ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

BAMUL Milk incentive: ಯುಗಾದಿ ಹಬ್ಬಕ್ಕೆ ಬಮುಲ್‌ನಿಂದ ಹೈನುಗಾರರಿಗೆ ಭರ್ಜರಿ ಗಿಫ್ಟ್; ಪ್ರತಿ ಲೀಟರ್‌ ಹಾಲಿಗೆ 1 ರೂ. ಪ್ರೋತ್ಸಾಹ ಧನ, ಗುತ್ತಿಗೆ ಕಾರ್ಮಿಕರಿಗೆ 5 ಸಾವಿರ ಬೋನಸ್‌

ಕಳೆದ ವರ್ಷ 14.50 ಕೋಟಿ ನಷ್ಟದಲ್ಲಿದ್ದ ಬಮುಲ್‌ಗೆ ಈ ವರ್ಷ 60 ಕೋಟಿ ರೂ. ಲಾಭವಾಗಿದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲು ಬಮುಲ್‌ ಮುಂದಾಗಿದ್ದು, ಮಾ.31 ಅಥವಾ ಏ.10ರ ಒಳಗೆ ರೈತರ ಖಾತೆಗೆ ಹಣ ಬರಲಿದೆ. ಬಮುಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ತೀರ್ಮಾನ ಮಾಡಲಾಗಿದೆ.

ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌.

ಬೆಂಗಳೂರು, ಮಾ.12: “2025-26ನೇ ಸಾಲಿನಲ್ಲಿ ಬಮುಲ್ (BAMUL Milk incentive) 3,400 ಕೂಟಿ ರೂ. ವಹಿವಾಟು ಮಾಡಿದ್ದು, 14.50 ಕೋಟಿ ನಷ್ಟದಲ್ಲಿದ್ದ ಸಂಸ್ಥೆಯು ಈ ವರ್ಷ 60 ಕೋಟಿ ಲಾಭ ಕಂಡಿದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 1 ರೂ. ಹೆಚ್ಚುವರಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ (DK Suresh) ಅವರು ತಿಳಿಸಿದರು. ಡೈರಿ ವೃತ್ತದಲ್ಲಿರುವ ಬಮುಲ್‌ ಕಚೇರಿಯಲ್ಲಿ ಸುರೇಶ್ ಅವರು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು.

“ಕಳೆದ ಸಾಲಿನಲ್ಲಿ ನಮ್ಮ ಒಕ್ಕೂಟದಿಂದ 2,900 ಕೋಟಿ ವಹಿವಾಟು ಮಾಡಿದ್ದು, ಈ ವರ್ಷ ಮಾರ್ಚ್ 31ರ ವೇಳೆಗೆ 3,400 ಕೋಟಿಯಷ್ಟು ವಹಿವಾಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಮ್ಮಲ್ಲಿ ಆಡಳಿತಾತ್ಮಕ ವೆಚ್ಚ ಹೆಚ್ಚಾಗಿದೆ. ನಮ್ಮಲ್ಲಿ 880 ಕಾಯಂ ಸಿಬ್ಬಂದಿ, 1800 ಗುತ್ತಿಗೆ ಕಾರ್ಮಿಕರು ಇದ್ದಾರೆ. ತಿಂಗಳಿಗೆ 15-16 ಕೋಟಿ ರೂ. ಸಿಬ್ಬಂದಿ ವೆಚ್ಚಕ್ಕೆ ಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತಾತ್ಮಕವಾಗಿ, ಮಾರುಕಟ್ಟೆ ವಿಚಾರದಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ ಮಾಡುವ ಜವಾಬ್ದಾರಿ ನಮ್ಮ ಆಡಳಿತ ಮಂಡಳಿಗೆ ಇದೆ.

ನಾನು ಬಮುಲ್ ಅಧ್ಯಕ್ಷನಾದ ಬಳಿಕ ಬದಲಾವಣೆ ಮಾಡುವ ನಿರೀಕ್ಷೆ ರೈತರು, ಕಾರ್ಮಿಕರಲ್ಲಿದೆ. ನಾನು ಏನು ಮಾಡಿದ್ದೇನೋ ಗೊತ್ತಿಲ್ಲ, ಆದರೆ ನನ್ನ ಮೇಲೆ ನಿರೀಕ್ಷೆಯಂತೂ ಇದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುವಾಗ ನಿರ್ದೇಶಕರು, ಸಿಬ್ಬಂದಿ ಸಹಕಾರ ಬೇಕಾಗುತ್ತದೆ. ಇವರ ಸಹಕಾರದಿಂದ ಒಂದು ಹಂತಕ್ಕೆ ಬಂದಿದ್ದು, ಈ ವರ್ಷ 500 ಕೋಟಿ ರೂ.ನಷ್ಟು ವಹಿವಾಟು ಹೆಚ್ಚಾಗಿದೆ” ಎಂದು ತಿಳಿಸಿದರು.

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಗೇಟ್‌ಗಳ ಬದಲಾವಣೆ: ಡಿ.ಕೆ. ಶಿವಕುಮಾರ್

1800 ಗುತ್ತಿಗೆ ಕಾರ್ಮಿಕರಿಗೆ ತಲಾ 5 ಸಾವಿರ ರೂ. ಬೋನಸ್

“ಹಿಂದಿನ ಆಡಳಿತ ಮಂಡಳಿಯಲ್ಲಿ 280 ಜನರನ್ನು ಹೊಸದಾಗಿ ನೇಮಕ ಮಾಡಿಕೊಂಡಿದ್ದರು. 3 ವರ್ಷವಾಗಿದ್ದರೂ ನಮಗೆ ಕಾಯಂ ಮಾಡಿಲ್ಲ ಎಂದು ಅವರಿಂದ ಒತ್ತಡವಿದೆ. ಇದನ್ನು ಮಾಡಿದರೆ ವಾರ್ಷಿಕವಾಗಿ 1.60 ಕೋಟಿ ಹೆಚ್ಚಿನ ವೇತನ ನೀಡಬೇಕಾಗುತ್ತದೆ. ಸರ್ಕಾರದ ನಿಯಮ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ವೇತನ ಪ್ರಮಾಣ 2% ಇರಬೇಕು. ಆದರೆ ನಮ್ಮ ಒಕ್ಕೂಟದಲ್ಲಿ ಅದು 6.5% ಇದೆ. ಇದನ್ನು ತಡೆಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಹೀಗಾಗಿ ನಾವು ನಮ್ಮದೇ ಆದ ಗುರಿ ಹೊಂದಿದ್ದೇವೆ.

ನಮ್ಮ ವಹಿವಾಟಿನ ಮುಂದಿನ ಗುರಿ 3,400 ಕೋಟಿಯಿಂದ 4500 ಅಥವಾ 5000 ಕೋಟಿಗೆ ಹೋಗಬೇಕು. ಆಗ ಆಡಳಿತ ವೆಚ್ಚ ಸುಧಾರಿಸಬಹುದು. ನಮ್ಮ ಸಂಸ್ಥೆ ಲಾಭ ಕಂಡಿರುವ ಹಿನ್ನೆಲೆಯಲ್ಲಿ, ನಾವು ಕಾರ್ಮಿಕರಿಗೆ ಬಾಕಿ ಇದ್ದ 4.68 ಕೋಟಿ ಡಿಎ ಅನ್ನು ನೀಡಲು ತೀರ್ಮಾನಿಸಿದ್ದೇವೆ. 3 ವರ್ಷದಿಂದ ಕಾಯಂ ಆಗದ ಸಿಬ್ಬಂದಿಗಳನ್ನು ಕಾಯಂ ಮಾಡಿದ್ದೇವೆ. ನಮಗೆ ಶಕ್ತಿ ನೀಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ತಲಾ 5 ಸಾವಿರ ಬೋನಸ್ ನೀಡಲು ತೀರ್ಮಾನಿಸಿದ್ದೇವೆ. 2300 ಪ್ರಾಥಮಿಕ ಹಾಲು ಒಕ್ಕೂಟಗಳಿಗೆ ನಿರ್ವಹಣೆಗೆ ಪ್ರತಿ ಲೀಟರ್‌ಗೆ 1.40 ರೂ. ನೀಡುತ್ತಿದ್ದು, ಈ ಬಾರಿ ನಮ್ಮ ನಿರ್ದೇಶದ ಮನವಿ ಮೇರೆಗೆ ಪ್ರತಿ ಸಂಘಗಳಿಗೆ 15 ಸಾವಿರದಂತೆ 3.45 ಕೋಟಿ ರೂ.ಗಳನ್ನು ನೀಡಲಾಗುವುದು. ನಮ್ಮಲ್ಲಿ 1,27,644 ಹಾಲು ಉತ್ಪಾದಕರಿದ್ದು, ಅವರು ಈ ವರ್ಷ 59,39,78,492 ಲೀಟರ್ ಹಾಲು ನೀಡಿದ್ದಾರೆ. ನಮ್ಮ ಒಕ್ಕೂಟದ ಇತಿಹಾಸದಲ್ಲಿ ಮೊದಲನ ಬಾರಿಗೆ ನಾವು ಅವರಿಗೆ ಪ್ರತಿ ಲೀಟರ್‌ಗೆ 1 ರೂ. ನಂತೆ 59,39,78,492 ರೂ. ಅನ್ನು ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಿದ್ದೇವೆ. ಯುಗಾದಿ ಹಬ್ಬದ ಕೊಡುಗೆಯಾಗಿ ನಮ್ಮ ಆಡಳಿತ ಮಂಡಳಿ ಈ ನಿರ್ಧಾರ ಮಾಡಿದ್ದು, ಮಾ.31 ಅಥವಾ ಏ.10ರ ಒಳಗಾಗಿ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು” ಎಂದು ತಿಳಿಸಿದರು.

“ಕ್ಷೀರ ಕ್ಷೇತ್ರದಲ್ಲಿ ರೈತರು ಬೆಳಗ್ಗೆ ಹಾಗೂ ರಾತ್ರಿ ಎದ್ದು ಸೂಕ್ಷ್ಮ ಪ್ರಾಣಿ ಹಸುವನ್ನು ಸಾಕಬೇಕು. ಈ ರೈತರಿಗೆ ಶಕ್ತಿ ನೀಡಬೇಕು ಎಂಬುದು ನಮ್ಮ ಉದ್ದೇಶ. ಇಂದು ಕೆಎಂಎಫ್ ಹಾಗೂ ನಂದಿನಿ ಮೂಲಕ ಸಾಕಷ್ಟು ಬೆಳವಣಿಗೆ ಕಂಡಿದ್ದು, ಈಗ ಖಾಸಗಿ ಸಂಸ್ಥೆಗಳು ನಗರ ಪ್ರದೇಶಗಳಲ್ಲಿ ಲಗ್ಗೆ ಹಾಕಿವೆ. ಇಂದು ಸಾಮಾಜಿಕ ಜಾಲತಾಣ ಕೂಡ ಪ್ರಭಾವ ಬೀರಿದೆ. ಗ್ರಾಹಕರಿಗೆ ಗುಣಮಟ್ಟದ ಹಾಲು, ಉತ್ಪನ್ನ ನೀಡುವುದು, ಕಾರ್ಮಿಕರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಬೆಂಗಳೂರು ಹಾಲು ಒಕ್ಕೂಟ ಕೆಲಸ ಮಾಡುತ್ತಿದೆ. ನಾನು 3 ಬಾರಿ ಸಂಸದನಾಗಿದ್ದರೂ ನಮ್ಮ ನಾಯಕರ ಒತ್ತಾಯದ ಮೇರೆಗೆ ನನಗೆ ಈ ಹಾಲು ಒಕ್ಕೂಟದ ಜವಾಬ್ದಾರಿ ನೀಡಿದ್ದಾರೆ. ಕಳೆದ 8 ತಿಂಗಳಿನಿಂದ ಈ ಒಕ್ಕೂಡದ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಪ್ರತಿನಿತ್ಯ ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದ್ದು, ನಮ್ಮ ಒಕ್ಕೂಟದಿಂದ 16-18 ಲಕ್ಷ ಲೀಟರ್ ಹಾಲು ಶೇಖರಿಸುತ್ತಿದ್ದೇವೆ. ನಮಗೂ ಬೇರೆ ಖಾಸಗಿಯವರಿಗೆ ಇರುವ ವ್ಯತ್ಯಾಸ ಎಂದರೆ ನಾವು 24 ತಾಸಿನೊಳಗೆ ಗ್ರಾಹಕರ ಮನೆ ಬಾಗಿಲಿಗೆ ಹಾಲು ಪೂರೈಸುವ ಕೆಲಸ ಮಾಡುತ್ತಿದ್ದೇವೆ. ಬೇರೆಯವರು ಬ್ರ್ಯಾಂಡಿಗ್ ಮಾಡಿಕೊಂಡು ಮಾರುಕಟ್ಟೆ ಮಾಡುತ್ತಿದ್ದಾರೆ” ಎಂದರು.

“ಬೆಂಗಳೂರು ಹಾಲು ಒಕ್ಕೂಟದಲ್ಲಿ 24 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ನಮ್ಮ ಮುಂದೆ ಮಾರುಕಟ್ಟೆ ಸವಾಲು ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದೆ. ಆದರೂ ಬೇರೆ ಹಾಲುಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಹಾಲು ಎಂದರೆ ಅದು ನಂದಿನಿ ಮಾತ್ರ. ಇದು ಹೆಮ್ಮೆಯ ವಿಚಾರ. ನಾವು ಸರ್ಕಾರದ ಆದೇಶಕ್ಕೆ ಕಟ್ಟುಬಿದ್ದು ಈ ಬೆಲೆ ಏರಿಕೆ ಹಣವನ್ನು ಗ್ರಾಹಕರಿಂದ ಪಡೆದು ರೈತರಿಗೆ ನೀಡುತ್ತಿದ್ದೇವೆ. ನಾವು 16-18 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿದರೂ ಹಾಲು ಮಾರಾಟ ಮಾಡುತ್ತಿರುವುದು 10 ಲಕ್ಷ ಲೀಟರ್ ಮಾತ್ರ. ಕೆಎಂಎಫ್‌ನಲ್ಲಿ 1.05 ಕೋಟಿ ಲೀಟರ್ ಹಾಲು ಸಂಗ್ರಹಿಸಿದರೂ ಮಾರಾಟ ಮಾಡುವುದು 48-50 ಲಕ್ಷ ಲೀಟರ್ ಮಾತ್ರ. ಉಳಿದ ಹಾಲನ್ನು ವಿವಿಧ ಪದಾರ್ಥಗಳ ಮೂಲಕ ಮಾರುತ್ತಿದ್ದೇವೆ. ಹಾಲಿನ ಬೆಲೆಯಲ್ಲಿ ಹೆಚ್ಚಳವಾದ 4 ರೂ. ಮೊಸರು, ತುಪ್ಪ, ಬೆಣ್ಣೆ ಹಾಗೂ ಇತರೆ ಉತ್ಪನ್ನಗಳ ಬೆಲೆ ಏರಿಕೆ ಆಗಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಹಾಲು ಒಕ್ಕೂಟ ಸಂಸ್ಥೆ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಯಿತು. ನಮ್ಮ ಹೊಸ ಆಡಳಿತ ಮಂಡಳಿ ಬಂದ ಬಳಿಕ ನಮ್ಮ ಸಂಸ್ಥೆ 14.50 ಕೋಟಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಲು ಉತ್ಪಾದನೆ ಹೆಚ್ಚಾದಾಗ 2 ರೂ. ದರ ಕಡಿಮೆ ಮಾಡಿ ರೈತರಿಂದ ಸಂಗ್ರಹ ಮಾಡುವುದು ಒಕ್ಕೂಟಗಳ ವಾಡಿಕೆ. ಆದರೆ ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ 14 ಕೋಟಿ ನಷ್ಟದಲ್ಲಿದ್ದರೂ ರೈತರಿಗೆ ದರ ಕಡಿಮೆ ಮಾಡಲಿಲ್ಲ. ನಮ್ಮ ಮುಂದೆ ಸಾಕಷ್ಟು ಸವಾಲುಗಳಿತ್ತು” ಎಂದು ವಿವರಿಸಿದರು.

“ನಮ್ಮ ಒಕ್ಕೂಟದಲ್ಲಿ ಸಂಗ್ರಹಿಸುವ ಹಾಲಿನಲ್ಲಿ 65% ಅನ್ನು ಮಾತ್ರ ಮಾರಾಟ ಮಾಡಿದ್ದು, ಉಳಿದ ಹಾಲನ್ನು ಉತ್ಪನ್ನಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಬೇರೆಯವರ ಜತೆ ಸ್ಪರ್ಧೆಗಾಗಿ ತಂದಿರುವ ವಿವಿಧ ಹಾಲುಗಳಾದ ಟೋನ್ಡ್ ಮಿಲ್ಕ್, ಸಮೃದ್ಧಿ, ಶುಭಂ ಹಾಲುಗಳಲ್ಲಿ 1 ರೂ. 20 ಪೈಸೆ, 2 ರೂ. ನಷ್ಟು ನಷ್ಟವಿದೆ. ಹೊಟೇಲ್‌ಗಳಿಗೆ ಮಾರುವ 6 ಲೀಟರ್ ಪ್ಯಾಕೆಟ್ ಮೂಲಕ ಪ್ರತಿ ಲೀಟರ್‌ಗೆ 1.60 ರೂ. ನಷ್ಟವಾಗುತ್ತದೆ. ಇದನ್ನು ನಾವು ಸರ್ಕಾರಕ್ಕೆ ಹೇಳಿದರೆ, ಸರ್ಕಾರವೂ ಒಪ್ಪಲ್ಲ, ನೀವು ಒಪ್ಪುವ ಸ್ಥಿತಿಯಲ್ಲಿ ಇಲ್ಲ. ಆದರೂ ಇದು ರೈತರ ಸಂಸ್ಥೆಯಾಗಿರುವುದರಿಂದ ರೈತರಿಗೆ ಗೌರವ ಉಳಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ” ಎಂದರು.

“ನಾವು ರೈತರ ಹಿತ ಕಾಯುವ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಬದಲಾವಣೆ ಮಾಡಲು ಶ್ರಮಿಸುತ್ತಿದ್ದೇವೆ. ನಮ್ಮಲ್ಲಿ ಪ್ರತಿನಿತ್ಯ ಎಷ್ಟು ಪ್ಯಾಕೆಟ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ ಎಂದು ಕಂಪ್ಯೂಟರ್ ಮೂಲಕ ಲೆಕ್ಕ ಹಾಕಲಾಗುತ್ತಿದೆ. ನಮ್ಮ 2300 ಸ್ಥಳೀಯ ಹಾಲು ಸೊಸೈಟಿಗಳಲ್ಲಿ ಆನ್ ಲೈನ್ ಮೂಲಕ ಗುಣಮಟ್ಟದ ಪರೀಕ್ಷೆ ಮಾಡಲು ಅಗತ್ಯ ತಂತ್ರಾಂಶಗಳನ್ನು ನೀಡಲಾಗಿದೆ. ಅವರ ಹಾಲಿನ ತೂಕದ ಹಾಲು ಹಾಗೂ ಅದರ ಮೊತ್ತವನ್ನು ಅವರ ಮೊಬೈಲ್‌ಗೆ ನೀಡಲಾಗಿದೆ. ಇಡೀ ರಾಷ್ಟ್ರದಲ್ಲಿ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿರುವ ಸರ್ಕಾರ ಬೇರೊಂದಿಲ್ಲ” ಎಂದು ತಿಳಿಸಿದರು.

ಸೋರಿಕೆ ತಡೆಗಟ್ಟಿ, ಮಾರುಕಟ್ಟೆ ಸುಧಾರಣೆ ಕ್ರಮ:

ನಷ್ಟದಲ್ಲಿರುವ ಒಕ್ಕೂಟವನ್ನು ಲಾಭಕ್ಕೆ ತರಲು ಏನೆಲ್ಲಾ ಸುಧಾರಣೆ ತಂದಿದ್ದೀರಿ ಎಂದು ಕೇಳಿದಾಗ, “ಮಾರುಕಟ್ಟೆಯಲ್ಲಿ ಸೋರಿಕೆ ತಡೆಗಟ್ಟಿದ್ದೇವೆ. ಸಾಗಾಣಿಕಾ ವೆಚ್ಚ ಕಡಿಮೆ ಮಾಡಿದ್ದೇವೆ, ರೈತರ ಹಾಲಿನ ಗುಣಮಟ್ಟ ಹೆಚ್ಚಳ ಮಾಡಿದ್ದೇವೆ. ನಮ್ಮ ಚೀಸ್, ಪನೀರ್, ವೇ ಪೌಡರ್ ಉತ್ಪಾದನೆ ಮಾಡುತ್ತಿದ್ದೇವೆ. ಚಿಕ್ಕಬಳ್ಳಾಪುರದವರಿಗೆ 1.50 ಲಕ್ಷ ಲೀಟರ್ ಕೋ ಪ್ಯಾಕಿಂಗ್ ಮಾಡುತ್ತಿದ್ದೇವೆ. ದೆಹಲಿಯಲ್ಲಿ ಮದರ್ ಡೈರಿ ಅವರಿಗೆ 2 ಲಕ್ಷ ಲೀಟರ್ ಮಾಡುತ್ತಿದ್ದೇವೆ. ಕನಕಪುರಲ್ಲಿರುವ ಮೆಗಾ ಡೈರಿ 14 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯ ಹೊಂದಿದ್ದು, ಮಂಡ್ಯ ಹಾಲು ಒಕ್ಕೂಟದಿಂದ 5 ಲಕ್ಷ ಹೆಚ್ಚುವರಿ ಹಾಲು ನೀಡಿ ಎಂದು ಕೆಎಂಎಫ್ ಅವರನ್ನೇ ಕೇಳಿದ್ದೆ. ಕನಕಪುರ ಡೈರಿಯಲ್ಲಿ 8 ವರ್ಷಗಳಿಂದ ಯಾವತ್ತೂ ನಾವು 14 ಲಕ್ಷ ಹಾಲು ಸಂಸ್ಕರಣೆ ಮಾಡಿಲ್ಲ. ಕಳೆದ ವರ್ಷದ ವರೆಗೂ ಅಲ್ಲಿ ಸರಾಸರಿ 4.50 ಲಕ್ಷ ಲೀಟರ್ ಸಂಸ್ಕರಣೆ ಮಾಡಲಾಗಿತ್ತು. ಈ ವರ್ಷ 10-11 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡಿದ್ದು, ಈಗ ಸರಾಸರಿ 8.50 ಲಕ್ಷ ಲೀಟರ್ ಸಂಸ್ಕರಣೆ ಮಾಡಲಾಗುತ್ತಿದೆ. ನಮ್ಮ ಒಟ್ಟಾರೆ ವೆಚ್ಚ ತಗ್ಗುವಂತಾಗಿದೆ. ದುಂದುವೆಚ್ಚ ಕಡಿಮೆ ಮಾಡಲಾಗಿದೆ. ಸಿಬ್ಬಂದಿ, ಮಾರುಕಟ್ಟೆ ಸುಧಾರಣೆ ಮಾಡಲಾಗಿದೆ. ಸ್ಪರ್ಧೆಯಿಂದ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಇನ್ನು ಹೆಚ್ಚಿನ ಬದಲಾವಣೆ ತರುವ ಸಾಧ್ಯತೆಗಳಿವೆ” ಎಂದು ತಿಳಿಸಿದರು.

ರಾಗಿ ಮಾಲ್ಟ್ ಜತೆ ಹಾಲಿನ ಪುಡಿ ಮಿಶ್ರಣ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ

ಸೆಸ್ ದರ ಹೆಚ್ಚಳ ಮಾಡುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೀರಾ ಎಂದು ಕೇಳಿದಾಗ, “ನಮ್ಮ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಲ್ಲಿ ನೀಡಲಾಗುವ ಹಾಲಿನ ಪುಡಿ ಜತೆಗೆ ಸರ್ಕಾರ ರಾಗಿ ಮಾಲ್ಟ್ ನೀಡುತ್ತಿದೆ. ಈ ಪ್ರಕ್ರಿಯೆಯಲ್ಲಿ ಹಾಲಿನ ಪುಡಿಯ ಸ್ವಲ್ಪ ಪ್ರಮಾಣ ಮತ್ತೆ ಮಾರುಕಟ್ಟೆಗೆ ಬೇರೆ ರೂಪದಲ್ಲಿ ಬರುತ್ತಿವೆ. ಅವುಗಳನ್ನು ತಡೆಯಲು ರಾಗಿ ಮಾಲ್ಟ್ ಪುಡಿಯನ್ನು ನಾವೇ ಮಿಶ್ರಣ ಮಾಡಿ ಕೊಡಬೇಕಾಗಿದೆ. ಸ್ಥಳೀಯ ಬೇಕರಿಗಳಲ್ಲಿ ಬಿಸ್ಕೆಟ್ ಮಾಡಲು ಹಾಲಿನ ಪುಡಿ ಬೇಕಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪುಡಿಯನ್ನು ಈ ಬೇಕರಿಗೆ 2 ರೂ. ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಸೋರಿಕೆಯಿಂದ ನಮ್ಮ ಉತ್ಪನ್ನಗಳಿಗೆ ಹೊಡೆತ ಬೀಳಲಿದೆ. ಹೀಗಾಗಿ ರಾಗಿ ಮಾಲ್ಟ್ ಹಾಗೂ ಹಾಲಿನ ಪುಡಿಯನ್ನು ಪ್ರತ್ಯೇಕವಾಗಿ ನೀಡುವ ಬದಲು, ನಾವೇ ಮಿಶ್ರಣ ಮಾಡಿ ನೀಡಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆಗ ಸೋರಿಕೆಯಾಗುವ ಹಾಲಿನ ಪುಡಿಯನ್ನು ತಡೆಯಬಹುದು. ನಮ್ಮ ಒಕ್ಕೂಟದಿಂದ ವಾರ್ಷಿಕವಾಗಿ ಈ ಯೋಜನೆಗಾಗಿಯೇ 7,400 ಟನ್ ಹಾಲಿನ ಪುಡಿ ನೀಡುತ್ತಿದ್ದೇವೆ. ಇದಕ್ಕಾಗಿ ನಿತ್ಯ 75 ಸಾವಿರ ಲೀ. ಹಾಲು ಬಳಕೆ ಮಾಡಲಾಗುತ್ತಿದೆ” ಎಂದು ವಿವರಿಸಿದರು.

ಅಪೇಕ್ಷೆಯೊಂದಿಗೆ ಯಾವುದೇ ಹುದ್ದೆಗೆ ಹೋಗಬಾರದು

ಖಾಸಗಿ ಸಂಸ್ಥೆಗಳಿಂದ ಸ್ಪರ್ಧೆ ಎದುರಿಸಲು ಎಲ್ಲಾ ಒಕ್ಕೂಟಗಳು ಒಟ್ಟಾಗಿ ಕೆಲಸ ಮಾಡಬಹುದಲ್ಲವೇ ಎಂದು ಕೇಳಿದಾಗ, “ಕೆಎಂಎಫ್ ಆಡಳಿತ ಮಂಡಳಿ ಇಲ್ಲ. ಆಡಳಿತ ಮಂಡಳಿ ಇಲ್ಲದಿರುವ ಕಾರಣ ಒಕ್ಕೂಟದ ಸದಸ್ಯರು ತೀರ್ಮಾನಮಾಡಲು ಆಗುವುದಿಲ್ಲ, ಎಲ್ಲಾ ಒಕ್ಕೂಟಗಳಲ್ಲೂ ಹೊಸ ಆಡಳಿತ ಮಂಡಳಿ ಬಂದಿವೆ. ಈಗ ಆಡಳಿತಾಧಿಕಾರಿಗಳ ಅಧಿಪತ್ಯದಲ್ಲಿ ನಡೆಯುತ್ತಿವೆ” ಎಂದು ತಿಳಿಸಿದರು.

ಹೊಸ ಆಡಳಿತ ಮಂಡಳಿ ಯಾವಾಗ ಬರುತ್ತದೆ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ” ಎಂದರು.

ಈ ತಿಂಗಳಾಂತ್ಯದಲ್ಲಿ ಚುಣಾವಣೆ ನಡೆಯಲಿದ್ದು, ನೀವೇ ಅಧ್ಯಕ್ಷರಾಗುತ್ತೀರಿ ಎಂಬ ಚರ್ಚೆ ಇದೆ. ನೀವು ಆಕಾಂಕ್ಷಿಗಳೇ ಎಂದು ಕೇಳಿದಾಗ, “ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸದ್ಯಕ್ಕೆ ತೆಗೆದುಕೊಂಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಷ್ಟೇ ನಮ್ಮ ಗುರಿ. ನಾನು ಯಾವುದಕ್ಕೂ ಆಕಾಂಕ್ಷಿಯಲ್ಲ. ಈ ಸ್ಥಾನದ ಆಕಾಂಕ್ಷಿಯೂ ಅಲ್ಲ. ಈಗಲೂ ನನ್ನನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಿದರೆ ನಾನು ನೆಮ್ಮದಿಯಾಗಿ ಹೋಗುವೆ. ಇದೆಲ್ಲವೂ ಜವಾಬ್ದಾರಿಯುತ ಸ್ಥಾನಗಳು, ಅಪೇಕ್ಷೆಪಟ್ಟು ಯಾವುದೇ ಹುದ್ದೆಗೆ ಹೋಗಬಾರದು” ಎಂದರು.

ಕೇವಲ 8 ತಿಂಗಳಲ್ಲಿ ಸಂಸ್ಥೆಯನ್ನು ಲಾಭಕ್ಕೆ ತಂದಿದ್ದು, ಕೆಎಂಎಫ್ ಅಧ್ಯಕ್ಷರಾದರೆ ಇಡೀ ರಾಜ್ಯದ ರೈತರಿಗೆ ನೆರವಾಗುತ್ತದೆಯಲ್ಲವೇ ಎಂದು ಕೇಳಿದಾಗ, “ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಎಂಎಫ್ ಬಗ್ಗೆ ನಾನು ಅಧ್ಯಯನ ಮಾಡಿಲ್ಲ. ನಾನು ಕೇವಲ ಬಮುಲ್‌ ಬಗ್ಗೆ ಮಾತ್ರ ಅಧ್ಯಯನ ಮಾಡಿದ್ದು, ಅದರ ಬಗ್ಗೆ ಮಾತ್ರ ಆಲೋಚಿಸುತ್ತಿದ್ದೇನೆ. ನಾನು ನಮ್ಮ ಒಕ್ಕೂಟ, ನಮ್ಮ ರೈತರು, ನಮ್ಮ ಗ್ರಾಹಕರು, ನಮ್ಮ ಉತ್ಪನ್ನಗಳ ಬಗ್ಗೆ ಮಾತ್ರ ಗಮನಹರಿಸುತ್ತಿದ್ದೇನೆ ಹೊರತು ಬೇರೆಯದರ ಬಗ್ಗೆ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಎ2 ಮಿಲ್ಕ್ ತುಪ್ಪಕ್ಕೆ ಸುಧಾರಾಣಿ ರಾಯಭಾರಿ, ಶೀಘ್ರವೇ ಉತ್ಪನ್ನ ಮಾರುಕಟ್ಟೆಗೆ

ಸುಧಾರಾಣಿ ಅವರನ್ನು ರಾಯಭಾರಿಯಾಗಿ ಮಾಡಿಕೊಂಡಿದ್ದು ವಿವಾದವಾಗಿರುವ ಬಗ್ಗೆ ಕೇಳಿದಾಗ, “ದೇಸಿ ಹಾಲು (A2 ಮಿಲ್ಕ್) ಉತ್ಪನ್ನವನ್ನು ಕೇವಲ ನಮ್ಮ ಒಕ್ಕೂಟದಿಂದ ಮಾತ್ರ ಪರಿಚಯಿಸಲಾಗುತ್ತಿದ್ದು, ಅದಕ್ಕೆ ರಾಯಭಾರಿಯನ್ನಾಗಿ ನಾವು ಸುಧಾರಾಣಿ ಅವರ ಜತೆ ಮಾತನಾಡಿದ್ದೇವೆ. ನಮ್ಮ ಒಕ್ಕೂಟದ ಕೆಳಗೆ ನಮ್ಮ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. A2 ತುಪ್ಪವನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ” ಎಂದರು.

ಡಿ.ಕೆ. ಶಿವಕುಮಾರ್‌ಗೆ ಉಜ್ವಲ ರಾಜಕೀಯ ಭವಿಷ್ಯವಿದೆ: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಹಿನ್ನೆಲೆ ಸಿಎಂ ಅಭಿನಂದನೆ

ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆದು ಸಿಎಂ ಆಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ನಾನು ಸಾಮಾಜಿಕ ಜಾಲತಾಣ ನೋಡುವುದಿಲ್ಲ. ಹೀಗಾಗಿ ನನಗೆ ಅದರ ಬಗ್ಗೆ ಗೊತ್ತಿಲ್ಲ” ಎಂದು ತಿಳಿಸಿದರು.