ಬೆಂಗಳೂರು, ಸೆ. 3: ರೈತರ ಬೆಳೆಗಳನ್ನು ಉಳಿಸಲು ಹಾಗೂ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಕಬಿನಿ ಜಲಾಶಯದಿಂದ ಕಟ್ಟು ಮಾದರಿಯಲ್ಲಿ ನೀರು ಹರಿಸುವ ಬಗ್ಗೆ ಎರಡು ದಿನಗಳಲ್ಲಿ ಗಂಭೀರ ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅಭಯ ನೀಡಿದ್ದಾರೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ರೈತರ ಹಾಗೂ ಸಂಘದ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಗಮನ ಸೆಳೆದರು.
ಸಭೆಯಲ್ಲಿ ಕಬಿನಿ ಭಾಗದ ನೀರಿನ ಕೊರತೆ ಬಗ್ಗೆ ಪ್ರಸ್ತಾಪಿಸಿದ ಸದಸ್ಯರು, ಕಟ್ಟು ಮಾದರಿಯಲ್ಲಿ ನೀರು ನೀಡಲು ಮನವಿ ಮಾಡಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಚಿವರು, "ಕೃಷಿಗೆ ಅನುಕೂಲವಾಗಲು ನಾಲ್ಕು ತಿಂಗಳವರೆಗೂ ನಾಲ್ಕು ಕಟ್ಟು ನೀರು ನೀಡಬೇಕಾಗುತ್ತದೆ. ಮೈಸೂರು ಉಸ್ತುವಾರಿ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ನದಿಗೆ ನೀರು ಬಿಡದಿದ್ದರೆ ವನ್ಯಪ್ರಾಣಿಗಳಿಗೂ ಕಷ್ಟವಾಗಲಿದೆ. ಹೀಗಾಗಿ, ಇಂದು ರಾತ್ರಿಯೇ ಮುಖ್ಯ ಎಂಜಿನಿಯರ್ (CE) ಜತೆ ಚರ್ಚಿಸಿ, ಎರಡು ಅಥವಾ ನಾಲ್ಕು ಕಟ್ಟು ನೀರು ನೀಡುವ ಬಗ್ಗೆ ಕೇವಲ ಎರಡೇ ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು" ಎಂದು ಭರವಸೆ ನೀಡಿದರು.
ಜತೆಗೆ, ಕಬಿನಿ ಚಾನಲ್ಗಳಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆ ಮಾಡಿ ನೇರವಾಗಿ ಭೂಮಿಗೆ ಹರಿಸುವಂತೆ ಹಾಗೂ ಕಲಬುರಗಿ ಭಾಗದಲ್ಲಿ ಬೆಳೆ ಉಳಿಸಲು ನೀರು ಬಿಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲು ಸಚಿವರು ನಿರ್ದೇಶನ ನೀಡಿದರು. ಇದೇ ವೇಳೆ ಮಂಡ್ಯ ಜಿಲ್ಲೆ ಕೌಡ್ಲೆ ಮತ್ತು ಸೋಮನಹಳ್ಳಿ ಸಬ್ ಬ್ರ್ಯಾಂಚ್ಗಳಿಗೂ ನೀರು ಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆರ್ಥಿಕ ಶಿಸ್ತಿಗೆ ಸಚಿವರ ಒತ್ತು
ಹೊಸದಾಗಿ ಸ್ಥಾಪನೆಯಾಗಿರುವ ಮಹಾಮಂಡಳಕ್ಕೆ ಕಚೇರಿ, ಗ್ರೂಪ್ ಡಿ ಸಿಬ್ಬಂದಿ ಹಾಗೂ ಅನುದಾನ ಒದಗಿಸುವಂತೆ ಸದಸ್ಯರು ಮಾಡಿದ ಮನವಿಗೆ ಸಚಿವರು ವಾಸ್ತವವಾಗಿ ಪ್ರತಿಕ್ರಿಯಿಸಿದರು. "ಯಾವುದೇ ಪೂರ್ವಸಿದ್ಧತೆ ಹಾಗೂ ಲೆಕ್ಕಾಚಾರವಿಲ್ಲದೆ ಸುಮ್ಮನೆ ಅನುದಾನ ನೀಡಲು ಸಾಧ್ಯವಿಲ್ಲ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ACS) ಅವರೊಂದಿಗೆ ಚರ್ಚಿಸಿ ನಿಮ್ಮ ಬೇಡಿಕೆಗಳಿಗೆ ಅಗತ್ಯ ಸಹಕಾರ ನೀಡಲಾಗುವುದು. ಸಂಘದ ಇಡೀ ಖರ್ಚು-ವೆಚ್ಚಗಳ ಸಂಪೂರ್ಣ ಮಾಹಿತಿಯನ್ನು ಒದಗಿಸಿ, ಅದನ್ನು ಆರ್ಥಿಕ ಇಲಾಖೆ ಮೂಲಕ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು" ಎಂದರು. ಅಲ್ಲದೆ, ಸಂಘದ ಲಾಭಾಂಶವನ್ನು ಸಂಘದ ಅಭಿವೃದ್ಧಿಗೇ ಮರುಬಳಕೆ ಮಾಡುವಂತೆ ಕಿವಿಮಾತು ಹೇಳಿದರು.
ಸಂಘದ ಬಲವರ್ಧನೆಗೆ ಬೆಂಬಲ
ಮಹಾಮಂಡಳದ ಮಹಾಸಭೆಯನ್ನು ಸೆಪ್ಟೆಂಬರ್ 25 ರೊಳಗೆ ಮಾಡಬೇಕಿದ್ದು, ಸಚಿವರೇ ಅಧ್ಯಕ್ಷತೆ ವಹಿಸಬೇಕು ಎಂದು ಸದಸ್ಯರು ಕೋರಿದರು. ಸಂಘದ ಪದಾಧಿಕಾರಿಗಳಲ್ಲಿ ಉತ್ಸಾಹ ತುಂಬಿದ ಸಚಿವರು, ಇದೇ ತಿಂಗಳ 25ರಂದು ಮಹಾಸಭೆ ನಡೆಸಲು ದಿನಾಂಕ ನಿಗದಿಪಡಿಸಿದ್ದು, ತಾವೇ ಖುದ್ದಾಗಿ ಭಾಗಿಯಾಗುವುದಾಗಿ ತಿಳಿಸಿದರು.
ಕೇಂದ್ರ ಜಲ ಆಯೋಗದ ಅಧ್ಯಕ್ಷರೊಂದಿಗೆ ಸಚಿವ ಎನ್. ಚಲುವರಾಯಸ್ವಾಮಿ ಮಹತ್ವದ ಸಭೆ
ನದಿಗಳ ಹೂಳು ತೆಗೆಯುವ ಗುತ್ತಿಗೆಯನ್ನು ನೀರು ಬಳಕೆದಾರರ ಸಂಘಗಳಿಗೇ ನೀಡಬೇಕು ಮತ್ತು ಹೂಳು ತೆಗೆಯುವ ಅನುದಾನವನ್ನು 2-3 ಲಕ್ಷ ರೂ. ಗಳಿಗೆ ಏರಿಸಬೇಕು. ಕಾಡಾ ನಿರ್ದೇಶಕರನ್ನು ಸಂಘದ ಬಾಡಿ ರಚನೆಗೆ ನೇಮಿಸಬೇಕು ಹಾಗೂ ವಿಷಯ ತಜ್ಞರು, ನಿವೃತ್ತರನ್ನು ಶೃಂಗದ ಸಲಹಾ ಸಮಿತಿಗೆ ಬಳಸಿಕೊಳ್ಳಬೇಕು ಎಂಬ ಬೇಡಿಕೆಗಳನ್ನೂ ಸಚಿವರು ಆಲಿಸಿದರು. ಸಭೆಯಲ್ಲಿ ಮಹಾಮಂಡಳದ ಉಪಾಧ್ಯಕ್ಷ ನಾಗಣ್ಣ, ರಾಜ್ಯ ಕಾರ್ಯದರ್ಶಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (MD) ಮಹೇಶ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.