ಬೆಂಗಳೂರು, ಮೇ 4: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಜನರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ. ಹೀಗಾಗಿ ಕರ್ನಾಟಕ ಉಪಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಬೇರೆ ರಾಜ್ಯಗಳ ಪೈಕಿ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸವಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ರಾಜ್ಯದ ಉಪಚುನಾವಣೆ, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳಿಗೆ ಸೋಮವಾರ ಅವರು ಪ್ರತಿಕ್ರಿಯೆ ನೀಡಿದರು.
ದಾವಣಗೆರೆ ದಕ್ಷಿಣದಲ್ಲಿ ಗೆಲುವಿನ ಅಂತರ 25-30 ಸಾವಿರಕ್ಕಿಂತ ಕಡಿಮೆ ಆಗಿರುವ ಬಗ್ಗೆ ಕೇಳಿದಾಗ, ʼಇಷ್ಟೆಲ್ಲಾ ಗೊಂದಲ ಆದಮೇಲೆ 25-30 ಸಾವಿರ ಅಂತರದ ಗೆಲುವು ಸಿಗುವುದಿಲ್ಲ ಎಂಬುದು ಗೊತ್ತಿತ್ತು. ಆದರೆ ಆರಾಮವಾಗಿ ಗೆಲ್ಲುತೇವೆ ಎಂದು ಗೊತ್ತಿತ್ತು. ಎಸ್ಡಿಪಿಐನಿಂದ ಅಪಾಯವಾಗಿದೆʼ ಎಂದು ದೂರಿದರು.
ಎಸ್ಡಿಪಿಐ ಮತಗಳಿಕೆಯ ಬಗ್ಗೆ ಕೇಳಿದಾಗ, ʼಅದರ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಮಾತನಾಡಿದ್ದಾರೆ. ನಾನೇನು ಮಾತನಾಡಲು ಹೋಗುವುದಿಲ್ಲ. ಎಸ್ಡಿಪಿಐ ಅನ್ನು ಹಗುರವಾಗಿ ನಾವು ಪರಿಗಣಿಸಿರಲಿಲ್ಲ. ಅದೂ ಸಹ ರಾಜಕೀಯ ಪಕ್ಷ. ಅವರು ಅಲ್ಪಸಂಖ್ಯಾತರ ಮತ ತೆಗೆದುಕೊಂಡರುʼ ಎಂದರು.
ಚುನಾವಣೆ ಫಲಿತಾಂಶವು ರಾಜ್ಯದಲ್ಲಿ ಏನಾದರೂ ಬದಲಾವಣೆ ತರಲಿದೆಯೇ ಎಂದು ಕೇಳಿದಾಗ, ʼನಮ್ಮ ರಾಜ್ಯಕ್ಕೆ ಏನೂ ಆಗುವುದಿಲ್ಲ. ಒಂದಷ್ಟು ಜನಕ್ಕೆ ಸಂತೋಷ, ಒಂದಷ್ಟು ಜನಕ್ಕೆ ಬೇಜಾರು ಆಗಬಹುದು. ಡಬಲ್ ಎಂಜಿನ್ ಸರ್ಕಾರ ಇದ್ದಾಗಲೇ ಅವರಿಗೆ ಏನೂ ಮಾಡಲಿಲ್ಲʼ ಎಂದು ಹೇಳಿದರು.
ಕೇರಳದಲ್ಲಿ ಯುಡಿಎಫ್ ಮೈತ್ರಿಯ ಗೆಲುವಿನ ಬಗ್ಗೆ ಕೇಳಿದಾಗ, ʼಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಗೆದ್ದಿದ್ದೆವು. ಎಲ್ಡಿಎಫ್ 10 ವರ್ಷಗಳ ಕಾಲ ಆಡಳಿತ ನಡೆಸಿದೆ. ಅದಕ್ಕೆ ಜನ ಬದಲಾವಣೆ ಬೇಕು ಎಂದು ಫಲಿತಾಂಶ ನೀಡಿದ್ದಾರೆ. ಪ್ರಚಾರಕ್ಕೂ ಹೋದಾಗಲೂ ಜನ ನಮ್ಮ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದರುʼ ಎಂದು ಹೇಳಿದರು.
ತಮಿಳುನಾಡಿನ ಫಲಿತಾಂಶ ಅಚ್ಚರಿ ತಂದಿದೆ
ತಮಿಳುನಾಡಿನ ಫಲಿತಾಂಶದ ಬಗ್ಗೆ ಕೇಳಿದಾಗ, ʼತಮಿಳುನಾಡಿನದ್ದು ಅಚ್ಚರಿಯ ಫಲಿತಾಂಶ. ಅಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ಜನರ ನಾಡಿಮಿಡಿತವನ್ನು ನಾವು ಗ್ರಹಿಸಲು ಆಗಲಿಲ್ಲ. ಸ್ಥಳೀಯ ನಾಯಕರು ಈ ಬಗ್ಗೆ ಹೇಳಿದ್ದರು. 40 ವರ್ಷಗಳ ರಾಜಕೀಯದಲ್ಲಿ ಸಂಬಂಧ, ನೆಂಟಸ್ತನ ಬಿಡಲು ಆಗುತ್ತದೆಯೇʼ ಎಂದರು.
ಸ್ಟಾಲಿನ್ ಅವರ ಜತೆ ರಾಹುಲ್ ಗಾಂಧಿ ಅವರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಎನ್ನುವ ಬಗ್ಗೆ ಕೇಳಿದಾಗ, ʼಆ ಬಗ್ಗೆ ಮಾತನಾಡಲು ನಾನು ಹೋಗುವುದಿಲ್ಲ. ಹೈಕಮಾಂಡ್ ತೀರ್ಮಾನ ಮಾಡಿದಂತೆ ನಾವೆಲ್ಲರೂ ಅಲ್ಲಿಗೆ ಹೋಗಿದ್ದೇವಲ್ಲʼ ಎಂದರು.
ಅಸ್ಸಾಂ ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವ ಬಗ್ಗೆ ಕೇಳಿದಾಗ, ʼನಾವು 50- 60 ಸ್ಥಾನ ಬರುತ್ತೇವೆ ಎಂದು ಕೊಂಡಿದ್ದೆವು. ಅಲ್ಲಿನ ಸ್ಥಳೀಯ ನಾಯಕರೂ 50 ಸ್ಥಾನಗಳನ್ನು ಮುಟ್ಟುತ್ತೇವೆ ಎಂದು ಹೇಳಿದ್ದರುʼ ಎಂದರು.
ಸೋಲಿಗೆ ಕಾರಣ ಏನಿರಬಹುದು ಎಂದು ಕೇಳಿದಾಗ, ʼಕ್ಷೇತ್ರ ಮರುವಿಂಗಡಣೆ ಮಾಡುವಾಗ ಅಲ್ಪಸಂಖ್ಯಾತರು ಒಂದೇ ಕಡೆ ಬರುವಂತೆ ಮಾಡಿದ್ದಾರೆ. ಉಪಾಯವಾಗಿಯೇ ಇದನ್ನು ಮಾಡಲಾಗಿದೆʼ ಎಂದು ಆರೋಪಿಸಿದರು.
ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿ.ಕೆ. ಶಿವಕುಮಾರ್
ಪಶ್ಚಿಮ ಬಂಗಾಳದ ಬಗ್ಗೆ ಕೇಳಿದಾಗ, ʼಅಲ್ಲಿ ವ್ಯವಸ್ಥಿತವಾಗಿ ಅಧಿಕಾರ ದುರುಪಯೋಗವಾಗಿದೆ. ಎಲೆಕ್ಷನ್ ಕಮಿಷನ್ ಅನ್ನು ಎಷ್ಟು ದುರುಪಯೋಗ ಪಡಿಸಿಕೊಳ್ಳಬೇಕೋ ಅಷ್ಟು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಬಹಳ ಪ್ರಯತ್ನ ಮಾಡಿದರು. ಈಗ ಎರಡು ಲಕ್ಷಕ್ಕೂ ಹೆಚ್ಚು ಮತಗಳನ್ನು ಅಳಿಸಿ ಹಾಕಿದ ಕಾರಣಕ್ಕೆ ಬದಲಾವಣೆಯಾಗಿದೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದರು.