ಬೆಂಗಳೂರು: ಮನರೇಗಾ ಉಳಿಸಿ ಪ್ರತಿಭಟನಾ ಸಮಾವೇಶದ ಭಾಗವಾಗಿ ಚಿಕ್ಕಬಳ್ಳಾಪುರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಬೈಕ್ ರ್ಯಾಲಿ (Congress Bike Rally) ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ಅವರು ಕೂಡ ಸ್ಕೂಟರ್ ಮೇಲೆ ತೆರಳಿ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಈ ರ್ಯಾಲಿಯಲ್ಲಿ ತಲೆಗೆ ಹೆಲ್ಮೆಟ್ ಧರಸಿದೆ, ಇನ್ಶೂರೆನ್ಸ್ ಇಲ್ಲದ ಬೈಕ್ನಲ್ಲಿ ಭಾಗಿಯಾಗಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ (Mohammed Haris Nalapad) ವಿರುದ್ಧ ವಿಪಕ್ಷಗಳಿಂದ ಟೀಕೆಗಳು ವ್ಯಕ್ತವಾಗಿವೆ.
ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು 'ಕುಮಾರಸ್ವಾಮಿ ಫಾರ್ ಸಿಎಂʼ ಎಂಬ ಫೇಸ್ಬುಕ್ ಖಾತೆಯಲ್ಲಿ ನಲಪಾಡ್ ಫೋಟೊ ಹಂಚಿಕೊಂಡು, ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಉಪಮುಖ್ಯಮಂತ್ರಿಗಳೇ ನಿಮ್ಮ ಮೂರನೇ ಮಗನ ಬೈಕಿಗೆ ಇನ್ಶೂರೆನ್ಸ್ ಇಲ್ಲ, ತಲೆಗೆ ಹೆಲ್ಮೆಟ್ ಕೂಡ ಇಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಬೆಂಗಳೂರು ಸಂಚಾರ ಪೊಲೀಸ್ಗೆ, ಇನ್ಶೂರೆನ್ಸ್ ಅವಧಿ ಮುಗಿದಿರುವ ಮಾಹಿತಿಯ ಫೋಟೊ ಟ್ಯಾಗ್ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ KA02JB3071 ಸಂಖ್ಯೆಯ ಬುಲೆಟ್ ಬೈಕ್ನಲ್ಲಿ ಮೊಹಮ್ಮದ್ ನಲಪಾಡ್ ಪಾಲ್ಗೊಂಡಿದ್ದರು. ಆದರೆ, 2024ರ ಮಾರ್ಚ್ 5ರಂದೇ ಈ ಬೈಕ್ನ ಇನ್ಶೂರೆನ್ಸ್ ಅವಧಿ ಮುಕ್ತಾಯವಾಗಿರುವುದು ಕಂಡುಬಂದಿದೆ.
ಗ್ರಾಮೀಣ ಉದ್ಯೋಗ ಹಕ್ಕುಗಳ ರಕ್ಷಣೆಗೆ ಮತ್ತು ರೈತ-ಕಾರ್ಮಿಕರ ಪರ ಹೋರಾಟಕ್ಕೆ ನಮ್ಮ ಬದ್ಧತೆ ಅಚಲವಾಗಿದೆ ಎಂದು ಬೈಕ್ ರ್ಯಾಲಿ ಬಗ್ಗೆ ಮೊಹಮ್ಮದ್ ನಲಪಾಡ್ ಪೋಸ್ಟ್ ಹಂಚಿಕೊಂಡಿದ್ದರು. ಹೆಲ್ಮೆಟ್ ಧರಸಿದೆ, ಇನ್ಶೂರೆನ್ಸ್ ಇಲ್ಲದ ಬೈಕ್ನಲ್ಲಿ ಭಾಗಿಯಾಗಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಕರೆ
ಈ ಪೋಸ್ಟ್ಗೆ ಹಲವರು ಕಮೆಂಟ್ಗಳನ್ನು ಮಾಡಿದ್ದು, ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ. ರಾಜಕಾರಣಿಗಳಿಗೆ ರೂಲ್ಸ್ ಇರಲ್ಲ, ಓಟು ಹಾಕಿದ ನಾಗರಿಕರಿಗೆ ಮಾತ್ರ ನಿಯಮಗಳು ಅನ್ವಯ ಎಂದು ಅಸಮಾಧಾನ ಹೊರಹಾಕಿದ್ದಾರೆ.