ಬೆಂಗಳೂರು, ಜ.16: ಮಕರ ಸಂಕ್ರಾಂತಿ (Makar sankrant 2026) ಹಬ್ಬದ (Sankranti Festival) ದಿನವಾದ ನಿನ್ನೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಮಕರ ಸಂಕ್ರಾಂತಿ ಸಂಭ್ರಮದ ನಡುವೆ ಚಿಕ್ಪೇಟೆಯಲ್ಲಿರುವ ಬಳೇಪೇಟೆಯಲ್ಲಿ ದೇವಸ್ಥಾನದ ಮುಂದೆ ಹಚ್ಚಿದ ಪಟಾಕಿ ಕಿಡಿಯಿಂದ ಅಗ್ನಿ ಅವಘಡ ಸಂಭವಿಸಿದ್ದು ಕೆಲಕಾಲ ಆತಂಕ ಮನೆ ಮಾಡಿತ್ತು.
ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಾಲಯದ ಮುಂದೆ ಆಯೋಜಕರು ಹುಲ್ಲು, ಹೂವು ಹಾಗೂ ಬ್ಯಾನರ್ಗಳಿಂದ ಸುಂದರವಾಗಿ ಸಿಂಗಾರ ಮಾಡಿದ್ದರು. ರಾತ್ರಿ 7 ಗಂಟೆ ಸುಮಾರಿಗೆ ಪಟಾಕಿ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ಕಿಡಿ ಸಿಂಗಾರಗೊಂಡಿದ್ದ ತೋರಣಕ್ಕೆ ತಾಕಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.
ದೇವಾಲಯದ ಮುಂದೆ ಸಚಿವ ದಿನೇಶ್ ಗುಂಡೂರಾವ್ ಅವರ ಬ್ಯಾನರ್ ಕೂಡ ಅಳವಡಿಸಲಾಗಿತ್ತು. ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಹಾಗೂ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದರು. ಸ್ಥಳೀಯರ ಸಕಾಲಿಕ ಕ್ರಮದಿಂದಾಗಿ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ.
Makara Sankranti 2026: ಮಕರ ಸಂಕ್ರಾಂತಿ ಸಂಭ್ರಮ: ದುಬಾರಿ ದುನಿಯಾ ನಡುವೆಯೂ ಖರೀದಿ ಜೋರು