ಬೆಂಗಳೂರು, ಮಾರ್ಚ್ 04: ಕೆಲ ತಿಂಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿ (Lakkundi) ಗ್ರಾಮದಲ್ಲಿ ನಿಧಿ ಪತ್ತೆಯಾದ ವಿಚಾರ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ರಾಜಧಾನಿ ಬೆಂಗಳೂರಿನ (Bengaluru) ಅಪಾರ್ಟ್ಮೆಂಟ್ (Apartment) ಬುಡದಲ್ಲೇ ಚಿನ್ನದ ನಿಧಿ (golden treasure) ಅಡಗಿದೆ ಎಂದು ಕಿಡಿಗೇಡಿಗಳು ಭಾರೀ ಪ್ರಮಾಣದಲ್ಲಿ ಅಗೆದಿರುವುದು ಪತ್ತೆಯಾಗಿದೆ. ಅಪಾರ್ಟ್ಮೆಂಟ್ ಮಾಲೀಕ ಸುಧಾಕರ್ ನಾಯ್ಡು ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ HSR ಲೇಔಟ್ ಠಾಣೆ ವ್ಯಾಪ್ತಿಯ ಎಳ್ಳುಕುಂಟೆ ಬಳಿ ಹಲವು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಇದೆ. ಇಲ್ಲಿ ಪ್ರತಿ ವರ್ಷ ಬಸವೇಶ್ವರ ಜಾತ್ರೆ ಮಹೋತ್ಸವ ಮಾಡುತ್ತಾರೆ. ದೇವಸ್ಥಾನಕ್ಕೆ ಅಟ್ಯಾಚ್ ಆಗಿರುವ ಅಪಾರ್ಟ್ಮೆಂಟ್ ಕೆಳಗಡೆ ನಿಧಿ ಅಡಗಿದೆ ಎನ್ನುವ ಸುದ್ದಿ ಇದೀಗ ಸಂಚಲನ ಮೂಡಿಸಿದೆ. ಈಗಲೂ ಇಲ್ಲಿನ ಹಳೆಯ ಶಿಲೆಗಳನ್ನು ಸ್ಥಳೀಯ ನಿವಾಸಿಗಳು ಪೂಜೆ ಮಾಡುತ್ತಾರೆ. ಪೂಜೆ ಮಾಡುವ ಸ್ಥಳಕ್ಕೆ ಅಟ್ಯಾಚ್ ಆಗಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲಾಗಿದೆ. ಇದೀಗ ಕೆಲ ಕಿಡಿಗೇಡಿಗಳು ನಿಧಿಯಾಸೆಗೆ 900 ವರ್ಷದ ದೇವಸ್ಥಾನದ ಕೆಳಗೆ ಅಗೆದಿದ್ದಾರೆ.
ಪೂಜೆ ಮಾಡಿ ಅಗೆದ ಕಿಡಿಗೇಡಿಗಳು
ಅಪಾರ್ಟ್ಮೆಂಟ್ನ ಕಾಂಪೌಂಡ್ ಬಳಿ ಯಾರೋ ಅಗೆದಿರುವ ಆರೋಪ ಕೇಳಿ ಬಂದಿದೆ. ಮೂರ್ನಾಲ್ಕು ದಿನಗಳ ಹಿಂದೆ ಈ ಜಾಗದಲ್ಲಿ 5 ಅಡಿಗೂ ಹೆಚ್ಚು ಅಗೆದು ಪೂಜೆ ಮಾಡಿರುವುದು ಪತ್ತೆಯಾಗಿದೆ. ಪೂಜೆ-ಹೋಮ ಹವನ ಮಾಡಿ ನಂತರ ಜಾಗದಲ್ಲಿ ಅಗೆದಿದ್ದಾರೆ. ದೇವರ ಸ್ಥಾನದ ಹಿಂಭಾಗದಿಂದ ಅಗೆದಿರುವ ಕಿಡಿಗೇಡಿಗಳು ಬೇಸ್ಮೆಂಟ್ನ ಪಾರ್ಕಿಂಗ್ ಬಳಿ ಅಗೆದಿರುವುದು ಪತ್ತೆಯಾಗಿದೆ. ಯಾರಿಗೂ ಗೊತ್ತಾಗಬಾರದು ಎಂದು ಸುತ್ತಲೂ ತಾತ್ಕಾಲಿಕ ಶೆಡ್ ಹಾಕಿ ಅಗೆದು ಪೂಜೆ ಮಾಡಿದ್ದಾರೆ.
ಸದ್ಯ ನಿಧಿ ತೆಗೆದುಕೊಂಡು ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಪ್ರಶ್ನೆ ಮಾಡಿದರೆ, ನಮ್ಮ ಜಾಗ ನಾವೇನಾದ್ರು ಮಾಡಿಕೊಳ್ತೀವಿ ಎಂದು ಮಾಲೀಕರು ಉಡಾಫೆಯಾಗಿ ಉತ್ತರ ನೀಡಿದ್ದಾರಂತೆ. ಸದ್ಯ ನಿಧಿ ಅಗೆದ ಬಗ್ಗೆ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದಾರೆ.