ಬೆಂಗಳೂರು: ಪ್ರೇಯಸಿಯ ಮನೆಯಲ್ಲೇ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ (Bengaluru News) ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ನಡೆದಿದೆ. ಮೃತ ಯುವಕನನ್ನು ಕಿರಣ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಮತ್ತು ಯುವತಿ ನಡುವೆ ಸ್ನೇಹವಾಗಿ, ಅದು ನಂತರ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.
ಇಂದು ಯುವತಿಯ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಿರಣ್, ಮಾತನಾಡಲೆಂದು ಆಕೆಯ ಮನೆಗೆ ತೆರಳಿದ್ದಾನೆ. ಮನೆಗೆ ಪೆಟ್ರೋಲ್ ತೆರಳಿದ್ದ ಯುವಕ, ಯುವತಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಮಾತಿಗೆ ಮಾತು ಬೆಳೆದಾಗ ತಾನು ತಂದಿದ್ದ ಪೆಟ್ರೋಲ್ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ ಕಿರುಚಾಡುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ ಯುವತಿ ಸಣ್ಣಪುಟ್ಟ ಸುಟ್ಟಗಾಯಗಳಾಗಿವೆ.
ಇನ್ನು ಬೆಂಕಿಯ ತೀವ್ರತೆಗೆ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ
ಬೆಂಗಳೂರು: ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಬಿ.ಟೆಕ್ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿರುವುದು ಬೆಂಗಳೂರಿನಲ್ಲಿ ನಡೆದಿದೆ. ಒಡಿಶಾ ಮೂಲದ ಚಿನ್ಮಯ್ ಪ್ರಸಾದ್ ಸಾಹೋ ನಾಪತ್ತೆಯಾದ ಯುವಕ.
ಬಿ.ಟೆಕ್ ಓದಿಕೊಂಡಿರುವ ಚಿನ್ಮಯ್ ತನ್ನ ಗೆಳತಿಯೊಂದಿಗೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಯುವಕ ಮತ್ತು ಯುವತಿ ಒಟ್ಟಿಗೆ ವಾಸವಾಗಿದ್ದು, ಕೆಲ ದಿನಗಳ ಹಿಂದೆ ಯುವಕ ಚಿನ್ಮಯ್ ಮೊಬೈಲ್ಗೆ ಆತನದ್ದೇ ಖಾಸಗಿ ಫೋಟೋಗಳು ಬಂದಿತ್ತು. ಸೈಬರ್ ವಂಚಕರು, ಇನ್ನೂ ಹಲವು ಖಾಸಗಿ ಫೋಟೋಗಳಿವೆ. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಬಾರದು ಅಂದರೆ ನಾವು ಹೇಳಿದಷ್ಟು ಹಣ ಕೊಡಬೇಕು ಎಂದು ಬೆದರಿಸಿದ್ದರು.
ಇದರಿಂದ ನೊಂದಿದ್ದ ಯುವಕ, ಏ.15ರಂದು ಕಸ ಹಾಕಲು ಹೋದವನು ಮನೆಯಿಂದ ನಾಪತ್ತೆಯಾಗಿದ್ದಾನೆ. ಯಾರಾದರೂ ಕಿಡ್ನ್ಯಾಪ್ ಮಾಡಿದ್ರಾ? ಅಥವಾ ತಾನೇ ಎಲ್ಲಾದರೂ ಹೋಗಿದ್ದಾನಾ ಎಂಬುದರ ಬಗ್ಗೆ ಹುಳಿಮಾವು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.