದ್ದರಿಂದ ಈ ವಿಚಾರವನ್ನು ತನ್ನ ಗೆಳೆಯನಿಗೆ ಹುಡುಗಿ ತಿಳಿಸಿದ್ದಳು. ಇದರಿಂದ ಆತ, ತನ್ನ ಸ್ನೇಹಿತರ ಜತೆಗೂಡಿ ಯುವಕನನ್ನು ಅಪಹರಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ.
ಬಂಧನವಾಗಿರುವ 17 ವರ್ಷದ ಹುಡಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಹಲ್ಲೆಗೊಳಗಾದ ಯುವಕ ಕುಶಾಲ್ನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಹುಡುಗಿ ಶಾಲೆ ಮುಗಿಸಿಕೊಂಡು ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಪ್ರೇಮಿಗಳ ನಡುವೆ ಬಿರುಕು ಮೂಡಿತ್ತು. ಎರಡು ವರ್ಷದ ಪ್ರೀತಿ ಕೆಲ ದಿನಗಳ ಹಿಂದೆಯಷ್ಟೇ ಬ್ರೇಕ್ ಅಪ್ ಆಗಿತ್ತು. ಈ ನಡುವೆ ಯವತಿಗೆ ಬೇರೊಬ್ಬ ಯುವಕನ ಪರಿಚಯವಾಗಿತ್ತು. ಹೀಗಾಗಿ ಯುವಕ ಕುಶಾಲ್ ಖಾಸಗಿ ಕ್ಷಣದ ಫೋಟೋಗಳನ್ನು ವೈರಲ್ ಮಾಡುವುದಾಗಿ ಹುಡುಗಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ.
ಈ ವಿಚಾರವನ್ನು ಹುಡುಗಿ ತನ್ನ ಗೆಳೆಯನ ಮುಂದೆ ಹೇಳಿದ್ದಾಳೆ. ಅಲ್ಲದೆ, ಕುಶಾಲ್ನನ್ನು ಅಪಹರಿಸುವಂತೆ ಹುಡುಗಿ ತನ್ನ ಸ್ನೇಹಿತರಿಗೆ ಹೇಳಿದ್ದಾಳೆ. ಅದರಂತೆ ಹುಡುಗಿಯ ಸ್ನೇಹಿತರು, ಕುಶಾಲ್ನನ್ನು ಸಂಪರ್ಕಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಬಾ ಅಂತ ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಯುವಕ ಕುಶಾಲ್ನನ್ನು ಹುಡುಗಿಯ ಸ್ನೇಹಿತರು ಅಪಹರಿಸಿದ್ದಾರೆ.
ಹುಡುಗಿ ಎದುರೇ ಬಟ್ಟೆ ಬಿಚ್ಚಿಸಿ ಹಲ್ಲೆ
ಕುಶಾಲ್ನನ್ನು ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಕಾರಿನಲ್ಲಿ ಹುಡುಗಿಯೂ ಇದ್ದಳು. ಕಾರ್ನಲ್ಲಿ ಹುಡುಗಿ ಮುಂದೆಯೇ ಆರೋಪಿಗಳು ಕುಶಾಲ್ ಮೇಲೆ ಹಲ್ಲೆ ಮಾಡಿದ್ದಾರೆ. ಹಾಡು ಹೇಳುವಂತೆ ಒತ್ತಾಯಿಸಿದ್ದಾರೆ. ಕುಶಾಲ್ನ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ.
ಪ್ರಕರಣ ಸಂಬಂಧ ಹುಡುಗಿ ಸೇರಿದಂತೆ 11 ಜನರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ 8 ಜನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿಗಳಾದ ಶಶಾಂಕ್ ಗೌಡ, ಸಲ್ಮಾನ್, ಯಶ್ವಂತ್, ವಿದ್ಯಾರ್ಥಿಗಳಾದ ತೇಜಸ್, ರಾಕೇಶ್, ರಾಹುಲ್ ಮತ್ತು ಹೇಮಂತ್ ಬಿಡುಗಡೆಯಾದವರು. ಆರೋಪಿ ಹೇಮಂತ ಈ ಹಿಂದೆ ಹಲವು ಬಾರಿ ಹಲ್ಲೆ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಬಂದಿದ್ದಾನೆ.
ಗೃಹ ಸಚಿವರು ಹೇಳಿದ್ದೇನು?
ಪ್ರಕರಣ ಸಂಬಂಧ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ. ರೇಣುಕಾಸ್ವಾಮಿ ಪ್ರಕರಣ ಪ್ರೇರಣೆ ಆಗುತ್ತಿದೆಯಾ ಅನ್ನೋದು ಗೊತ್ತಿಲ್ಲ. ಆ ಬಗ್ಗೆ ಮನಶ್ಶಾಸ್ತ್ರಜ್ಞರು ಅಧ್ಯಯನ ಮಾಡಿ ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.