ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಕೆಂಪೇಗೌಡರ ಸ್ಮಾರಕಗಳ ಅಭಿವೃದ್ಧಿಗೆ 103 ಕೋಟಿ, ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ 100 ಕೋಟಿ ಮೀಸಲು: ಡಿ.ಕೆ.ಶಿವಕುಮಾರ್

DK Shivakumar: ನಾಡಪ್ರಭು ಕೆಂಪೇಗೌಡರ ಎಲ್ಲಾ ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಲು ₹103 ಕೋಟಿ ಅನುದಾನ ಹಾಗೂ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ ₹100 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಎಲ್ಲಾ ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಲು ₹103 ಕೋಟಿ ಅನುದಾನ ಹಾಗೂ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ ₹100 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ವಿಧಾನಸೌಧದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿ ಕೋಟೆಯ ಪುನರುಜ್ಜೀವನ ಕೆಲಸ ಶೇ.50ರಷ್ಟು ಮುಗಿದಿದೆ. ಆಂತರಿಕ ಸಮನ್ವಯತೆ ಸಾಧಿಸಲು ಸಮಿತಿಯನ್ನು ರಚಿಸಲಾಗುವುದು. ಕೆಂಪೇಗೌಡರ ಸಮಾಧಿ ಸ್ಥಳದಲ್ಲಿ 10 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು ಶೇ.90 ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಇದಕ್ಕೂ ಅನುದಾನವನ್ನು ಮೀಸಲಿಡಲಾಗಿದೆ ಎಂದರು.

ನಗರ ವಿನ್ಯಾಸ ಕಾಲೇಜಿನಲ್ಲಿ ಸುಮಾರು 300 ಜನ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತೆ ನಾವು ಆಲೋಚನೆ ಮಾಡಿದ್ದೇವೆ. ಇದಕ್ಕಾಗಿ ವಿಟಿಯು ಅವರು ತಯಾರಿಸಿದ ಪಠ್ಯಕ್ರಮ ಅಳವಡಿಸಿಕೊಳ್ಳುವ ಸಂಬಂಧ ಅವರ ಜತೆ ಚರ್ಚೆ ನಡೆಸಲಾಗುವುದು. ಸುಮ್ಮನಹಳ್ಳಿಯ ಬಳಿ ಐದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿರುವ ಕೆಂಪೇಗೌಡ ಭವನಕ್ಕೆ ಅತ್ಯುತ್ತಮ ಕಟ್ಟಡ ವಿನ್ಯಾಸವನ್ನು ನೀಡಲು ವಾಸ್ತುಶಿಲ್ಪಿಗಳಿಂದ ವಿನ್ಯಾಸ ನೀಡಲು ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

ನಗರ ವಿನ್ಯಾಸ ಅಧ್ಯಯನ ಮಾಡಿದವರಿಗೆ ಬಿಜಿಎ ಮತ್ತು ಪಾಲಿಕೆಗಳಲ್ಲಿ ಉದ್ಯೋಗ ನೀಡಬೇಕಿದೆ. ಏಕೆಂದರೆ ಬೆಂಗಳೂರಿಗೆ ನಗರ ವಿನ್ಯಾಸಕಾರರ ಅವಶ್ಯಕತೆ ಹೆಚ್ಚಿದೆ. ಕಾಲೇಜು ನಿರ್ಮಾಣಕ್ಕಾಗಿ ನಗರಾಭಿವೃದ್ದಿ ಇಲಾಖೆ, ಕೆಂಪೇಗೌಡ ಪ್ರಾಧಿಕಾರ ಮತ್ತು ಜಿಬಿಎಯಿಂದ ಅನುದಾನ ಮೀಸಲಿಡಲಾಗಿದೆ. ಏರ್ ಪೋರ್ಟ್ ಬಳಿಯ ಕೆಂಪೇಗೌಡ ಪ್ರತಿಮೆ ಬಳಿ ಥೀಮ್ ಪಾರ್ಕ್ ನಿರ್ಮಾಣ ಸಂಬಂಧ ಸಚಿವರಾದ ಕೃಷ್ಣೇಭೈರೇಗೌಡರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಎಲ್ಲೆಂದರಲ್ಲಿ ‌ಕಸ ಸಮಸ್ಯೆ ನಿವಾರಣೆಗೆ ಅಭಿಯಾನ

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಹಾಗೂ ರಸ್ತೆ ದುರಸ್ತಿಗಳನ್ನು ಅತ್ಯಂತ ವೇಗವಾಗಿ ಅಧಿಕಾರಿಗಳು ಮಾಡುತ್ತಿದ್ದಾರೆ. ದಸರಾ ರಜೆ ಇದ್ದ ಕಾರಣಕ್ಕೆ ಎಲ್ಲೆಂದರಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ಇದಕ್ಕೂ ಸಹ ಒಂದು ಅಭಿಯಾನ ನಡೆಸಲಾಗುವುದು. ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಹಾಗೂ ಕಸವನ್ನು ಎಸೆಯುವರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಬೆಂಗಳೂರನ್ನು ಸ್ವಚ್ಛವಾಗಿ ಇಡಲು ಎಲ್ಲೆಂದರಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದರು.

ನಗರದಾದ್ಯಂತ ಎಲ್ಲೆಂದರಲ್ಲಿ ಕೇಬಲ್‌ಗಳನ್ನು ಎಳೆಯಲಾಗಿದೆ. ಬೆಸ್ಕಾಂಗೆ ಸೇರಿದ ಕಂಬಗಳಲ್ಲಿ ಟಿವಿ ಕೇಬಲ್‌ಗಳು ನೇತಾಡುತ್ತಿದ್ದು ನಗರ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಸಮಸ್ಯೆ ಬಗೆಹರಿಸಲು ಸಚಿವರಾದ ಕೆ.ಜೆ. ಜಾರ್ಜ್ ಅವರೊಟ್ಟಿಗೆ ಮತ್ತೊಂದು ಸುತ್ತಿ‌ನ ಸಭೆ ನಡೆಸಲಾಗುವುದು. ಡೆಕ್ ಒಳಗಡೆ ಕೇಬಲ್‌ಗಳನ್ನು ಸಾಗಿಸಲು ಯಾರೂ ಸಹ ಸಹಕಾರ ‌ನೀಡುತ್ತಿಲ್ಲ. ಎಂಟನೇ ತಾರಿಕೀನ ನಂತರ 4 ಲಕ್ಷ ವಿದ್ಯುತ್ ಸಂಪರ್ಕ ನೀಡುವುದರ ಬಗ್ಗೆ ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ. ಇದರ ಜತೆಗೆ ಮುಂದಿನ ವಾರ ಎ ಹಾಗೂ ಬಿ ಖಾತಾ ವಿಚಾರವಾಗಿ ಮಾಹಿತಿ ನೀಡಲಾಗುವುದು ಎಂದರು.

ಭೂಗರ್ಭದಲ್ಲಿ ಕೇಬಲ ಅಳವಡಿಕೆ ಯೋಜನೆ ಕಳೆದ 10 ವರ್ಷಗಳಿಂದ ಯಶಸ್ವಿಯಾಗದಿರುವ ಬಗ್ಗೆ ಕೇಳಿದಾಗ, ʼನಗರದ ಕೆಲವೊಂದು ಕಡೆ ಈ ಡೆಕ್ ಸೌಲಭ್ಯ ನೀಡಲಾಗಿದೆ. ಅವಕಾಶ ಇರುವ ಕಡೆಯಲ್ಲಿ ಹಾಕಿಕೊಳ್ಳಿ ಎಂದು ತಿಳಿಸಿದ್ದೇವೆ. ಇದಕ್ಕಾಗಿ ಬೆಸ್ಕಾಂ, ಪಾಲಿಕೆಗಳು ಸೇರಿ ಸಭೆ ನಡೆಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದುʼ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಲು ಡಬ್ಬಿಗಳನ್ನು ಇಡುವ ಕುರಿತು ಕೇಳಿದಾಗ, ʼಈ ಬಗ್ಗೆ ಪಾಲಿಕೆಗಳ ಆಯುಕ್ತರಿಗೆ ವರದಿ ನೀಡಿ ಎಂದು ಹೇಳಿದ್ದೇನೆ. ಜಿಬಿಎ ಹಾಗೂ ಐದು ಪಾಲಿಕೆಗಳ ಆಯುಕ್ತರು ಸೇರಿ ಇತರೆ ನಗರಗಳಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಂಬುದನ್ನು ತಿಳಿದುಕೊಂಡು ವರದಿ ನೀಡಿ ಎಂದು ತಿಳಿಸಿದ್ದೇನೆ. ಜನರು ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕರು ಸಹ ಇದಕ್ಕೆ ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಅದರ ಫೋಟೋ ತೆಗೆದು ಪಾಲಿಕೆಗಳು ಸೂಚಿಸಿರುವ ದೂರವಾಣಿ ಸಂಖ್ಯೆಗೆ ಕಳುಹಿಸಬೇಕುʼ ಎಂದರು.

₹1 ಕೋಟಿ ದಂಡ ಸಂಗ್ರಹ

ಎಲ್ಲಿಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುತ್ತಿರುವ ಪ್ರಕ್ರಿಯೆ ನಿಂತು ಹೋಗಿದೆ, ಮಾರ್ಷಲ್‌ಗಳ ನಿಯೋಜನೆಯಾಗಿಲ್ಲ ಎಂದು ಕೇಳಿದಾಗ, ʼಈ ಪ್ರಕ್ರಿಯೆ ನಿಂತಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರಿಂದ ₹ 1 ಕೋಟಿ ದಂಡ ಸಂಗ್ರಹ ಮಾಡಲಾಗಿದೆ. ಜತೆಗೆ ಕಸ ಸಂಗ್ರಹ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಈ ಮೊದಲು 198 ವಾರ್ಡ್‌ಗಳು ಮಾತ್ರ ಇದ್ದವು. ಈಗ 300ಕ್ಕೂ ಹೆಚ್ಚು ವಾರ್ಡ್‌ಗಳು ಆಗುತ್ತಿರುವುದರಿಂದ ಕಸ ಸಂಗ್ರಹ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗುವುದು ಎಂದರು. ‌

ಈ ಸುದ್ದಿಯನ್ನೂ ಓದಿ | CM Siddaramaiah: ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರನ್ನು ಆತಂಕಗೊಳಿಸಿದೆ: ಸಿಎಂ ಸಿದ್ದರಾಮಯ್ಯ

ʼಎ ಮತ್ತು ಬಿ ಖಾತಾ ವಿಚಾರದಲ್ಲಿ ಕ್ರಾಂತಿಕಾರಿ ಕೆಲಸಗಳು ನಡೆದಿವೆ. ಈ ಮೊದಲು ಹೇಗಿತ್ತು, ಏನಾಗಿದೆ ಎಂದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಪಿಪಿಟಿ ತಯಾರಿಸಿ ಪ್ರತಿಯೊಂದೂ ಮಾಹಿತಿ ನೀಡಲಾಗುವುದು. ಟೀಕೆ ಮಾಡುವವರಿಗೂ ಇದರಿಂದ ಉತ್ತರ ದೊರೆಯಲಿದೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.