ಬೆಂಗಳೂರು, ಜೂ.12: 'ಪರಮ್ ಕಲ್ಚರ್' ಹಾಗೂ 'ಹರಿವಂಶ ಗ್ರೂಪ್' ಸಹಯೋಗದೊಂದಿಗೆ ಬೆಂಗಳೂರಿನ ಜಯನಗರದ ಯುವಕ ಸಂಘದಲ್ಲಿ ಜೂನ್ 12 ಮತ್ತು 13ರಂದು ಸಂಜೆ 6 ರಿಂದ 8 ಗಂಟೆಯವರೆಗೆ ಎರಡು ದಿನಗಳ ವಿಶೇಷ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ‘ಭಜ ಮನʼ ವನ್ನು (Pre-Concert Workshop) ಹಮ್ಮಿಕೊಳ್ಳಲಾಗಿದೆ. ಖ್ಯಾತ ಯುವ ಶಾಸ್ತ್ರೀಯ ಗಾಯಕಿ ಸೂರ್ಯಗಾಯತ್ರಿ ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತರಿಗೆ ಸೂರ್ಯಗಾಯತ್ರಿ ಅವರಿಂದ ನೇರವಾಗಿ ಭಜನೆಗಳು, ದಾಸರಪದಗಳು ಮತ್ತು ಅಭಂಗ್ಗಳನ್ನು ಕಲಿಯುವ ಅಪೂರ್ವ ಅವಕಾಶ ಸಿಗಲಿದೆ. ಜತೆಗೆ, ಅವರ ಕಲಾ ಜರ್ನಿ ಮತ್ತು ಭಕ್ತಿ ಸಂಗೀತದ ಅನುಭವಗಳನ್ನು ನೇರವಾಗಿ ಅವರಿಂದಲೇ ಕೇಳಿ ತಿಳಿಯಬಹುದು. ಒಟ್ಟು 4 ಗಂಟೆಗಳ ಕಾಲ ನೇರ ಕಲಿಕೆ ಇರಲಿದ್ದು, ಕಲಿಕೆಗೆ ಅಗತ್ಯವಿರುವ ವಿಶೇಷ ಸಾಹಿತ್ಯ ಹಾಗೂ ನೋಟ್ಸ್ಗಳನ್ನೂ ಇಲ್ಲಿ ಪಡೆಯಬಹುದಾಗಿದೆ.
ವೇದಿಕೆ ಹಂಚಿಕೊಳ್ಳುವ ಸುವರ್ಣಾವಕಾಶ
ಕಾರ್ಯಾಗಾರವು ಕೇವಲ ಕಲಿಕೆಗೆ ಸೀಮಿತವಾಗಿರದೆ, ಪ್ರದರ್ಶನಕ್ಕೂ ದಾರಿ ಮಾಡಿಕೊಡಲಿದೆ. ಇಲ್ಲಿ ಭಾಗವಹಿಸುವ ಪ್ರತಿಭಾವಂತ ಕಲಾಭಿಮಾನಿಗಳನ್ನು ಜೂನ್ 14ರಂದು ಸಂಜೆ 5 ಗಂಟೆಯಿಂದ ಮೀನಾಕ್ಷಿ ರಂಗಮಂಚದಲ್ಲಿ ನಡೆಯಲಿರುವ ಭವ್ಯ ಲೈವ್ ಕನ್ಸರ್ಟ್ನಲ್ಲಿ ಸೂರ್ಯಗಾಯತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡಲು ಪರಿಗಣಿಸುವ ಅವಕಾಶ ಇರಲಿದೆ.
ಉಚಿತ ಕನ್ಸರ್ಟ್ ಪಾಸ್ ಲಭ್ಯ
ಈ ಕಾರ್ಯಾಗಾರದಲ್ಲಿ ಕೇವಲ ಕಲಿಕೆ ಮಾತ್ರವಲ್ಲದೆ ಹೆಚ್ಚುವರಿ ಸೌಲಭ್ಯಗಳೂ ಸೇರಿವೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಉಚಿತ ಕಲಿಕಾ ಸಾಮಗ್ರಿಗಳ ಜತೆಗೆ ಜೂನ್ 14ರಂದು ನಡೆಯಲಿರುವ ಸೂರ್ಯಗಾಯತ್ರಿ ಅವರ ಭವ್ಯ ಲೈವ್ ಕನ್ಸರ್ಟ್ನ ಕಂಪ್ಲಿಮೆಂಟರಿ ಪಾಸ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು.
ಜಾಗತಿಕ ತಾರೆಯ ಮಾರ್ಗದರ್ಶನ
ಸೂರ್ಯಗಾಯತ್ರಿ ಅವರು ಮುಂಬೈನ ಷಣ್ಮುಖಾನಂದ ಸಭಾದಿಂದ ಕಿರಿಯ ವಯಸ್ಸಿನಲ್ಲೇ ಪ್ರತಿಷ್ಠಿತ ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಶಿಪ್ ಪುರಸ್ಕೃತರಾಗಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ 29 ನಗರಗಳ ಯಶಸ್ವಿ ಪ್ರವಾಸ ಮುಗಿಸಿ ಬಂದಿರುವ ಹಾಗೂ ದೇಶ-ವಿದೇಶಗಳಲ್ಲಿ 500ಕ್ಕೂ ಹೆಚ್ಚು ಲೈವ್ ಪ್ರದರ್ಶನಗಳನ್ನು ನೀಡಿದ್ದಾರೆ.