ಬೆಂಗಳೂರು, ಆ. 24: ಪ್ರಸಕ್ತ ಸಾಲಿನ (2026-27) ಕರ್ನಾಟಕ ಧನ ವಿನಿಯೋಗ ವಿಧೇಯಕದ ಅಡಿ ಪೂರಕ ಅಂದಾಜುಗಳ 7,042.69 ಕೋಟಿ ರೂ. ಮೊತ್ತದ ಮೊದಲನೆ ಕಂತಿನ ಪ್ರಸ್ತಾವನೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ಅನುಮೋದನೆ ದೊರೆಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನ ಮಂಡಲದ (Karnataka Monsoon session) ಉಭಯ ಸದನಗಳಲ್ಲಿ ಪ್ರಸ್ತಾವನೆಯನ್ನು ಮಂಡಿಸಿ ವಿವರಿಸಿದರು.
ಇದರಲ್ಲಿ 4,324.35 ಕೋಟಿ ರೂ. ರಾಜಸ್ವ ವೆಚ್ಚವಾಗಿದ್ದು, 2718.35 ಕೋಟಿ ರೂ. ಬಂಡವಾಳ ವೆಚ್ಚವಾಗಿದೆ. ಬರದಿಂದ ಸಂಕಷ್ಟದಲ್ಲಿರುವ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಜಲಧಾರೆ- ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂ.ನಂತೆ ಒಟ್ಟು 289 ಕೋಟಿ ರೂ. ಅನುದಾನ ಹಾಗೂ ಬೆಂಗಳೂರು ನಗರದ ರಸ್ತೆ ಅಭಿವೃದ್ಧಿಗಾಗಿ ಮೂಲ ಸೌಕರ್ಯ ಬಂಡವಾಳದಲ್ಲಿ 1 ಸಾವಿರ ಕೋಟಿ ರೂ.ಗಳ ಬಿಡುಗಡೆಯನ್ನು ಒಳಗೊಂಡಿದೆ.
Eshwar B Khandre: ಕಲುಷಿತ ನೀರು ಪೂರೈಸಿದರೆ ಕಠಿಣ ಕ್ರಮ: ಈಶ್ವರ ಖಂಡ್ರೆ
ಮುಖ್ಯಮಂತ್ರಿಗಳ ಮಂಡಿಸಿದ ಪೂರಕ ಅಂದಾಜುಗಳ ಪ್ರಸ್ತಾವನೆಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಯೋಜನೆಗೆ 2,918 ಕೋಟಿ ರೂ.ಗಳು, ಭಾರತ್ ಜೋಡೋ ಯುವ ಸಂಘಗಳಿಗೆ 781 ರೂ., ಅಮೃತ ಯೋಜನೆಯಲ್ಲಿ 708 ಕೋಟಿ ರೂ., ರಸ್ತೆ ಸಾರಿಗೆ ನಿಗಮದ ಸರ್ಕಾರಿ ಮೋಟರ್ ವಾಹನ ತೆರಿಗೆ ಷೇರು ಬಂಡವಾಳ ಬದಲಾವಣೆಗೆ 193.61 ಕೋಟಿ, ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಅಭಿಯಾನಕ್ಕೆ 152.72 ಕೋಟಿ, ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆ 93 ಕೋಟಿ, ವಿಶ್ವೇಶ್ವರಯ್ಯ ಜಲನಿಗಮ 91 ಕೋಟಿ, ಕೆಕೆಆರ್ ಟಿಸಿ ಬಸ್ ಖರೀದಿ ಅನುದಾನ 96 ಕೋಟಿ ಇತರೆ ಯೋಜನೆಗಳಿಗೆ 738 ಕೋಟಿ ರೂ.ಗಳು ಒಳಗೊಂಡಿದ್ದು, ಉಭಯ ಸದನಗಳಲ್ಲಿ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಹಬ್ಬಗಳ ಸಂಭ್ರಮದ ಜತೆಗೆ ಸೌಹಾರ್ದತೆ, ಕಾನೂನಿನ ಗೌರವವೂ ಅಗತ್ಯ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗಣೇಶ ಚತುರ್ಥಿ, ಈದ್ ಮಿಲಾದ್ ಸೇರಿದಂತೆ ಪ್ರತಿಯೊಂದು ಹಬ್ಬ ಮತ್ತು ಉತ್ಸವವನ್ನು ಎಲ್ಲರೂ ಅತ್ಯಂತ ಸಂಭ್ರಮದಿಂದ ಆಚರಿಸೋಣ. ಆದರೆ ನಮ್ಮ ಆಚರಣೆಗಳು ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗದಂತೆ ಹಾಗೂ ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳು ಮತ್ತು ಕಾನೂನಿನ ವ್ಯಾಪ್ತಿಯಲ್ಲಿಯೇ ಇರಬೇಕು ಎಂದು ಮನವಿ ಮಾಡುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಬ್ಬದ ಸಂದರ್ಭಗಳಲ್ಲಿ ಡಿಜೆ ಮತ್ತು ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಪ್ರತಿಯೊಬ್ಬರಿಗೂ ಒಂದೇ ಆಗಿದ್ದು, ಸಾರ್ವಜನಿಕರಿಗೆ ಶಬ್ದ ಮಾಲಿನ್ಯದಿಂದ ಅಡಚಣೆಯಾಗಿ '112' ತುರ್ತು ಸಂಖ್ಯೆಗೆ ದೂರು ನೀಡುವಂತಹ ಸನ್ನಿವೇಶ ನಿರ್ಮಾಣವಾಗಬಾರದು.
ಮಹಾಪುರುಷರ ಜಯಂತಿಗಳನ್ನು ಆಚರಿಸುವಾಗ ಕೇವಲ ದೊಡ್ಡ ಧ್ವನಿವರ್ಧಕಗಳ ಶಬ್ದದ ವೈಭವಕ್ಕೆ ಸೀಮಿತವಾಗದೆ, ಅವರ ವಿಚಾರ, ಸಿದ್ಧಾಂತ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ನಮ್ಮ ನಾಡಿನ ಉತ್ತಮ ಸಂಪ್ರದಾಯ ಮತ್ತು ಸೌಹಾರ್ದತೆಯನ್ನು ಮುಂದಿನ ಪೀಳಿಗೆಗೆ ಸರಿ ದಾರಿಯಲ್ಲಿ ತಲುಪಿಸೋಣ. ನಿಯಮಗಳನ್ನು ಗೌರವಿಸಿ, ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಶಾಂತಿಯುತವಾಗಿ ಸಂಭ್ರಮಿಸೋಣ ಎಂದು ತಿಳಿಸಿದ್ದಾರೆ.