ಬೆಂಗಳೂರು, ಜ. 11: "ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ. ಮುಂದೆಯೂ ನನ್ನ ಬಗ್ಗೆ ಪಕ್ಷದವರು ತೀರ್ಮಾನ ಮಾಡುತ್ತಾರೆ ಎಂಬ ನಂಬಿಕೆ, ಆತ್ಮವಿಶ್ವಾಸವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ( D.K. Shivakumar) ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಉದ್ಯಮಿ ಒಕ್ಕಲಿಗ ಎಕ್ಸ್ಪೋ 2026 (Udyami Vokkaliga Expo 2026) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಅಧಿವೇಶನದಲ್ಲಿ ಒಮ್ಮೆ ಯಡಿಯೂರಪ್ಪ ಅವರಿಗೆ ಯಶಸ್ಸಿನ ಬಗ್ಗೆ ಒಂದು ಮಾತು ಹೇಳಿದ್ದೆ. ನಾವು ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ನಮ್ಮಲ್ಲಿ ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕು. ಆಗ ಯಶಸ್ಸು ಸಾಧಿಸಲು ಸಾಧ್ಯ. ನಾನು ರಾಜಕೀಯವಾಗಿ ಅನೇಕ ಏಟು ತಿಂದಿದ್ದೇನೆ. ನನ್ನನ್ನು ಬಂಡೆ ಎನ್ನುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಚಿನ್ನಕ್ಕೆ ಹೆಚ್ಚು ಶಾಖ ಕೊಟ್ಟು ಕರಗಿಸಿದಾಗ ಮಾತ್ರ ಆಭರಣ ಮಾಡಬಹುದು. ನೀವು ಯಾವತ್ತೂ ನಿಷ್ಪ್ರಯೋಜಕ, ಸಣ್ಣವ ಎಂದು ಭಾವಿಸಬೇಡಿ. ನೀವು ನಿಮ್ಮ ಕರ್ತವ್ಯ ಮಾಡಿ. ಯಾರು ಯಾವಾಗ ಬೇಕಾದರೂ ಏನಾದರೂ ಆಗಬಹುದು. ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ" ಎಂದು ಹೇಳಿದರು.
ಡಿಕೆಶಿ ಅವರ ಎಕ್ಸ್ ಪೋಸ್ಟ್:
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ
"ರಾಜಕೀಯ ಮಾಡಿ ನನ್ನನ್ನು ಜೈಲಿಗೆ ಹಾಕಿದಾಗ, ನನಗಾಗಿ ಪ್ರಾರ್ಥನೆ ಮಾಡಿದಿರಿ, ಹರಕೆ ಕಟ್ಟಿಕೊಂಡಿದ್ದೀರಿ. ಈಗಲೂ ಅದನ್ನೇ ಮಾಡುತ್ತಿದ್ದೀರಿ ಎಂಬ ಅರಿವು ನನಗಿದೆ. ಪಕ್ಷತೀತವಾಗಿ, ಸಮುದಾಯತೀತವಾಗಿ ಜನ ನನಗೆ ಒಳ್ಳೆಯದು ಬಯಸುತ್ತಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ. ನೀವು ಶ್ರಮಪಡಿ, ಶ್ರಮಕ್ಕೆ ಪ್ರತಿಫಲ ಸಿಗುತ್ತೆ. ಟೀಕೆಗಳು ಸಾಯುತ್ತವೆ, ನೀವು ಮಾಡುವ ಕೆಲಸಗಳು ಮಾತ್ರ ಉಳಿಯುತ್ತವೆ" ಎಂದು ತಿಳಿಸಿದರು.
ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇರಳ, ಗೋವಾದಂತೆ ಸಿಆರ್ಜಡ್ ಕಾನೂನು ಸರಳೀಕರಣ: ಡಿ.ಕೆ.ಶಿವಕುಮಾರ್
ಆತ್ಮಸಾಕ್ಷಿ ಮೆಚ್ಚುವಂತೆ ಕೆಲಸ ಮಾಡಿ
ನನ್ನ ಬಗ್ಗೆ ಬೇರೆಯವರಿಗಿಂತ ನಮ್ಮ ಸಮುದಾಯದ ಕೆಲವರೇ, ನಮ್ಮವರೇ ಅಸೂಯೆಯಿಂದ ಟೀಕೆ ಮಾಡುತ್ತಿದ್ದಾರೆ. ಹಿಂದೆಯಿಂದ, ಮುಂದೆಯಿಂದ ಚಾಕು ಹಾಕುತ್ತಿದ್ದಾರೆ. ರಾಜಕೀಯದಲ್ಲಿ ಇವೆಲ್ಲವೂ ಸಹಜ. ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾವು ಪ್ರಾಮಾಣಿಕವಾಗಿ ಇರಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಎಷ್ಟು ಪ್ರಾಮಾಣಿಕವಾಗಿ ಇದ್ದೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೆ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದರು. ನನಗೆ ಯಾರ ಪ್ರಮಾಣಪತ್ರವೂ ಬೇಡ. ನನ್ನ ಆತ್ಮಸಾಕ್ಷಿಯನ್ನು ನಾನು ಮೆಚ್ಚಿಸಿದರೆ ಸಾಕು. ನೀವು ನಿಮ್ಮ ಸ್ವಾಭಿಮಾನ, ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ" ಎಂದು ಸಲಹೆ ನೀಡಿದರು.
ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ
"ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಆ ಅವಕಾಶ ಸಿಕ್ಕಾಗ ಶ್ರಮವಹಿಸಿ ಯಶಸ್ಸು ಸಾಧಿಸಬೇಕು. ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ನೀವುಗಳು ನಿಮ್ಮ ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಬೇಕು. ನೀವು ಯಾವುದೇ ಉದ್ಯಮ ನಡೆಸುತ್ತಿದ್ದರೂ ನಂಬಿಕೆ ಉಳಿಸಿಕೊಳ್ಳಿ. ಆಗ ಗ್ರಾಹಕರು ನಿಮ್ಮ ಬಳಿ ಬರುತ್ತಾರೆ. ನೀವು ನಂಬಿಕೆ ಮೂಲಕ ನಿಮ್ಮ ಬ್ರಾಂಡ್ ಹೆಚ್ಚಿಸಿಕೊಳ್ಳಬೇಕು" ಎಂದರು.
ನಿಮ್ಮ ಜತೆ ನಾನಿರುವೆ
ʼʼಹಣ್ಣು ಕೆಂಪಾಗಿ, ಚೆನ್ನಾಗಿದ್ದರೆ ಮಾತ್ರ ಕಲ್ಲು ಹೊಡೆಯುತ್ತಾರೆ. ನೀವು ಬಲಿಷ್ಠವಾಗಿದ್ದರೆ ಶತ್ರುಗಳು ಜಾಸ್ತಿ. ನಿಮ್ಮ ಮೇಲೆ ಅಸೂಯೆ ಪಡುವವರು ಹೆಚ್ಚು, ಹೀಗಾಗಿ ಎಚ್ಚರಿಕೆಯಿಂದ ಇರಿ. ನಾನು ವಯಸ್ಸಿನಲ್ಲಿ ಚಿಕ್ಕವನಾದರೂ, ಅನುಭವ ದೊಡ್ಡದಾಗಿದೆ. ನಿಮ್ಮ ಪರವಾಗಿ ನಾನು ಸಹೋದರನಾಗಿ, ಸ್ನೇಹಿತನ್ನಾಗಿ ಇರುತ್ತೇನೆ. ಊರಿನಲ್ಲಿ ಹುಟ್ಟಿದ ಹೋರಿಗಳೆಲ್ಲ ಬಸವ ಆಗುವುದಿಲ್ಲ. ಎಲ್ಲರೂ ನಾಯಕರಾಗಲು ಆಗುವುದಿಲ್ಲ. ನೀವು ಈ ದೇಶದ ಆಸ್ತಿ. ನಿಮಗೆ ಒಳ್ಳೆಯದಾಗಲಿ" ಎಂದು ಹಾರೈಸಿದರು.
"ಉದ್ಯಮಿಗಳು ಸಾಲ ತಂದು ವ್ಯಾಪಾರ ಮಾಡಿ, ಬಡ್ಡಿ ಕಟ್ಟಿ, ಉದ್ಯೋಗಿಗಳಿಗೆ ವೇತನ ನೀಡಿ, ಜಿಎಸ್ ಟಿ ಕಟ್ಟಿ ಕೊನೆಗೆ ಉಳಿಯುವುದನ್ನು ಪಡೆಯುತ್ತೀರಿ. ನೀವು ಸರ್ಕಾರಕ್ಕೂ ಸಹಾಯ ಮಾಡುತ್ತೀರಿ. ಸಮಾಜಕ್ಕೂ ಸಹಾಯ ಮಾಡುತ್ತಿದ್ದೀರಿ. ಇಷ್ಟು ಧೈರ್ಯ ಮಾಡಿ ಉದ್ಯಮಿಗಳಾಗಿ ಶ್ರಮ ವಹಿಸುತ್ತಿರುವ ನಿಮ್ಮ ಜೊತೆ ನಾನಿದ್ದೇನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ" ಎಂದರು.
ಶ್ರಮ ಇದ್ದಲ್ಲಿ ಫಲವಿದೆ
"ನೀವೆಲ್ಲರೂ ಒಕ್ಕಲಿಗರು. ಈ ಹೆಸರೇ ನಿಮ್ಮ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ. ನೀವು ಉದ್ಯಮಿಗಳಾಗಿ ಬೆಳೆಯಲು ಮುಂದಾಗಿದ್ದೀರಿ. ಅನೇಕರು ಯಶಸ್ವಿಯಾಗಿದ್ದೀರಿ. ಯುವ ಒಕ್ಕಲಿಗ ಉದ್ಯಮಿಗಳನ್ನು ಸೇರಿಸಿ ಉತ್ತೇಜನ ನೀಡಲಾಗುತ್ತಿದೆ. ಇಲ್ಲಿ ಉದ್ಯಮಿಗಳು ಪರಸ್ಪರ ಸೇರಿದ್ದಾರೆ. ನಾನು ಇಲ್ಲಿರುವ ಉದ್ಯಮಿಗಳ ಬಗ್ಗೆ ಮಾಹಿತಿ ಪಡೆದೆ. ಅವರು ಬಹಳ ಶ್ರಮ ಪಡುತ್ತಿದ್ದಾರೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ಅವರಿಗೆ ಶುಭ ಹಾರೈಸುತ್ತಿದ್ದೇನೆ" ಎಂದು ತಿಳಿಸಿದರು.
"ನೀವು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ನೀಡಬೇಡಿ. ಕೊಟ್ಟರೆ ನಿಮ್ಮ ಕಥೆ ಮುಗೀತು. ನೀವುಗಳು ನಿಮ್ಮ ನೆರಳನ್ನು ನಂಬಬಾರದು. ನೀವು ಜನರನ್ನು ನಂಬಬೇಕು, ನಂಬಿಕೆಗೆ ಪೆಟ್ಟು ಬೀಳದಂತೆ ಎಚ್ಚರಿಕೆ ವಹಿಸಬೇಕು. ನೀವು ಉದ್ಯೋಗಿಗಳಲ್ಲ, ಹತ್ತಾರು ಜನರಿಗೆ ಉದ್ಯೋಗ ನೀಡುವವರು. ಹೀಗಾಗಿ ನನ್ನ ಅನುಭವದ ಸಲಹೆ ನೀಡುತ್ತಿದ್ದೇನೆ" ಎಂದರು.
"ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ. ಅಂದರೆ ನದಿ ನೀರು, ಮರದ ಹಣ್ಣು, ಹಸುವಿನ ಹಾಲು ಹೇಗೆ ಬೇರೆಯವರ ಉಪಕಾರಕ್ಕೆ ಇದೆಯೋ ಅದೇ ರೀತಿ ನಮ್ಮ ದೇಹ ಕೂಡ ಪರೋಪಕಾರಕ್ಕೆ ಇರಬೇಕು. ಸಮಾಜಕ್ಕೆ ಉಪಯೋಗವಾಗಬೇಕು. ನೀವು ಒಬ್ಬರು ಉದ್ಯಮಿ ಆಗುವುದರಿಂದ ಸಾವಿರಾರು ಕುಟುಂಬಗಳಿಗೆ ಆಸರೆಯಾಗಬಹುದು. ಹೀಗಾಗಿ ಉದ್ಯೋಗಿಗಿಂತ ಉದ್ಯೋಗದಾತರು ಬಹಳ ಮುಖ್ಯ" ಎಂದು ಡಿಕೆಶಿ ಹೇಳಿದರು.
"ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಸಾಯಿಬಾಬಾ ಬಂದಿದ್ದರು. ಅವರು ದುಡ್ಡು ಹಾಗೂ ಬ್ಲಡ್ ಎರಡೂ ನಿರಂತರ ಚಲನೆಯಲ್ಲಿ ಇರಬೇಕು, ಆಗಲೇ ಒಳ್ಳೆಯದು ಎಂದು ಹೇಳಿದ್ದರು. ನೀವು ಯಾವುದೇ ಉದ್ಯಮ ಮಾಡಿದರೂ ಸಮಾಜದಲ್ಲಿ ಉತ್ತಮ ಘನತೆ ಹೊಂದಿರಬೇಕು. ಈ ದೇಶದಲ್ಲಿ 14 ಲಕ್ಷ ಉದ್ಯಮಿಗಳು ವಿದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಈಗ ಈ ಬಗ್ಗೆ ಚರ್ಚೆ ಮಾಡುವುದಿಲ್ಲ" ಎಂದರು.
"ಬಂಗಾರಪ್ಪ ಅವರ ಕಾಲದಲ್ಲಿ ನಾನು ಜೈಲು ಮಂತ್ರಿಯಾಗಿದ್ದಾಗ ನಾಗರತ್ನಮ್ಮ ಅವರು ಸ್ಪೀಕರ್ ಆಗಿದ್ದರು. ಅವರು ಒಮ್ಮೆ ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ನೀನು ಜೈಲಿಗೆ ಹೋಗಿ ಬಾ. ಅಲ್ಲಿರುವವರು ಯಾಕೆ ಜೈಲಿಗೆ ಹೋಗಿದ್ದಾರೆ ಎಂದು ತಿಳಿದುಕೊಂಡು ಬಂದು ಹೇಳು ಎಂದರು. ನಾನು ಜೈಲಿಗೆ ಹೋದೆ, ಅಲ್ಲಿದವರು ಒಬ್ಬ ಹಣ ಕಳ್ಳತನಕ್ಕೆ, ಮತ್ತೊಬ್ಬ ಹೆಣ್ಣಿನ ವಿಚಾರಕ್ಕೆ, ಮತ್ತೊಬ್ಬ ಆಸ್ತಿಗಾಗಿ ದಾಯಾದಿ ಜೊತೆ ಜಗಳವಾಡಿ ಬಂದಿದ್ದ. ಅದೇ ರೀತಿ ನಿಮಗೆ ಯಾರಾದರೂ ತೊಂದರೆ ಕೊಡುವವರು, ಮೋಸ ಮಾಡುವವರು ಇದ್ದರೆ, ಅವರು ನಿಮ್ಮ ಅಕ್ಕಪಕ್ಕದಲ್ಲಿ ಇರುವವರೇ ಆಗಿರುತ್ತಾರೆ. ಬೇರೆಯವರು ತೊಂದರೆ ಕೊಡಲ್ಲ. ನೀವು ಜಾಗರೂಕರಾಗಿ ಇರಬೇಕು" ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಮನೆಗೆ ನಾಗಾ ಸಾಧುಗಳ ಭೇಟಿ, ಏನಂತ ಆಶೀರ್ವದಿಸಿದ್ರು?
"ಅಕ್ಬರ್ ತನ್ನ ಆಸ್ಥಾನದಲ್ಲಿ ಈ ಅಂಗೈನಲ್ಲಿ ಯಾಕೆ ಕೂದಲು ಇಲ್ಲ ಎಂದು ಪ್ರಶ್ನೆ ಕೇಳುತ್ತಾನೆ. ಆಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡುತ್ತಾರೆ. ಕೊನೆಗೆ ಬೀರ್ ಬಲ್ ಗೆ ಕೇಳಿದಾಗ, ಸ್ವಾಮಿ ನೀವು ದಾನಿಗಳು ಬೇರೆಯವರಿಗೆ ದಾನ ಕೊಟ್ಟು ಕೊಟ್ಟು ಅಂಗೈಯಲ್ಲಿ ಕೂದಲು ಬೆಳೆದಿಲ್ಲ ಎನ್ನುತ್ತಾನೆ. ನಿನ್ನ ಕೈಯಲ್ಲಿ ಯಾಕೆ ಇಲ್ಲ ಎಂದು ಕೇಳಿದಾಗ, ನಿಮ್ಮಿಂದ ದಾನ ಪಡೆದು ಪಡೆದು ಕೂದಲು ಉದುರಿವೆ ಎಂದು ಹೇಳುತ್ತಾರೆ. ಹಾಗಾದರೆ ಬೇರೆಯವರ ಕೈಯಲ್ಲಿದೆ ಯಾಕೆ ಕೂದಲು ಇಲ್ಲ ಎಂದು ಕೇಳಿದಾಗ, ಅವರು ತಮಗೆ ದಾನ ಸಿಕ್ಕಿಲ್ಲ ಎಂದು ಕೈ ಹಿಸುಕಿಕೊಂಡು ಕೂದಲು ಬೆಳೆದಿಲ್ಲ ಎಂದು ಹೇಳುತ್ತಾನೆ. ಅಸೂಯೆಯಿಂದ ನೀವು ಬಹಳ ಹುಷಾರಾಗಿರಿ" ಎಂದರು.
"ಶನಿವಾರ ನಾವು ಮಂಗಳೂರಿನಲ್ಲಿ ಹೊಸ ಪ್ರಯೋಗಕ್ಕೆ ಹೊಸ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಕರಾವಳಿ ಭಾಗದಲ್ಲಿ ಗಲಾಟೆ, ಘರ್ಷಣೆ ಹೆಚ್ಚಾಗಿ ಸಂಜೆ ಮೇಲೆ ಅಂಗಡಿ ಬಾಗಿಲು ಹಾಕಿಕೊಂಡು ವ್ಯಾಪಾರ ವಹಿವಾಟು ಇಲ್ಲವಾಗಿದೆ. ನಿನ್ನೆ ಮಂಗಳೂರಿನಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಎಲ್ಲಾ ಉದ್ಯಮಿಗಳನ್ನು ಕರೆಸಿ ಸಮಾವೇಶ ಮಾಡಿದೆ. ನಮ್ಮ ರಾಜ್ಯದಲ್ಲಿರುವ 300 ಕಿ.ಮಿ ಸಮುದ್ರತೀರ ಪರಿಸರ, ದೇವಾಲಯ, ಸೌಂದರ್ಯ ಪ್ರಪಂಚಕ್ಕೆ ಪರಿಚಯಿಸಲು ಮುಂದಾಗಿದ್ದೇವೆ. ಈ ಭಾಗದಲ್ಲಿ ಒಂದೇ ಒಂದು ಪಂಚತಾರ ಹೋಟೆಲ್ ಇಲ್ಲ. ಈ ಭಾಗದ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಲು ನಿನ್ನೆ ಚರ್ಚೆ ಮಾಡಿದ್ದೇವೆ" ಎಂದು ಉಪಮುಖ್ಯಂತ್ರಿ ಡಿಕೆಶಿ ಹೇಳಿದರು.