ಬೆಂಗಳೂರು: ರಾಜ್ಯಾದ್ಯಂತ ಜುಲೈ 1ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ ಯೋಜನೆಯ (Gruha Jyothi Scheme) ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಫಲಾನುಭವಿಯ ಪ್ರವರ್ಗ ಕುರಿತು ಕೇಳಿರುವ ಮಾಹಿತಿ ಕಡ್ಡಾಯವಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಬೆಸ್ಕಾಂನ ಸಿಬ್ಬಂದಿ ಹಾಗೂ ಮೀಟರ್ ರೀಡರ್ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್ ಹಾಗೂ ಮುದ್ರಿತ ಘೋಷನಾ ಪತ್ರದ ಮೂಲಕ ಮಾಹಿತಿಯನ್ನು ಗೃಹ ಫಲಾನುಭವಿಗಳ ಮನೆಗೆ ತೆರಳಿ ಕಲೆ ಹಾಕುತ್ತಿದ್ದು, ಫಲಾನುಭವಿಯ ಪ್ರವರ್ಗದ (ಜಾತಿ ಪ್ರಮಾಣಪತ್ರ) ಸಂಬಂಧಿಸಿದ ಮಾಹಿತಿ ಕೇವಲ ಐಚ್ಛಿಕವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಫಲಾನುಭವಿಗಳ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ. ಫಲಾನುಭವಿಗಳಿಗೆ ಜಾತಿ ಮಾಹಿತಿ ನೀಡಲು ಇಷ್ಟವಿಲ್ಲದಿದ್ದರೆ ಮೊಬೈಲ್ ಅಪ್ಲಿಕೇಷನ್ ನಲ್ಲಿರುವ ʼಮಾಹಿತಿ ನೀಡಲು ನಿರಾಕರಣೆʼ ಎಂಬ ಆಯ್ಕೆಯನ್ನು ನಮೂದಿಸಲು ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಜಾತಿ ಪ್ರಮಾಣ ಪತ್ರ ಕೇಳಿದ್ದಕ್ಕೆ ಬಿಜೆಪಿ ವಿರೋಧ
ಗೃಹ ಜ್ಯೋತಿ ಯೋಜನೆಗೆ ಜಾತಿ ಪ್ರಮಾಣ ಪತ್ರ ಕೇಳಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದರು. ಗೃಹಜ್ಯೋತಿಗೆ ವೋಟರ್ ಐಡಿ ಸಾಕಲ್ಲವೇ? ಹಾಗಿದ್ದರೆ ಪ್ಯಾನ್ ಕಾರ್ಡ್ ಯಾಕೆ? ಜಾತಿ ಪ್ರಮಾಣ ಪತ್ರ ಯಾಕೆ? ಎಂದು ಪ್ರಶ್ನಿಸಿದ್ದರು.
200 ಯೂನಿಟ್ ಉಚಿತ ವಿದ್ಯುತ್ ಎಂದು ಯಾವುದೇ ಷರತ್ತಿಲ್ಲದೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ಗೃಹಜ್ಯೋತಿ ಮರುಪರಿಶೀಲನೆ ಹೆಸರಿನಲ್ಲಿ ಜನರಿಂದ ವೋಟರ್ ಐಡಿ, ಪ್ಯಾನ್ ಕಾರ್ಡ್, ಜಾತಿ ಪ್ರಮಾಣ ಪತ್ರದ ಮಾಹಿತಿಯನ್ನು ಕೇಳುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಮನಗರದಲ್ಲಿ 'SIR ಸ್ಕ್ಯಾಮ್', ಮತದಾರರ ಪಟ್ಟಿಯಲ್ಲಿ ಬಾಂಗ್ಲಾ ವಲಸಿಗರಿಗೆ ಮಣೆ: ಎಚ್ಡಿಕೆ ಆರೋಪ
ಸಿಎಂ ಡಿಕೆ ಶಿವಕುಮಾರ್ ಅವರೇ, ವಿದ್ಯುತ್ ಬಳಕೆ ಅಳೆಯಲು ಜಾತಿ ಬೇಕೇ? ಕರೆಂಟ್ ನೀಡಲು ಪ್ಯಾನ್ ಕಾರ್ಡ್ ಬೇಕೇ? ಅಥವಾ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆಗೆ ಕತ್ತರಿ ಹಾಕಲು ಇದೇ ಹೊಸ ದಾರಿಯೇ? ಜನರಿಗೆ ಸ್ಪಷ್ಟ ಉತ್ತರ ನೀಡಿ ಎಂದು ರಾಜ್ಯ ಬಿಜೆಪಿ ನಾಯಕರು ಆಗ್ರಹಿಸಿದ್ದರು. ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಗೃಹಜ್ಯೋತಿಗೆ ಜಾತಿ ಪ್ರಮಾಣ ಪತ್ರ ಕಡ್ಡಾಯವಲ್ಲ ಎಂದು ಬೆಸ್ಕಾಂ ತಿಳಿಸಿದೆ.