ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ: ಕೆ.ವಿ. ಪ್ರಭಾಕರ್

KV Prabhakar: ಈಗ ಒಂದು ಸಿನಿಮಾ ತೆರೆ ಕಾಣುತ್ತಿದ್ದಂತೆ ನಾಯಕ ನಟರು ಅವರವರೇ ಸ್ವಘೋಷಿತ ಸ್ಟಾರ್‌ಗಳಾಗಿ ಬಿಡುತ್ತಾರೆ. ಇವೆಲ್ಲವೂ ನಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೇರುಗಳಿಂದ ಬೇರ್ಪಟ್ಟಿದ್ದರ ದುಷ್ಪರಿಣಾಮ ಎಂದು ಮುಖ್ಯಮಂತ್ರಿಯ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿಕೆ.ವಿ. ಪ್ರಭಾಕರ್ ಮಾತನಾಡಿದರು.

ಬೆಂಗಳೂರು ಫೆ. 6: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಮುಖ್ಯಮಂತ್ರಿಯ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ (17th Bengaluru international film festival) 'ಕನ್ನಡ ಸಿನಿ‌ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ' ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆಲ್ಲ ಸಿನಿಮಾಗಳು, ಸಿನಿಮಾದ ಪಾತ್ರಗಳು ನಮ್ಮ ಬದುಕಿನ‌ ಭಾಗ ಆಗಿರುತ್ತಿದ್ದವು. ಹೀಗಾಗಿ ಜನರು ಕನ್ನಡ ಸಿನಿಮಾಗಳಿಗೆ ಮುಗಿ ಬೀಳುತ್ತಿದ್ದರು. ಆಗ ಯಾವ ಹೀರೋಗಳೂ ಇವತ್ತಿನ ಹೀರೋಗಳಂತೆ ನಮ್ಮ ಸಿನಿಮಾ ನೋಡಿ ಎಂದು ಗೋಗರೆಯುತ್ತಿರಲಿಲ್ಲ. ಹಿಂದಣ ಹೆಜ್ಜೆಯನ್ನರಿಯದವನು ಮುಂದನ ಹೆಜ್ಜೆಯನ್ನಿಡಲಾರನು ಎಂದರು.

ಈಗ ಒಂದು ಸಿನಿಮಾ ತೆರೆ ಕಾಣುತ್ತಿದ್ದಂತೆ ನಾಯಕ ನಟರು ಅವರವರೇ ಸ್ವಘೋಷಿತ ಸ್ಟಾರ್‌ಗಳಾಗಿ ಬಿಡುತ್ತಾರೆ. ಇವೆಲ್ಲವೂ ನಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೇರುಗಳಿಂದ ಬೇರ್ಪಟ್ಟಿದ್ದರ ದುಷ್ಪರಿಣಾಮ ಎಂದು ಅವರು ಬೇಸರ ವ್ಯಕ್ತಪಡಿಸಿದರು.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ʼಸಿನಿ ಪಯಣದ ಸುವರ್ಣ ಸಂಭ್ರಮ‌ʼಕ್ಕಾಗಿ ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಅರ್ಥಪೂರ್ಣ ಸಂಗತಿ. 50 ವರ್ಷಗಳ ಕನ್ನಡ ಸಿನಿಮಾ ಪಯಣವನ್ನು ಮೆಲುಕು ಹಾಕುತ್ತಲೇ, ಈ 50 ವರ್ಷಗಳಲ್ಲಿ ಕನ್ನಡ ಸಿನಿಮಾ ಪರಂಪರೆಯನ್ನು ಗಟ್ಟಿಗೊಳಿಸಿದ ಐದು ಮಂದಿ ಹಿರಿಯರನ್ನು ಗುರುತಿಸಿದ್ದೇವೆ. ಪಾರ್ವತಮ್ಮ ರಾಜ್ ಕುಮಾರ್, ಎಸ್. ರಾಮಚಂದ್ರ, ಗಿರೀಶ್ ಕಾಸರವಳ್ಳಿ, ಎಸ್.ವಿ. ರಾಜೇಂದ್ರಸಿಂಗ್ ಬಾಬು, ಡಾ. ಜಯಮಾಲಾ ಅವರ ಕೊಡುಗೆಗಳನ್ನು ನಾವು ಗುರುತಿಸುತ್ತಿದ್ದೇವೆ ಎಂದರು.

ಈ ಐದು ಮಂದಿಯ ಸಾಧನೆಗಳನ್ನು ಮೆಲುಕು ಹಾಕುವುದೆಂದರೆ ಇಡೀ ಕನ್ನಡ ಸಿನಿಮಾ ಪರಂಪರೆಯ ಅರ್ಧ ಶತಮಾನವನ್ನು ಹಿಂದಿರುಗಿ ನೋಡಿದಂತೆ ಎಂದು ಹೇಳಿದರು.

ಗಿರೀಶ್ ಕಾಸರವಳ್ಳಿ ಕನ್ನಡಕ್ಕೆ ನಾಲ್ಕು ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟಿದ್ದು ಮಾತ್ರವಲ್ಲದೆ, ಕನ್ನಡ ಸಿನಿಮಾಗಳ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ಎಸ್. ರಾಮಚಂದ್ರ ಕನ್ನಡದ ಪರ್ಯಾಯ ಚಿತ್ರಗಳ ಪರಂಪರೆಯ ನೆರಳು- ಬೆಳಕು ಇದ್ದ ಹಾಗೆ. ಅರ್ಧ ಶತಮಾನದ ಪರ್ಯಾಯ ಸಿನಿಮಾಗಳಿಗಾಗಿ ಕನ್ನಡಕ್ಕೆ ಸಿಕ್ಕಿರುವ ಮಾನ್ಯತೆಗಳ ಹಿಂದೆ ಎಸ್.ರಾಮಚಂದ್ರ ಅವರ ಕ್ಯಾಮರಾ ಕಣ್ಣುಗಳು ಇವೆ ಎಂದರು.

ಪಾರ್ವತಮ್ಮ ರಾಜ್‌ಕುಮಾರ್ ಪೂರ್ಣಿಮಾ ಎಂಟರ್‌ಪ್ರೈಸಸ್ ಮೂಲಕ 80ಕ್ಕೂ ಹೆಚ್ಚು ಸದಭಿರುಚಿಯ ಜತೆಗೆ ಜನಪ್ರಿಯ ಸಿನಿಮಾಗಳನ್ನು ಕನ್ನಡ ಜಗತ್ತಿಗೆ ಮತ್ತು ಸಿನಿಮಾ ಜಗತ್ತಿಗೆ ನೀಡಿದವರು. ಏಕ ಕಾಲಕ್ಕೆ ಯಶಸ್ವಿ ಮತ್ತು ಸಮಾಜಮುಖಿಯಾದ ಸದಭಿರುಚಿಯ ಸಿನಿಮಾಗಳನ್ನು ನೀಡಿ ಗೆಲ್ಲುವುದು ಸುಲಭದ ಮಾತಲ್ಲ. ಈ ಸಾಹಸದಲ್ಲಿ ಪಾರ್ವತಮ್ಮ ಅವರು ಎಲ್ಲಾ ಸವಾಲುಗಳನ್ನು ಎದುರಿಸಿ ಗೆದ್ದಿದ್ದಾರೆ. ಕನ್ನಡ ಬೆಳ್ಳಿ ಪರದೆಯನ್ನು ಗೆಲ್ಲಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಜಯಮಾಲಾ ತುಳು ಸಿನಿಮಾಗಳ ಮೂಲಕ ಸಿನಿಮಾ ಪ್ರಪಂಚಕ್ಕೆ ಬಂದರು. ʼಭೂತಯ್ಯನ ಮಗ ಅಯ್ಯುʼ ಸಿನಿಮಾದ ಹಾಡೊಂದರ ಮೂಲಕ ಕನ್ನಡಕ್ಕೆ ಬಂದು ಕನ್ನಡ ಸಿನಿಮಾ ಜಗತ್ತನ್ನು ಬೆಳಗಿಸಿದರು. ತಾವೂ ಬೆಳಗಿದರು. ಜಯಮಾಲಾ ಕೇವಲ ನಟಿ ಮಾತ್ರವಲ್ಲ. ನಿರ್ಮಾಪಕಿ ಆಗಿಯೂ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಒದಗಿಸಿದ್ದಾರೆ. ʼತಾಯಿ ಸಾಹೇಬʼ ಸಿನಿಮಾದ ನಿರ್ಮಾಪಕಿಯೂ ಆಗಿ, ನಟಿಯೂ ಆಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿದ್ದಾರೆ.‌ ಜತೆಗೆ ಮಹಿಳಾ ಸಂವೇದನೆ ವಿಷಯದಲ್ಲಿ PHd ಮಾಡಿ ಡಾ. ಜಯಮಾಲಾ ಆಗಿದ್ದಾರೆ ಎಂದರು.

ಶಂಕರ್ ಸಿಂಗ್ ಅವರ ಪುತ್ರ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ಇಡೀ ಕುಟುಂಬ ಸಿನಿಮಾ ಕುಟುಂಬ. ಹಿಂದಿ, ತೆಲುಗು, ಕನ್ನಡ ಮತ್ತು ತುಳು ಭಾಷೆಯ ಸಿನಿಮಾಗಳನ್ನು ನಿರ್ದೇಶಿಸಿ ಉತ್ತರ-ದಕ್ಷಿಣ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಹೀಗಾಗಿ ಈ ಐದೂ ಮಂದಿಯ ಅರ್ಧ ಶತಮಾನದ ಕೊಡುಗೆಗಳು ಕನ್ನಡ ಸಿನಿಮಾದ ಮುಂದಿನ ಒಂದು ಶತಮಾನಕ್ಕೆ ಮಾರ್ಗದರ್ಶಿ ಆಗಲಿ ಎಂದು ಆಶಿಸಿದರು.

ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ. ಪ್ರಭಾಕರ್

ಸಿದ್ದರಾಮಯ್ಯ ಸಿಎಂ ಆಗಿರುವವರೆಗೆ ಸಬ್ಸಿಡಿಗೆ ನಿಲ್ಲಲ್ಲ

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಲಾ ಮುಂದಿಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇರುವವರೆಗೆ ಸಬ್ಸಿಡಿ ನಿಲ್ಲುವುದಿಲ್ಲ ಎಂದು ಖಚಿತವಾಗಿ ನುಡಿದರು. ವಾಣಿಜ್ಯ ಮಂಡಳಿ ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಇದೇ ಸಂದರ್ಭದಲ್ಲಿ‌ ಭರವಸೆ ನೀಡಿದರು. ಈ ವೇಳೆ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸಿಂಗ್ ಬಾಬು, ಪೂರ್ಣಿಮಾ ವಿನಯ್ ರಾಜ್ ಕುಮಾರ್, ಜಯಮಾಲಾ, ಚಲನಚಿತ್ರ ಅಕಾಡೆಮಿ‌ ಅಧ್ಯಕ್ಷರಾದ ಸಾಧು ಕೋಕಿಲಾ, ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಉಪಸ್ಥಿತರಿದ್ದರು.