ಬೆಂಗಳೂರು, ನ.6: ಮೆಕ್ಕೆಜೋಳ ಖರೀದಿಯಲ್ಲಿ ವಂಚನೆ ಪ್ರಕರಣಕ್ಕೆ (Zameer Ahmed) ಸಂಬಂಧಿಸಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಕಷ್ಟ ಎದುರಾಗಿದೆ. ಜಮೀರ್ ಅಹ್ಮದ್ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್ ದೂರು ನೀಡಿದ್ದು, ಸಂಪುಟದಿಂದ ವಜಾಗೊಳಿಸುವಂತೆ ಮನವಿ ಮಾಡಲಾಗಿದೆ. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ.
ವಂಚನೆ ಮಾಡಿದ ವ್ಯಕ್ತಿಯ ಪರವಾಗಿ ಜಮೀರ್ ಅಹ್ಮದ್ ನಿಂತಿರುವ ಆರೋಪ ಕೇಳಿ ಬಂದಿತ್ತು. ಹೈದರಾಬಾದ್ ವ್ಯಕ್ತಿಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗೆ ಜಮೀರ್ ಅಹ್ಮದ್ ಫೋನ್ ಕರೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಆರೋಪಿ ಅಕ್ಬರ್ ಪಾಷಾಗೆ ಸರ್ಕಾರಿ ವಾಹನ ಬಳಕೆ ಮಾಡಲು ಕೂಡ ಸಚಿವರು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ರಾಜ್ಯಪಾಲರಿಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎನ್ನುವವರು ದೂರು ನೀಡಿದ್ದಾರೆ.
ಏನಿದು ಪ್ರಕರಣ?
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದ ಜೋಳದ ವ್ಯಾಪಾರಿ ರಾಮಕೃಷ್ಣಪ್ಪಗೆ ಹೈದರಾಬಾದ್ನಲ್ಲಿ ಜೋಳದ ವ್ಯಾಪಾರ ನಡೆಸುವ ಅಕ್ಬರ್ ಎಂಬಾತ 1.89 ಕೋಟಿ ರೂ. ವಂಚಿಸಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ವ್ಯಾಪಾರಿ ರಾಮಕೃಷ್ಣಪ್ಪ ಪೆರೇಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಆರೋಪಿ ಅಕ್ಬರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪೆರೇಸಂದ್ರ ಪಿಎಸ್ಐ ಜಗದೀಶ್ರೆಡ್ಡಿಗೆ, ಸಚಿವ ಜಮೀರ್ ಅಹ್ಮದ್ (Minister Zameer Ahmed) ಕರೆಮಾಡಿ ಆತ ನಮ್ಮ ಸಂಬಂಧಿ, ಅವರಿಗೆ ಸಹಾಯ ಮಾಡಿ, ಈ ಪ್ರಕರಣವನ್ನು ರಾಜಿ ಮಾಡಿಸಿ ಎಂದು ಸೂಚಿಸಿದ್ದು. ಈ ಕುರಿತ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಮಾತನಾಡಿದ್ದ ಜೋಳದ ವ್ಯಾಪಾರಿ ರಾಮಕೃಷ್ಣಪ್ಪ, ಸಚಿವ ಜಮೀರ್ ಅಹ್ಮದ್ ಅನ್ಯಾಯಕ್ಕೆ ಒಳಗಾಗಿರುವ ರೈತರ ಪರವಾಗಿ ಮಾತನಾಡಿ ಆರೋಪಿಯಿಂದ ಹಣ ವಾಪಸ್ ಬರುವಂತೆ ಮಾಡಿ ನೆರವಾಗುವ ಬದಲು, ವಂಚನೆ ಕೇಸಲ್ಲಿ ಬಂಧನವಾಗಿರುವ ಆರೋಪಿಗಳ ರಕ್ಷಣೆ ಮಾಡುವಂತೆ ಪಿಎಸ್ಐ ಅವರಿಗೆ ಪೋನ್ ಕರೆ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಈ ಸುದ್ದಿಯನ್ನೂ ಓದಿ | Next Karnataka CM: ಸಿದ್ದರಾಮಯ್ಯ ಸಿಎಂ ಆಗಿರುವಷ್ಟೂ ದಿನ ಅವರೇ ಸಿಎಂ: ಡಿ.ಕೆ. ಸುರೇಶ್
ನಾವು ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಮನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಬಂದಿದ್ದಾರೆ. ನೀವು ನಮ್ಮ ಪಕ್ಷದಲ್ಲಿ ಸಚಿವರಾಗಿದ್ದು ವಂಚಕರ ಪರ ನಿಲ್ಲೋದಕ್ಕಾ ಜಮೀರ್ ಅಹಮದ್ ಖಾನ್ ಅವರೇ ಎಂದು ರಾಮಕೃಷ್ಣಪ್ಪ ಪ್ರಶ್ನಿಸಿದ್ದರು.
ಮತ್ತೊಂದೆಡೆ ತಮ್ಮ ವಿರುದ್ಧ ಜೋಳದ ವ್ಯಾಪಾರಿ ರಾಮಕೃಷ್ಣ ಅವರು ಸುಳ್ಳು ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿ ಬಂಧಿಸುವಂತೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ಠಾಣೆಯಲ್ಲಿ ಪೊಲೀಸರೊಂದಿಗೆ ರಾಮಕೃಷ್ಣ ಅವರೂ ಹಲ್ಲೆ ನಡೆಸಿದ್ದಾರೆ ಎಂದು ಮೆಕ್ಕೆ ಜೋಳದ ವ್ಯಾಪಾರಿ ಅಕ್ಟರ್ ಪಾಷಾ ಆರೋಪಿಸಿದ್ದರು.
ರಾಮಕೃಷ್ಣ ಹಾಗೂ ಅವರ ತಮ್ಮ ಲಕ್ಷ್ಮೀಪತಿಯವರಿಗೆ ವೈಮನಸ್ಸು ಇದೆ. ನಾನು ರಾಮಕೃಷ್ಣ ಅವರೊಂದಿಗೆ ಯಾವುದೇ ವ್ಯವಹಾರ ನಡೆಸಿಲ್ಲ. ಬೇಕಿದ್ದರೆ ಸಿಸಿಟಿವಿ ಕ್ಯಾಮೆರಾ, ನನ್ನ ಬ್ಯಾಂಕ್ ಖಾತೆ, ನನ್ನ ಇಬ್ಬರು ಪತ್ನಿಯರ, ಮಕ್ಕಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಿ. 'ನಾನು ಸುಮಾರು ₹1.85 ಕೋಟಿ ನೀಡುವುದು ಬಾಕಿ ಇದೆ ಎಂದು ಸುಳ್ಳು ದೂರು ನೀಡಿದ್ದಾರೆ' ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.