ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಭಾರಿ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಎಲೆಕ್ಟ್ರಿಕ್ ಸ್ಕೂಟರ್ (EV Scooter Scam) ಮಾರಾಟ ನೆಪದಲ್ಲಿ ಗ್ರಾಹಕರಿಗೆ ಬರೋಬ್ಬರಿ 35 ಕೋಟಿ ರೂ. ವಂಚಿಸಿರುವ ಗಂಭೀರ ಆರೋಪ ನಗರದ ಜಾಲಹಳ್ಳಿಯಲ್ಲಿರುವ ಆಪ್ಕಿ ಇವಿ’ (Aapki EV) ಶೋ ರೂಮ್ ಮಾಲೀಕರ ವಿರುದ್ಧ ಕೇಳಿಬಂದಿದೆ.
ಸುಮಾರು 3,250 ಜನರಿಗೆ ಸಬ್ಸಿಡಿ ಆಸೆ ತೋರಿಸಿ ಸಾಲದ ಸುಳಿಗೆ ಸಿಲುಕಿಸಲಾಗಿದೆ. ಕೇವಲ 20,000 ರೂ. ಡಿಪಾಸಿಟ್ ಮಾಡಿದರೆ ಸಾಕು, ಉಳಿದ ಹಣ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಪಾವತಿಯಾಗುತ್ತದೆ ಎಂದು ನಂಬಿಸಲಾಗಿತ್ತು. ಸ್ಕೂಟರ್ ನೀಡುವ ನೆಪದಲ್ಲಿ ಗ್ರಾಹಕರಿಂದ ಆಧಾರ್, ಪಾನ್ ಕಾರ್ಡ್ ಪಡೆದ ಶೋರೂಂ ಮಾಲೀಕರು, ಗ್ರಾಹಕರಿಗೆ ತಿಳಿಯದಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಮೂಲಕ ಲೋನ್ ಮಾಡಿಸಿದ್ದಾರೆ.
ಕೇವಲ 35,000 ರೂ. ಬೆಲೆಬಾಳುವ ಸಾಧಾರಣ ಇವಿ ಬೈಕ್ಗೆ ಬರೋಬ್ಬರಿ 1.50 ಲಕ್ಷ ರೂಪಾಯಿ ಲೋನ್ ಮಾಡಿಸಿ ಬ್ಯಾಂಕ್ನಿಂದ ಹಣ ಪಡೆದುಕೊಳ್ಳಲಾಗಿದೆ. ಈ ವಂಚನೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಮ್ಯಾನೇಜರ್ ಕೂಡ ಭಾಗಿಯಾಗಿದ್ದು, ಗ್ರಾಹಕರ ಅನುಮತಿಯಿಲ್ಲದೆ ಲೋನ್ ಮಂಜೂರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಾಸನದಲ್ಲಿ ಗ್ರಾಹಕರ 3 ಕೋಟಿಗೂ ಹೆಚ್ಚು ಹಣದೊಂದಿಗೆ ಬ್ಯಾಂಕ್ ಮ್ಯಾನೇಜರ್ ಎಸ್ಕೇಪ್; ಸಾಲದ ಹೆಸರಲ್ಲಿ ವಂಚನೆ!
ತಮ್ಮ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಇರುವುದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕರು ಇಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂ.ಜಿ. ರಸ್ತೆವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿ ಪ್ರತಿಭಟಿಸಿ, ಆರೋಪಿಗಳಾದ ರವಿ ಹಾಗೂ ಹನುಮಂತರಾಜು ಅವರನ್ನು ಬಂಧಿಸಿ, ತಮಗೆ ನ್ಯಾಯಕೊಡಿಸುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಬಾಗಲಗುಂಟೆ ಮತ್ತು ಪೀಣ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಗಲಗುಂಟೆ ಠಾಣಾಧಿಕಾರಿಗಳು, ಶೀಘ್ರವೇ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.