Guru Purnima 2025: ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಡೆಯಲು ಹಿಂದೂಗಳು ಶಕ್ತಿಯ ಉಪಾಸನೆ ಮಾಡಬೇಕು- ಪ್ರಮೋದ್ ಮುತಾಲಿಕ್
Guru Purnima 2025: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಗುರುವಾರ ‘ಗುರು ಪೂರ್ಣಿಮಾ ಮಹೋತ್ಸವ’ ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡ ಮಾತನಾಡಿದರು.


ಬೆಂಗಳೂರು: ಇಂದು ಸದ್ಯ ಹಿಂದೂಗಳ ಮೇಲೆ ಮತ್ತು ಭಾರತದ ಮೇಲೆ ಆಗುತ್ತಿರುವ ಆಘಾತಗಳನ್ನು ಗಮನಿಸಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹಿಂದೂ ಧರ್ಮದ ಮೇಲೆ ವಿವಿಧ ರೀತಿಯ ಆಯಾಮಗಳಲ್ಲಿ ಆಕ್ರಮಣಗಳು ನಡೆಯುತ್ತಿದೆ. ಲವ್ ಜಿಹಾದ್, ಮತಾಂತರ, ಗೋ ಹತ್ಯೆ, ಜನಸಂಖ್ಯಾ ಜಿಹಾದ್ ಇವೆಲ್ಲವುಗಳಿಂದ ಭವಿಷ್ಯದಲ್ಲಿ ಹಿಂದೂ ಸಮಾಜ ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಇಂದು ಸಮಾಜ ಕೇವಲ ಸಕಾಮ ಭಕ್ತಿಯನ್ನು ಮಾಡುತ್ತಿದೆ, ಆದರೆ ಇಂದು ಎಲ್ಲಾ ಹಿಂದೂಗಳು ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಗುರು ಪೂರ್ಣಿಮಾ ಮಹೋತ್ಸವ’ ದಲ್ಲಿ (Guru Purnima 2025) ಪಾಲ್ಗೊಂಡು ಮಾತನಾಡಿದ ಅವರು, ಲೋಕಮಾನ್ಯ ಬಾಲಗಂಗಾಧರ ತಿಲಕ್, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ ಅವರಂತೆ ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ನಾವು ಬಾಹ್ಯ ಶತ್ರುಗಳನ್ನ ಸುಲಭವಾಗಿ ಎದುರಿಸಬಹುದು ಆದರೆ ಆಂತರಿಕ ಶತ್ರುಗಳನ್ನ ಎದುರಿಸುವುದು ತುಂಬಾ ಕಠಿಣ. ಆದರೆ ಈ ಕಾರ್ಯವನ್ನು ಹಿಂದೂ ಸಂಘಟನೆಗಳಾದ ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮ ಸೇನೆ, ಬಜರಂಗದಳ ಈ ಸಂಘಟನೆಗಳು ಎದುರಿಸುತ್ತವೆ. ಈ ಎಲ್ಲ ಸಂಘಟನೆಗಳಿಗೆ ಮಾರ್ಗದರ್ಶನ ಪ್ರೇರಣೆ ಗುರುವಿನ ಸ್ಥಾನದಲ್ಲಿದ್ದು ಸನಾತನ ಸಂಸ್ಥೆಯು ಮಾಡುತ್ತಿದೆ. ಇಂತಹ ಸರ್ವ ಶ್ರೇಷ್ಠವಾದಂತಹ ಸನಾತನ ಸಂಸ್ಥೆಯ ಜತೆಗೆ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂ ಸಂಘಟನೆಗಳು ಕಾರ್ಯವನ್ನು ಮಾಡಿದರೆ ಬಹುಬೇಗ ಹಿಂದೂ ರಾಷ್ಟ್ರವನ್ನು ಸಾಕಾರ ಮಾಡಬಹುದು ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡ ಮಾತನಾಡಿದರು. ಈ ವೇಳೆ ತಮ್ಮ ಜೀವವನ್ನು ಲೆಕ್ಕಿಸದೆ ಗೋರಕ್ಷಣೆಯನ್ನು ಮಾಡುವ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್ ಕೆರೆಹಳ್ಳಿ ಅವರನ್ನು ಸತ್ಕಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಂತರಾದ ರಮಾನಂದ ಗೌಡ, ಭಾ.ಜ.ಪ. ಮುಖಂಡರಾದ ಉಮೇಶ್ ಶೆಟ್ಟಿ, ಎಂ.ಎಲ್. ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇದೆ 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆ