ಬೆಂಗಳೂರು, ಮೇ 16: ರಿಯಲ್ ಎಸ್ಟೇಟ್ ಮೂಲಕ ಆಸ್ತಿ ಮಾಡಿಕೊಂಡಿರುವುದು ಕುಮಾರಸ್ವಾಮಿ ಅವರ ಕುಟುಂಬದವರು. ಪಿಆರ್ಆರ್ ರಸ್ತೆ ಭಾಗದಲ್ಲಿ ಹೆದರಿಸಿ ಆಸ್ತಿಗಳನ್ನು ಬರೆಸಿಕೊಳ್ಳುವ ಕೆಲಸವನ್ನು ಅವರ ಅಣ್ಣ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಆರೋಪಿಸಿದ್ದಾರೆ. ಹೊರಮಾವಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಶುಲ್ಕ ಪಾವತಿಸಿ ಖಾತಾ ಬದಲಾವಣೆ ಮಾಡಿಕೊಳ್ಳಬೇಡಿ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, 'ಕುಮಾರಸ್ವಾಮಿ ಅವರು ಬರೀ ಹಗಲುಗನಸು ಕಾಣುತ್ತಿರುತ್ತಾರೆ. ಬಿಡದಿ ಟೌನ್ ಶಿಪ್ ಮಾಡುವುದು ಬೇಡ ಎಂದು ನಿನ್ನೆ ಹೇಳಿದ್ದಾರಲ್ಲಾ? ಅದನ್ನು ಆರಂಭಿಸಿದ್ದು ಯಾರು? ಅವರೇ ಅಧಿಸೂಚನೆ ಹೊರಡಿಸಿದ್ದಾರೆ. ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವವರು ಯಾರು? ಅವರ ಅಣ್ಣ ಪಿಆರ್ ಆರ್ ರಸ್ತೆ ನೆಪದಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದಾರೆ. ದೊಡ್ಡ ಗುಬ್ಬಿ, ಚಿಕ್ಕ ಗುಬ್ಬಿ ಭಾಗದಲ್ಲಿ ಕೇಳಿ ನೋಡಿ. ಅವರು ಹೇಗೆ ಜನರನ್ನು ಹೆದರಿಸಿ ಎಲ್ಲಾ ಆಸ್ತಿಗಳನ್ನು 7, 8, 10 ಲಕ್ಷಕ್ಕೆ ಆಸ್ತಿಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬುದನ್ನು ಹೇಳುತ್ತಾರೆ. ಈಗ ಆ ಅಸ್ತಿಗಳೆಲ್ಲ 25, 30, 50 ಕೋಟಿ ರೂ. ಆಸ್ತಿಯಾಗಿದೆ. ಅವರು ಬೇರೆಯವರ ಬಗ್ಗೆ ಮಾತನಾಡುವುದು ಬೇಡ' ಎಂದರು.
ಖಾತಾ ಪರಿವರ್ತನೆಗೆ 2% ಶುಲ್ಕ ಕಟ್ಟುವುದು ಬೇಡ ಎನ್ನುತ್ತಿದ್ದಾರಲ್ಲಾ ಎಂದು ಕೇಳಿದಾಗ, 'ಅವರದ್ದು ಹಗಲುಗನಸು. ಅವರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ಜನಪರ ಕೆಲಸ ಮಾಡುತ್ತಿದೆ. ಜನ ಇದನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ' ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯಾಗಿದೆ, ಚಿನ್ನ ಖರೀದಿ ಮಾಡಬೇಡಿ ಎಂದಿದ್ದಾರಲ್ಲಾ ಅದರ ಬಗ್ಗೆ ಮಾತನಾಡಲಿ. ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಬೇರೆಯವರ ವಿರುದ್ಧ ಟೀಕೆ ಮಾಡಿ, ಹೇಳಿಕೆ ನೀಡುವುದು ಬಿಟ್ಟರೆ ಅವರಿಗೆ ಬೇರೆ ಕೆಲಸವೇ ಇಲ್ಲ. ಅವರ ಕಾಲದಲ್ಲಿ ಬಡವರಿಗಾಗಿ ಒಂದು ಕೆಲಸ ಮಾಡಿದ್ದಾರಾ? ಜನರಿಗೆ ಕುಡಿಯುವ ನೀರು ಕೊಡಿಸಲು ಆಗಿರಲಿಲ್ಲ. ನಾನು ಆ ಕೆಲಸ ಮಾಡಿದ್ದೇನೆ. ಜನರ ಆಸ್ತಿ ದಾಖಲೆ ಸರಿ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಆಡಳಿತ ಸುಧಾರಣೆಗೆ ಐದು ಪಾಲಿಕೆ ಮಾಡಿದ್ದೇವೆ. ನನ್ನ ಕೆಲಸ ಉತ್ತಮವಾಗಿದೆ ಎಂದು ಬಿಜೆಪಿಗರೇ ಖುಷಿ ಪಡುತ್ತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರ ಸಲಹೆಯನ್ನು ಪಡೆದು ಕೆಲಸ ಮಾಡುತ್ತಿದ್ದೇನೆ. ನನ್ನ ಕಾಲದಲ್ಲಿ ಇಂತಹ ಕೆಲಸ ಮಾಡುವ ಅವಕಾಶ ಸಿಗಲಿಲ್ಲವಲ್ಲ ಎಂದು ಅಸೂಯೆಯಲ್ಲಿ ಕೈ ಹಿಸುಕಿಕೊಂಡು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಹೊಟ್ಟೆಯುರಿ ಬಿಟ್ಟು ಬೇರೆ ಏನು ಇಲ್ಲ ಎಂದು ಕಿಡಿಕಾರಿದರು.
ನಮ್ಮನ್ನು ಟೀಕೆ ಮಾಡದಿದ್ರೆ ಕುಮಾರಸ್ವಾಮಿ ರಾಜಕೀಯವಾಗಿ ಬದುಕಲು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್
ಜನ್ಮದಿನಕ್ಕೆ ಅಧಿಕಾರ ಹಸ್ತಾಂತರವಾಗಲಿದೆ ಎಂದು ಕನಸುಕಾಣುತ್ತಿದ್ದರು ಎಂಬ ದೇವೇಗೌಡರ ಟೀಕೆ ಬಗ್ಗೆ ಕೇಳಿದಾಗ, 'ಅವರ ಮಗ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಮಾಡಿದ್ದನ್ನು ಅವರು ಸ್ಮರಿಸಲಿ. ಆಮೇಲೆ ಬೇರೆ ವಿಚಾರದ ಬಗ್ಗೆ ಮಾತನಾಡಲಿ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.