ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿರುವ ಸಮರ್ಥ್ ಶಾಮನೂರು (MLA Samarth Shamanur) ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿ, ಆಶೀರ್ವಾದ ಪಡೆದರು. ಈ ವೇಳೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದ ಪ್ರಭಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಉಪ ಚುನಾವಣೆ ಕದನದಲ್ಲಿ ಗೆದ್ದು ಬೀಗಿದ್ದ ಸಮರ್ಥ್
ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 69,578 ಮತ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿಯ ವಿರುದ್ಧ 5708 ಮತಗಳ ಅಂತರದ ಗೆಲುವು ಸಾಧಿಸಿದ್ದರು.

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 63,870 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು. ಈ ಮೂಲಕ ದಾವಣಗೆರೆ ದಕ್ಷಿಣ ಮತ್ತೊಮ್ಮೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತಾಗಿದೆ. ಆದರೆ, ಕಳೆದ ಬಾರಿ 1700 ಮಾತ್ರ ಮತ ಪಡೆದಿದ್ದ ಎಸ್ಡಿಪಿಐ ಅಭ್ಯರ್ಥಿ ಈ ಬಾರಿ ಬರೋಬ್ಬರಿ 18,975 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಕಾಂಗ್ರೆಸ್ ಗೆಲುವಿನ ಅಂತರ ಕಡಿಮೆಗೊಳ್ಳಲು ಕಾರಣರಾಗಿದ್ದರು.
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು
ಶಾಮನೂರು ಶಿವಶಂಕರಪ್ಪ ಅವರು 27,888 ಅಂತರದ ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಮಣಿಸಿದ್ದರು. ಆದರೆ, ಈ ಬಾರಿ ಮುಸ್ಲಿಂರ ಟಿಕೆಟ್ ಬೇಡಿಕೆ, ಕುಟುಂಬ ರಾಜಕಾರಣ ಮತ್ತಿತರ ಕಾರಣಗಳ ನಡುವೆಯೂ ಅವರ ಮೊಮ್ಮಗ ಸಮರ್ಥ್ ಕೇವಲ 5708 ಮತ ಪಡೆಯುವ ಮೂಲಕ ಗೆಲುವು ಕಂಡಿದ್ದರು.