ಬೆಂಗಳೂರು: ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಯಂತಿಗಳು ಹಾಗೂ ಧಾರ್ಮಿಕ ಮೆರವಣಿಗೆಗಳ ವೇಳೆ ಡಿಜೆ ಮತ್ತು ಐಟಂ ಹಾಡುಗಳನ್ನು ಸಂಪೂರ್ಣವಾಗಿ ನಿಷೇಧಿಸುವ (DJ ban) ಬಗ್ಗೆ ಕರ್ನಾಟಕ ಸರ್ಕಾರ ಒಲವು ತೋರಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj tangadagi) ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಡಿಜೆ ವಿಚಾರವು ಬುಧವಾರ ತೀವ್ರ ಚರ್ಚೆಗೆ ಗ್ರಾಸವಾಯಿತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಡಿಜೆ ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ವಿಷಯ ಪ್ರಸ್ತಾಪಿಸಿದರು. ಎಲ್ಲಾ ಜಯಂತಿಗಳಲ್ಲಿ ಡಿಜೆಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ. ಈ ಬಗ್ಗೆ ನಾವು ಗಂಭೀರವಾಗಿ ಚರ್ಚಿಸಬೇಕಾಗಿದೆ. ಯಾವುದೇ ಜಯಂತಿಯಿರಲಿ, ಡಿಜೆ ಮತ್ತು ಐಟಂ ಸಾಂಗ್ ಇಲ್ಲದೆ ನಮ್ಮ ದೇವರುಗಳು ಮೆರವಣಿಗೆಯಲ್ಲಿ ಮುಂದೆ ಸಾಗುವುದಿಲ್ಲ ಎಂಬಂತಹ ನಾಚಿಕೆಗೇಡಿನ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಜೆಗಳು ಮತ್ತು ಐಟಂ ಹಾಡುಗಳಿಂದ ನಮ್ಮ ಸಂಸ್ಕೃತಿಗೆ ಯಾವುದೇ ರೀತಿಯ ಒಳಿತಾಗುವುದಿಲ್ಲ ಎಂದು ಲಾಡ್ ಹೇಳಿದರು.
ಸಂತೋಷ್ ಲಾಡ್ ಅವರ ಮಾತಿಗೆ ದನಿಗೂಡಿಸಿದ ಸಚಿವ ಶಿವರಾಜ್ ತಂಗಡಗಿ ಅವರು, ಡಿಜೆಗಳಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಈ ಕುರಿತು ನಾವು ಶೀಘ್ರದಲ್ಲೇ ಆದೇಶವೊಂದನ್ನು ಹೊರಡಿಸುತ್ತೇವೆ ಎಂದು ಭರವಸೆ ನೀಡಿದರು. ಇದೇ ವೇಳೆ ಡಿಜೆ ನಿಷೇಧಿಸಲು ಪ್ರತಿಪಕ್ಷ ಬಿಜೆಪಿಯ ಸಹಕಾರವನ್ನೂ ಸಚಿವರು ಕೋರಿದರು. ಬಿಜೆಪಿಯವರೆಲ್ಲರೂ ಒಪ್ಪಿದರೆ, ನಾವು ಡಿಜೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಹೇಳಿದರು.
ಆದರೆ, ಶಿವಮೊಗ್ಗದ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು. ಅವರಿಗೆ ಡಿಜೆ ಬೇಡವಾಗಿರಬಹುದು, ಆದರೆ ನಮಗೆ ಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ನೀವು ಅಜಾನ್ ಅನ್ನು ನಿಷೇಧಿಸಬೇಕು. ಅದನ್ನು ಮಾಡುತ್ತೀರಾ? ಎಂದು ಸರ್ಕಾರವನ್ನು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ಸುಪ್ರೀಂ ಕೋರ್ಟ್ ಶಬ್ದದ ಡೆಸಿಬಲ್ ಮಟ್ಟವನ್ನು ನಿಗದಿಪಡಿಸಿದೆ. ಎಲ್ಲಾ ಸರ್ಕಾರಗಳು ಅದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದರು.
ಹಿರಿಯ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಡಿಜೆ ನಿಷೇಧದ ಯೋಜನೆಯನ್ನು ಮುಕ್ತವಾಗಿ ಬೆಂಬಲಿಸಿದರು. ಡಿಜೆಗಳ ಅಬ್ಬರದ ಶಬ್ದದಿಂದ ಹೃದಯದಲ್ಲಿ ಪೇಸ್ಮೇಕರ್ ಅಳವಡಿಸಿಕೊಂಡಿರುವ ಜನರು ನರಳುತ್ತಿರುವುದನ್ನು ನಾನು ಖುದ್ದಾಗಿ ನೋಡಿದ್ದೇನೆ. ಮಕ್ಕಳು ಕಿವಿ ಮುಚ್ಚಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ವಿಚಾರದಲ್ಲಿ ಪೊಲೀಸರು ಸಹ ಅಸಹಾಯಕರಾಗಿದ್ದಾರೆ. ಡಿಜೆಗಳಿಂದ ಆಗುತ್ತಿರುವ ತೀವ್ರ ಶಬ್ದ ಮಾಲಿನ್ಯದ ಬಗ್ಗೆ ನಾವು ಗಂಭೀರವಾಗಿ ಚಿಂತಿಸಲೇಬೇಕು ಎಂದು ಸುರೇಶ್ ಕುಮಾರ್ ಎಂದು ತಿಳಿಸಿದರು.
ಆನೆಗುಂದಿ ಉತ್ಸವ ಮರು ಆರಂಭಕ್ಕೆ ರೆಡ್ಡಿ ಆಗ್ರಹ
ಶಿವಮೊಗ್ಗದಲ್ಲಿ ನಿಯಮಿತವಾಗಿ 'ಸಹ್ಯಾದ್ರಿ ಉತ್ಸವ' ಅಥವಾ 'ಮಲೆನಾಡು ಉತ್ಸವ' ಆಯೋಜಿಸಲು ಸರ್ಕಾರದಿಂದ ಅನುದಾನ ಕೋರಿ ಶಾಸಕ ಚನ್ನಬಸಪ್ಪ ಅವರು ಪ್ರಸ್ತಾಪಿಸಿದ ವೇಳೆ ಡಿಜೆ ಚರ್ಚೆ ಮುನ್ನೆಲೆಗೆ ಬಂದಿತು. ಇದೇ ವೇಳೆ ಕೊಪ್ಪಳದಲ್ಲಿ 'ಆನೆಗುಂದಿ ಉತ್ಸವ'ವನ್ನು ಮರುಪ್ರಾರಂಭಿಸುವಂತೆ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯಕ್ಕೆ ದಿಸೆ ತೋರದ ಬಜೆಟ್ ಕನ್ನಡಿಗರ ಪಾಲಿನ ಆರ್ಥಿಕ ಮರಣ ಶಾಸನ: ಅರವಿಂದ ಬೆಲ್ಲದ್ ಟೀಕೆ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತಂಗಡಗಿ, "ಎಲ್ಲಾ ಜಿಲ್ಲೆಗಳಿಗೂ ತಮ್ಮದೇ ಆದ ಉತ್ಸವಗಳು ಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದ್ದು, ಇದು ನಮಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಉತ್ಸವವು ಆಯಾ ಸ್ಥಳದ ಇತಿಹಾಸಕ್ಕೆ ತಳುಕುಹಾಕಿಕೊಂಡಿರಬೇಕು. ದಸರಾ ಮೊದಲು ಮೈಸೂರು, ಮಡಿಕೇರಿ ಮತ್ತು ಚಾಮರಾಜನಗರಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ಶಿವಮೊಗ್ಗವನ್ನೂ ಸೇರಿಸಲಾಯಿತು ಎಂದು ಮಾಹಿತಿ ನೀಡಿದರು.
ಜಿಲ್ಲಾವಾರು ಅಥವಾ ಪ್ರಾದೇಶಿಕ ಉತ್ಸವಗಳನ್ನು ನಿಯಮಿತವಾಗಿ ಆಯೋಜಿಸಲು ಸರ್ಕಾರ ಸ್ಪಷ್ಟ ನೀತಿಯೊಂದನ್ನು ರೂಪಿಸಬೇಕು ಎಂದು ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಆಗ್ರಹಿಸಿದರು.