ಬೆಂಗಳೂರು: ಟಿ.ನರಸೀಪುರದಲ್ಲಿ ಮಸೀದಿ ಮುಂದೆ ಪಟಾಕಿ ಹೊಡೆದ್ರೆ ಗ್ರಹಚಾರ ಬಿಡಿಸ್ತೀನಿ ಎಂದಿದ್ದ ಇನ್ಸ್ಪೆಕ್ಟರ್ ಧನಂಜಯ ಬಿಜೆಪಿ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪೊಲೀಸ್ ಅಧಿಕಾರಿಯ ವಿರುದ್ಧ ಕಿಡಿಕಾರಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ( Pratap Simha) ಅವರು, ಹಿಂದೂಗಳ ಆಚರಣೆ ಮಾತ್ರ ನಿರ್ಬಂಧ ಯಾಕೆ? ಮಸೀದಿಗಳಿಂದ ಕೇಳಿಬರುವ ಕೂಗು ಹಿಂದೂಗಳಿಗೆ ಕೇಳದಂತೆ ಮಾಡುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮುಖಂಡರೊಬ್ಬರು, ನಮ್ಮ ಸಮುದಾಯದ ಬಗ್ಗೆ ಏನಾದರೂ ಮಾತನಾಡಿದ್ರೆ ಹುಷಾರ್, ನೀನು ಮೊಟ್ಟೆ, ಚಪ್ಪಲಿಯಿಂದ ಸರಿಯಾಗಿ ಏಟು ತಿಂತೀಯಾ? ಎಂದು ಎಚ್ಚರಿಕೆ ನೀಡಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಇಮ್ರಾನ್ ಪಾಷ (Imran Pasha) ನಾಲಿಗೆ ಹರಿಬಿಟ್ಟಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ ಟಿಪ್ಪು ಕಚೇರಿ ಉದ್ಘಾಟನೆ ವೇಳೆ ಮಾತನಾಡಿರುವ ಇಮ್ರಾನ್ ಪಾಷಾ, ನಮ್ಮ ಮುಸ್ಲಿಂ ಹೆಣ್ಮಕ್ಕಳೇ ನಿನ್ನನ್ನ ಹೊಡೆದು ಸ್ಮಶಾನದೊಳಗೆ ಹಾಕುತ್ತಾರೆ. ನಿನ್ನಂತಹ ಸಾವಿರ ಜನ ಬಂದರು ನಮ್ಮ ಸಮುದಾಯದ ಒಂದು ಕೂದಲು ಕಿತ್ತುಕೊಳ್ಳಲು ಆಗಲ್ಲ ಎಂದು ಹೇಳಿದ್ದಾರೆ.
ಇಮ್ರಾನ್ ಪಾಷ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಮುಖಂಡನ ಹೇಳಿಕೆ ವಿರುದ್ಧ ಬಿಜೆಪಿ ಬೆಂಬಲಿಗರು ಕಿಡಿ ಕಾರಿದ್ದಾರೆ.
ಪ್ರತಾಪ್ ಸಿಂಹ ಏನು ಹೇಳಿದ್ದರು?
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್ಸ್ಪೆಕ್ಟರ್ ಧನಂಜಯ (T. Narasipura police inspector) ಆಡಿದ ಮಾತುಗಳಿಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದರು. ನಾವು ಸೂಚಿಸಿದ ಮಾರ್ಗದಲ್ಲೇ ಗಣೇಶ ಮೆರವಣಿಗೆ ಸಾಗಬೇಕು. ಈ ಬಾರಿ ಮಸೀದಿ ಮುಂಭಾಗ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಇನ್ಸ್ಪೆಕ್ಟರ್ ಹೇಳಿದ್ದಕ್ಕೆ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಅಸಹಾಯಕ ಹುಡುಗರ ಮುಂದೆ ನರಸೀಪುರದ ಇನ್ಸ್ಪೆಕ್ಟರ್ ವೀರಾವೇಶದಿಂದ ಮಾತನಾಡಿದ್ದು, ಬ್ರಿಟಿಷರ ಕಾಲದ ಅಧಿಕಾರಿಗಳಂತೆ ದರ್ಪ ಮೆರೆದಿದ್ದಾರೆ. ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಕೂಗುವ ಕೂಗಿಗೆ ಇಲ್ಲದ ನಿಯಮ, ಹಿಂದೂಗಳ ಹಬ್ಬಕ್ಕೆ ಮಾತ್ರ ಏಕೆ? ಮಸೀದಿ ಎದುರು ಹೋದ್ರೆ ಗ್ರಹಚಾರ ಬಿಡಿಸ್ತೀನಿ ಎಂದಿದ್ದಾರೆ. ಯಾರಿಗೆ ನೀವು ಧಮ್ಕಿ ಹಾಕ್ತೀರಿ?. ಇನ್ನೊಮ್ಮೆ ಆ ಮಾತು ನಿಮ್ಮ ಬಾಯಿಂದ ಬಂದರೆ, ನಾನೇ ಸ್ವತಃ ಪೊಲೀಸ್ ಠಾಣೆಗೆ ನುಗ್ಗುತ್ತೇನೆ. ಆವತ್ತು ನಿಮ್ಮ ಪೌರುಷ ತೋರಿಸಿ, ನೋಡೋಣ ಎಂದು ಕಿಡಿಕಾರಿದ್ದರು.
ಟಿ ನರಸೀಪುರ ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು
ಮಸೀದಿ ಮುಂದೆ ಡಾನ್ಸ್ ಮಾಡಿದರೆ ಏನು ಆಗುತ್ತದೆ. ಮಸೀದಿಯಲ್ಲಿ ಅವರ ದೇವರು ಬಿಟ್ಟರೆ ಯಾರು ಇಲ್ಲಾ ಎಂದು ಕೂಗುತ್ತಾರೆ. ಮೊದಲು ಅವರ ಮೈಕ್ಗಳನ್ನು ನಿಲ್ಲಿಸಿ, ಅವರ ಧ್ವನಿ ಹಿಂದೂಗಳ ಮನೆಗಳಿಗೂ ಕೇಳಿಸಬಾರದು. ಆ ರೀತಿ ಮಾಡಲು ನಿಮಗೆ ಸಾಧ್ಯವಾಗಲ್ಲ ಎಂದಾದರೆ ಹಿಂದುಗಳಿಗೆ ಯಾಕೆ ಧಮ್ಕಿ ಹಾಕ್ತೀರಿ? ಖಾಕಿಗಳಿಗೆ ಹಿಂದುಗಳ ಮೇಲೆ ಮಾತ್ರ ಧಮ್ಕಿ ಹಾಕಲು ಪೌರುಷ ಬರುತ್ತಾ? ಎಂದು ಆಕ್ರೋಶ ಹೊರಹಾಕಿದ್ದರು.