ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಸಮಾಧಾನದಿಂದಲೇ ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ರ ಸಿದ್ದರಾಮಯ್ಯ? 100 ದಿನಗಳ ಬಳಿಕ ರಹಸ್ಯ ಬಿಚ್ಚಿಟ್ರು ಡಿಸಿಎಂ ಡಾ.ಜಿ. ಪರಮೇಶ್ವರ

Dr G Parameshwara: ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುವುದಾಗಿ ಸಿದ್ದರಾಮಯ್ಯ ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಮುಗಿದು ಹೋದ ಅಧ್ಯಾಯ. ಈ ವಿಚಾರವಾಗಿ ಪುನಃ ಪುನಃ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ (ಸಂಗ್ರಹ ಚಿತ್ರ)

ಬೆಂಗಳೂರು, ಸೆ. 11: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ಅವರ ದೆಹಲಿ ಭೇಟಿ ಹಿಂದೆ ಯಾವುದೇ ಅಸಮಾಧಾನದ ಕಾರಣಗಳಿಲ್ಲ. ಹಾಗೊಂದು ವೇಳೆ ಅಸಮಾಧಾನ ಇದ್ದಿದ್ದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೇ ಕೊಡುತ್ತಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ (Dr G Parameshwara) ಸ್ಪಷ್ಟಪಡಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಶುಕ್ರವಾರ ಅವರು ಮಾತನಾಡಿದರು.

ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುವುದಾಗಿ ಸಿದ್ದರಾಮಯ್ಯ ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಮುಗಿದು ಹೋದ ಅಧ್ಯಾಯ. ಈ ವಿಚಾರವಾಗಿ ಪುನಃ ಪುನಃ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಅವರು ಪ್ರಸ್ತುತ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿರುವುದರಿಂದ ದೆಹಲಿ ಭೇಟಿ ಸಹಜ ಪ್ರಕ್ರಿಯೆಯಾಗಿದೆ. ಅದಕ್ಕೆ ಬೇರೆ ಅರ್ಥಗಳನ್ನು ಕಲ್ಪಿಸಬಾರದು ಎಂದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ನಮ್ಮ ಸರ್ಕಾರಕ್ಕೆ 100 ದಿನಗಳು ಪೂರೈಸಿವೆ. ಸಾಕಷ್ಟು ಸವಾಲುಗಳು ನಮ್ಮ ಮುಂದಿವೆ. ದೃತಿಗೆಡದೆ ಎಲ್ಲವನ್ನೂ ನಿಭಾಯಿಸಿಕೊಂಡು ಉತ್ತಮ ಆಡಳಿತ ನೀಡುತ್ತೇವೆ ಎಂದರು.

ಅವಿರೋಧ ಆಯ್ಕೆ ಕಾರಣಕ್ಕೆ ಎಸ್‌. ರವಿ ಆಯ್ಕೆ

ಅವಿರೋಧವಾಗಿ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು, ಚುನಾವಣೆ ನಡೆಸುವುದು ಬೇಡ ಎಂಬುದು ನಮ್ಮ ಪಕ್ಷದ ನಿರ್ಧಾರವಾಗಿತ್ತು. ಹಾಗಾಗಿ ಕೊನೆಯ ಹಂತದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ ಅವರನ್ನು ಆಯ್ಕೆ ಮಾಡಲಾಗಿದೆ. ನಿರ್ಣಾಯಕ ಸಭೆಯಲ್ಲಿ ಕೆ. ಎನ್‌. ರಾಜಣ್ಣ ಅವರೂ ಹಾಜರಿದ್ದರು. ಅವರ ಸಮ್ಮತಿ ಮೇರೆಗೆ ಅಧ್ಯಕ್ಷರ ಆಯ್ಕೆ ನಡೆದಿದೆ. ಹಾಗಾಗಿ ಈ ವಿಚಾರದಲ್ಲಿ ಅಸಮಾಧಾನದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರ ಹುದ್ದೆಯನ್ನು 2.5-2.5 ವರ್ಷಗಳ ಅಧಿಕಾರ ಸೂತ್ರದಲ್ಲಿ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹೀಗಾದರೆ ಮುಂದೆ ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಾರದಿದ್ದರೆ ಕೆ.ಎನ್. ರಾಜಣ್ಣ ಅವರಿಗೆ ಅಧಿಕಾರ ತಪ್ಪಿದಂತಾಗುವುದಿಲ್ಲವೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಾ.ಜಿ. ಪರಮೇಶ್ವರ ಅವರು, ಅಪೆಕ್ಸ್‌ ಬ್ಯಾಂಕ್‌ ಸ್ವತಂತ್ರ ಹಾಗೂ ಪಕ್ಷಾತೀತ ಸಂಸ್ಥೆಯಾಗಿದೆ. ಅದರ ಆಡಳಿತ ಮಂಡಳಿಯ ನಿರ್ದೇಶಕರು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ತುಮಕೂರಿಗೆ ನಕ್ಸಲ್‌ ನಿಗ್ರಹ ದಳ

ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲ್‌ ಚಟುವಟಿಕೆಗೆ ಸಂಬಂಧಿಸಿದ ಪೋಸ್ಟರ್‌ ಪ್ರತ್ಯಕ್ಷವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಗಮನಕ್ಕೆ ಬಂದಿದೆ. ಇಂದು ತುಮಕೂರಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿಯ ಎಸ್‌ಪಿ ಜತೆ ಈ ಕುರಿತು ಚರ್ಚೆ ಮಾಡುತ್ತೇನೆ. ಅಂತಹ ಬೆಳವಣಿಗೆ ಕಂಡುಬಂದರೆ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗುವುದು ಎಂದರು.

ನಕ್ಸಲ್‌ ಮುಕ್ತ ಕರ್ನಾಟಕ ಘೋಷಣೆ ಬಳಿಕ ಕಾರ್ಕಳದಲ್ಲಿದ್ದ ನಕ್ಸಲ್‌ ನಿಗ್ರಹ ದಳವನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಅರ್ಧ ಪಡೆಯನ್ನು ಕೋಮು ಗಲಭೆ ನಿಯಂತ್ರಣಕ್ಕಾಗಿ ಸ್ಪೆಷಲ್‌ ಆ್ಯಕ್ಷನ್‌ ಫೋರ್ಸ್‌ ಆಗಿ ಪರಿವರ್ತಿಸಲಾಗಿದೆ. ಇನ್ನರ್ಧ ಪಡೆ ನಕ್ಸಲ್‌ ನಿಗ್ರಹ ದಳ ಆಗಿಯೇ ಕಾರ್ಯಾಚರಣೆ ನಡೆಸುತ್ತಿದೆ. ಪಾವಗಡದಲ್ಲಿ ನಕ್ಸಲ್‌ ಚಟುವಟಿಕೆ ಖಾತರಿಯಾದರೆ ನಕ್ಸಲ್‌ ನಿಗ್ರಹ ಪಡೆಯನ್ನು ತುಮಕೂರಿಗೆ ಕರೆಸುತ್ತೇವೆ ಎಂದರು.‌

ರಾಜಕೀಯ ರಂಗದಲ್ಲಿ ಆಧುನಿಕತೆ, ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ. ಶಿವಕುಮಾರ್ ಎಂದ ಡಿಸಿಎಂ ಪರಮೇಶ್ವರ್

ಮಾಜಿ ಯೋಧರಿಗೂ ನಿವೇಶನ

ವಸತಿ ರಹಿತರಿಗಾಗಿ ಪ್ರತಿ ಜಿಲ್ಲೆಗೆ 30x40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಯೋಜನೆಯಡಿ ಮಾಜಿ ಯೋಧರಿಗೂ ನಿವೇಶನ ನೀಡಲಾಗುವುದು. ಮೊದಲ ಹಂತದಲ್ಲಿ ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ ತಿಳಿಸಿದರು.