ಆನೇಕಲ್: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder case) ಮಾಫಿ ಸಾಕ್ಷಿಯಾಗಿ ಪ್ರಕರಣದಿಂದ ಪಾರಾಗಲು ಪ್ರಯತ್ನಿಸುತ್ತಿದ್ದ 14ನೇ ಆರೋಪಿ ಪ್ರದೋಷ್ನ ಕಳ್ಳಾಟವೊಂದು ಇದೀಗ ಬಯಲಾಗಿದೆ. ಇದಕ್ಕೆ ಸಂಬಂಧಿಸಿ ಆರೋಪಿ ಪ್ರದೋಷ್ (Pradosh) ವಿರುದ್ಧ ದೂರು ದಾಖಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಿಗೆ ವಕೀಲರು ಹಾಗೂ ಕುಟುಂಬದವರ ಜೊತೆ ಮಾತನಾಡಲು 3 ನಂಬರ್ಗಳನ್ನು ಕೊಡಲಾಗುತ್ತದೆ. ವಕೀಲರು ಹಾಗೂ ಕುಟುಂಬದವರ ಜತೆ ಮಾತನಾಡಲು ಅವಕಾಶ ಕೊಡುವ ನಂಬರ್ ಅನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆ. ಈ ನಂಬರ್ಗಳನ್ನು ನಮೂದು ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಮೌನೇಶ್.ಎಚ್.ಕೋರಿ ಎಂಬ ಸಿಬ್ಬಂದಿಗೆ ವಹಿಸಲಾಗಿತ್ತು.
ಆರೋಪಿ ಪ್ರದೋಷ್ ಬೇರೆ ಕೈದಿ ಹೆಸರಿನಲ್ಲಿ ನಂಬರ್ ಪಡೆದಿದ್ದ. ಈ ನಂಬರ್ ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಹಾಯ ಮಾಡಿದ್ದ. ಅಲ್ಲದೇ ವಕೀಲರ ನಂಬರ್ ಎಂದು ನಮೂದಿಸಿ ಪತ್ನಿಯ ಜತೆ ಮಾತನಾಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಸದ್ಯ ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೌನೇಶ್ ಹಾಗೂ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ.