ಬೆಂಗಳೂರು 18 ಮಾರ್ಚ್ 2026: ರಾಜ್ಯಸಭೆಯಿಂದ ನಿವೃತ್ತರಾಗುವ ಸದಸ್ಯರಿಗೆ ವಿದಾಯ ಶುಭ ಹಾರೈಕೆ ಹೇಳುವ ಭರದಲ್ಲಿ ತಮ್ಮ ಬಗ್ಗೆ ಸದನದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಡಿದ ಮಾತಿಗೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಪ್ರೀತಿ ಮಾಡಿದ್ದು ನಮ್ಮನ್ನು, ಆದರೆ ಮದುವೆಯಾಗಿದ್ದು ಮೋದಿಯನ್ನು' ಎಂದು ಖರ್ಗೆ ಅವರು ತಮ್ಮ ಬಗ್ಗೆ ನೀಡಿದ ಹೇಳಿಕೆಗೆ ಮಾಜಿ ಪ್ರಧಾನಿಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಖರ್ಗೆ ಅವರಿಗೆ ಪತ್ರ ಬರೆದು ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆಗಿನದ್ದು ಪ್ರೀತಿಯಲ್ಲ, ಅದು ಒಂದು ಬಲವಂತದ ಮದುವೆಯಾಗಿತ್ತು ಎಂದು ಕಿಡಿಕಾರಿರುವ ಮಾಜಿ ಪ್ರಧಾನಿಗಳು, ಆ ಅಂದಿನ ಸಂಬಂಧದಲ್ಲಿನ ಕಿರುಕುಳ ಹಾಗೂ ಹಿಂಸೆ ಇದ್ದ ಕಾರಣದಿಂದಲೇ ನಾನು ಅವರಿಗೆ ವಿಚ್ಛೇದನ ನೀಡಿದೆ ಎಂದು ಹೇಳಿದ್ದಾರೆ.
ಪತ್ರದಲ್ಲಿ ಮಾಜಿ ಪ್ರಧಾನಿಗಳು ಕೆಲ ಮಹತ್ವದ ಪ್ರಸ್ತಾಪಿಸಿ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
"ನನ್ನ ಹಳೆಯ ಗೆಳೆಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಮದುವೆಯ ಭಾಷೆಯಲ್ಲೇ ಮಾತನಾಡಿದ್ದಾರೆ. ಅದಕ್ಕೆ ನಾನು ಅದೇ ಭಾಷೆಯಲ್ಲಿ ಉತ್ತರಿಸುವುದಾದರೆ ಕಾಂಗ್ರೆಸ್ ಜೊತೆಗಿನದ್ದು ಪ್ರೀತಿಯಲ್ಲ. ಅದು ಒಂದು ಬಲವಂತದ ಮದುವೆ ಆಗಿತ್ತು. ಆ ಸಂಬಂಧದಲ್ಲಿ ಕಿರುಕುಳ ಮತ್ತು ಹಿಂಸೆ ಇದ್ದ ಕಾರಣ ನಾನು ಅವರಿಗೆ ವಿಚ್ಛೇದನ ಕೊಡಬೇಕಾಯಿತು" ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.
ಕಾಂಗ್ರೆಸ್ ಜತೆಗಿನದ್ದು 'ಬಲವಂತದ ಮದುವೆ'; ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ದೇವೇಗೌಡ ತಿರುಗೇಟು
ತಮ್ಮ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಸಂಬಂಧ ಹಾಗೂ ಕಹಿ ಅನುಭವಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ದೇವೇಗೌಡರು; 2018ರ ರಾಜಕೀಯ ವಿದ್ಯಮಾನಗಳನ್ನು ಪ್ರಸ್ತಾಪಿಸಿ ಖರ್ಗೆ ಅವರಿಗೆ ಕಾಲೆಳೆದಿದ್ದಾರೆ.
2018ರಲ್ಲಿ ಅಂದಿನ ಕಾಂಗ್ರೆಸ್ ನಾಯಕರಾದ ಗುಲಾಂನಬಿ ಆಜಾದ್ ಅವರು ಬಂದು ನನ್ನ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವುದಾಗಿ ಹೇಳಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ. ಈಗ ನನ್ನ ಬಗ್ಗೆ ಲಘುವಾಗಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದು ನನ್ನ ಬಳಿಗೆ ಬಂದಿದ್ದ ಎಲ್ಲರ ಎದುರಿನಲ್ಲಿಯೇ ನೇರವಾಗಿ ಹೇಳಿದ್ದೆ. ಆಗ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದ್ದರು. ಆದರೆ ಕಾಂಗ್ರೆಸ್ ನಾಯಕರು ಎಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಬೇಕೆಂದು ಪಟ್ಟು ಹಿಡಿದರು ಎಂಬ ಅಂಶವನ್ನು ದೇವೇಗೌಡರು ಬಹಿರಂಗಪಡಿಸಿದ್ದಾರೆ.
ನಾವು ಕಾಂಗ್ರೆಸ್ ನಾಯಕರ ಮಾತನ್ನು ನಂಬಿ ಅವರ ಜತೆ ಸರ್ಕಾರ ಮಾಡಿದೆವು. ಆಮೇಲೆ ಅವರು ನಮಗೆ ನಂಬಿಕೆ ದ್ರೋಹ ಮಾಡಿದರು. 2018ರಲ್ಲಿ ಸಾಕಷ್ಟು ನಾಟಕ ಮಾಡಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಪಕ್ಷವು 2019ರಲ್ಲಿ ನಮ್ಮನ್ನು ನಿರ್ದಯವಾಗಿ ಕೈಬಿಟ್ಟಿತು. ಕಾಂಗ್ರೆಸ್ ಶಾಸಕರು ಬಿಜೆಪಿಗೆ ವಲಸೆ ಹೋದರು. ಅವರ ಪಕ್ಷದ ಶಾಸಕರು ಬಿಜೆಪಿಗೆ ಹೋಗಲು ಯಾರು ಪ್ರಚೋದನೆ ನೀಡಿದವರು ಯಾರು ಎಂಬುದು ಜಗತ್ತಿಗೇ ತಿಳಿದಿದೆ. ಅಂದು ಶಾಸಕರನ್ನು ಎತ್ತಿಕಟ್ಟಿದವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದಿದ್ದರೆ ಇವತ್ತು ನನ್ನ ಗೆಳೆಯ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿದ್ದರು ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಜತೆ ಸಂಬಂಧ ಕಡಿದುಕೊಳ್ಳಲು ಕಾರಣಗಳನ್ನು ಬಿಡಿಸಿಡುವುದರ ಜತೆಗೆ, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಕಾರಣ ನೀಡಿದ್ದಾರೆ. ನಾನು ಸ್ಥಿರ ಮತ್ತು ದೃಢ ಮೈತ್ರಿಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡೆ ಎಂದು ಅವರು ಹೇಳಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದ ಜೊತೆಗಿನ ಮೈತ್ರಿಯನ್ನು ಬಿಟ್ಟು ಹೊರ ಬರಲಿಲ್ಲ. ಅವರೇ ತಾವಾಗಿಯೇ ನಮ್ಮಿಂದ ದೂರ ಹೋದರು. ನಮಗೆ ಅನ್ಯ ದಾರಿಯಿಲ್ಲದೆ ಸುಸ್ಥಿರ ಮೈತ್ರಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ನೀಡಿ ಹೊರಗೆ ಬರಬೇಕಾಯಿತು ಎಂದು ಮಾಜಿ ಪ್ರಧಾನಿಗಳು ಪತ್ರದಲ್ಲಿ ಬರೆದಿದ್ದಾರೆ.
Railway Exam: ರೈಲ್ವೆ ಪರೀಕ್ಷೆ ರದ್ದು; ಕನ್ನಡದಲ್ಲೇ ಎಕ್ಸಾಂ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ
ಬೆಂಗಳೂರಿನ ನನ್ನ ಮನೆಯಲ್ಲಿ ಯುಗಾದಿ ಹಬ್ಬದ ಆಚರಣೆಯಲ್ಲಿ ನಿರತವಾಗಿದ್ದ ಕಾರಣಕ್ಕೆ ನನಗೆ ಸಂಸತ್ತಿನಲ್ಲಿ ಖರ್ಗೆ ಅವರಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪತ್ರ ಬರೆಯಬೇಕಾಯಿತು ಎಂದು ಅವರು ಹೇಳಿದ್ದಾರೆ.