Neerja Birla: ಋತುಬಂಧದ ತಪ್ಪುಕಲ್ಪನೆಗಳನ್ನು ತೆರೆದಿಟ್ಟ ನೀರ್ಜಾ ಬಿರ್ಲಾ
ಭಾರತದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯದ ಕುರಿತು ಮುಕ್ತ ಸಂಭಾಷಣೆಯ ಒಂದು ಮಹತ್ವದ ಹೆಜ್ಜೆಯಾಗಿ ಬೆಂಗಳೂರಿನ ಫಾಲ್ಕನ್ ಟವರ್ಸ್ನಲ್ಲಿ ನಡೆದ ಫಿಕಿ ಫ್ಲೊ ಕಾರ್ಯಕ್ರಮದಲ್ಲಿ ಮಾತನಾಡಿದ ಆದಿತ್ಯ ಬಿರ್ಲಾ ಶಿಕ್ಷಣ ಟ್ರಸ್ಟ್ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಮತ್ತು ಎಂಪವರ್ನ ಪ್ರೇರಕ ಶಕ್ತಿ ನೀರ್ಜಾ ಬಿರ್ಲಾ, ಋತುಬಂಧದ ವೇಳೆ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಪರಿವರ್ತನೆಯನ್ನು ಗುರುತಿಸುವ ಅಗತ್ಯವನ್ನು ತಿಳಿಸಿದರು.


ಬೆಂಗಳೂರು: ಸಾಂಪ್ರದಾಯಿಕವಾಗಿ ಕೇವಲ ದೈಹಿಕ ಮೈಲಿಗಲ್ಲು ಎಂದು ಪರಿಗಣಿಸಲಾಗುವ ಋತುಬಂಧವು ಸಾಮಾನ್ಯವಾಗಿ ಸದ್ದಿಲ್ಲದೆ ಮತ್ತು ಅಪ್ರಜ್ಞಾಪೂರ್ವಕವಾಗಿ ತೆರೆದುಕೊಳ್ಳುತ್ತದೆ. ಭಾವನಾತ್ಮಕ ಮತ್ತು ಮಾನಸಿಕ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಆದರೆ ಇವುಗಳನ್ನು ಕಡೆಗಣಿಸಲಾಗುತ್ತದೆ ಅಥವಾ ಕಳಂಕಿತಗೊಳಿಸಲಾಗುತ್ತದೆ ಎಂದು ಆದಿತ್ಯ ಬಿರ್ಲಾ ಶಿಕ್ಷಣ ಟ್ರಸ್ಟ್ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ (Founder and Chairperson of the Aditya Birla Education Trust) ಮತ್ತು ಎಂಪವರ್ನ (Empower) ಪ್ರೇರಕ ಶಕ್ತಿ ನೀರ್ಜಾ ಬಿರ್ಲಾ (Neerja Birla) ಹೇಳಿದರು. ಭಾರತದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯದ ಕುರಿತು ಮುಕ್ತ ಸಂಭಾಷಣೆಯ ಒಂದು ಮಹತ್ವದ ಹೆಜ್ಜೆಯಾಗಿ ಬೆಂಗಳೂರಿನ ಫಾಲ್ಕನ್ ಟವರ್ಸ್ನಲ್ಲಿ ನಡೆದ ಫಿಕಿ ಫ್ಲೊ (FICCI FLO) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರ್ಜಾ ಬಿರ್ಲಾ ತಮ್ಮ ಭಾಷಣದಲ್ಲಿ ಋತುಬಂಧದ ವೇಳೆ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಪರಿವರ್ತನೆಯನ್ನು ಗುರುತಿಸುವ ಅಗತ್ಯ, ಹೆಚ್ಚಿನ ಅರಿವು, ಸಹಾನುಭೂತಿ ಮತ್ತು ಸಾಂಸ್ಥಿಕ ಬೆಂಬಲ ಬೇಕು ಎಂಬುದನ್ನು ಹೇಳಿದರು.
ಅನೇಕ ಮಹಿಳೆಯರು ಮನಸ್ಥಿತಿಯ ಏರಿಳಿತಗಳಿಂದ ಹಿಡಿದು ತಮ್ಮದೇ ಆದ ಗುರುತಿನಿಂದ ಸಂಪರ್ಕ ಕಡಿತಗೊಳ್ಳುವ ಭಾವನೆಯವರೆಗೆ ಸೂಕ್ಷ್ಮವಾದ ಆದರೆ ಪ್ರಭಾವಶಾಲಿ ಬದಲಾವಣೆಗಳನ್ನು ಅನುಭವಿಸುತ್ತಾರೆ. ಇದು ಅವರ ಮಾನಸಿಕ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಈ ಹಂತ ವಿಶೇಷವಾಗಿ ಪೆರಿಮೆನೋಪಾಸ್ ಸಾರ್ವಜನಿಕ ಚರ್ಚೆಯಲ್ಲಿ ಹೆಚ್ಚಾಗಿ ಅಗೋಚರವಾಗಿ ಉಳಿದಿದೆ. ಆದರೂ ಇದು ಮಹಿಳೆಯರ ಆರೋಗ್ಯ, ಕೆಲಸದ ಸ್ಥಳದ ಉತ್ಪಾದಕತೆ ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ಆಳವಾದ ಪರಿಣಾಮಗಳನ್ನು ಬೀರುತ್ತದೆ ಎಂದು ಅವರು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ 2025ರಲ್ಲಿ ಜಾಗತಿಕವಾಗಿ 1.1 ಬಿಲಿಯನ್ ಮಹಿಳೆಯರು ಋತುಬಂಧ ಹಂತವನ್ನು ದಾಟಿರುತ್ತಾರೆ. ಭಾರತದಲ್ಲಿ ಮಾತ್ರವೇ 150 ಮಿಲಿಯನ್ ಮಹಿಳೆಯರು ಸದ್ಯ ಪೆರಿಮೆನುಪೊಸ್ ಅಥವಾ ಮೆನುಪೊಸ್ ಹಂತದಲ್ಲಿದ್ದಾರೆ. ಅದರಲ್ಲಿ ಶೇ. 25ಕ್ಕೂ ಕಡಿಮೆ ಮಹಿಳೆಯರು ಮಾತ್ರ ವೈದ್ಯಕೀಯ ಹಾಗೂ ಮಾನಸಿಕ ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಈ ಬದಲಾವಣೆಯನ್ನು ಎದುರಿಸುವಲ್ಲಿ ಅರಿವು, ಮಾಹಿತಿ ಲಭ್ಯತೆ ಹಾಗೂ ಮುಕ್ತವಾಗಿ ಮಾತನಾಡುವಲ್ಲಿ ಅಂತರ ಮೂಡುತ್ತದೆ ಎಂದರು.
ಋತುಬಂಧದ ಕುರಿತ ವಿಚಾರಗಳನ್ನು ಸಾಮಾನ್ಯ ವಿಷಯವಾಗಿ ಚರ್ಚಿಸುವ ಹಾಗೂ ಸಮಾಜ ಮತ್ತು ಉದ್ಯೋಗದಾತರು ಈ ಸಂದರ್ಭದ ಭಾವನಾತ್ಮಕ ಅಂಶವನ್ನು ಗುರುತಿಸಬೇಕಾದ ಪ್ರಾಮುಖ್ಯತೆಯನ್ನು ಮುಖ್ಯವಾಗಿ ಪ್ರಸ್ತಾಪಿಸಿದ ಬಿರ್ಲಾ ಅವರು, ಸಮಾಜ ಋತುಬಂಧದ ವಿಚಾರದಲ್ಲಿ ಮೌನವಾಗಿರುವುದು ಹಾಗೂ ಈ ಕುರಿತಾದ ತಪ್ಪು ಕಲ್ಪನೆಗಳು ನೈಸರ್ಗಿಕವಾದ ಈ ಬದಲಾವಣೆಯನ್ನು ದಾಟುವ ಪ್ರಕ್ರಿಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ . ಹೀಗಾಗಿ ಋತುಬಂಧದ ಹಂತವನ್ನು ಕಾಳಜಿ, ಆರೈಕೆ ಹಾಗೂ ಬೆಂಬಲ ಪಡೆಯುವ ಮಹಿಳೆಯ ಜೀವನದ ಅತ್ಯಂತ ಮಹತ್ವದ ಘಟ್ಟವೆಂದು ಪರಿಗಣಿಸಿ ಈ ಕುರಿತು ಸೂಕ್ತವಾದ ಪಾಲಿಸಿಗಳನ್ನು ರಚಿಸಬೇಕು ಎಂದು ಅಭಿಪ್ರಾಯಪಟ್ಟರು.
ಎಂಟು ದೇಶಗಳಲ್ಲಿ ಸುಮಾರು 2,900 ಪೂರ್ಣ ಸಮಯದ ಉದ್ಯೋಗಿಗಳ ಅಭಿಪ್ರಾಯ ಒಳಗೊಂಡ ಕ್ಯಾಟಲಿಸ್ಟ್ ಗ್ಲೋಬಲ್ 2024ರ ಜಾಗತಿಕ ಸಮೀಕ್ಷೆಯ ಪ್ರಕಾರ ಶೇ. 84ರಷ್ಟು ಮಹಿಳೆಯರು ಕೆಲಸದಲ್ಲಿ ಹೆಚ್ಚಿನ ಋತುಬಂಧ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ. ಆದರೆ ಶೇ. 72ರಷ್ಟು ಮಹಿಳೆಯರು ತಮ್ಮ ರೋಗಲಕ್ಷಣಗಳನ್ನು ಮರೆ ಮಾಡಿದ್ದಾರೆ ಮತ್ತು ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ತಮ್ಮ ಲಕ್ಷಣಗಳು ಕೆಲಸದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಒಪ್ಪಿಕೊಂಡರು.
ಈ ಸಂಶೋಧನೆಗಳು ಸಂಸ್ಥೆಗಳು ಮೂಲಸೌಕರ್ಯಗಳ ಜತೆ ಋತುಬಂಧ ಕೇಂದ್ರಿತ ಭಾನಾತ್ಮಕ ಬೆಂಬಲ ನೀಡುವ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವನ್ನು ಬಿಂಬಿಸುತ್ತದೆ. ಈ ಸಮಸ್ಯೆ ಯಾವುದೇ ಒಂದು ಗುಂಪಿಗೆ ಸೀಮಿತವಾಗಿಲ್ಲ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಗೃಹಿಣಿಯಿಂದ ಕಚೇರಿ ಜವಬ್ದಾರಿಯನ್ನು ನಿಭಾಯಿಸುವ ಉದ್ಯೋಗಸ್ಥೆಯರವರೆಗೆ ಋತುಬಂಧದ ಭಾವನಾತ್ಮಕ, ಮಾನಸಿಕ ಹಾಗೂ ದೈಹಿಕ ತೊಳಲಾಟಗಳು ಎಲ್ಲರಿಗೂ ಸಮಾನವಾಗಿರುತ್ತವೆ. ಮುಕ್ತವಾಗಿ ಈ ಕುರಿತು ಮಾತನಾಡದೇ ಇರುವುದು, ಸೂಕ್ತ ಅರಿವು ಇಲ್ಲದೇ ಇರುವುದು ಮಹಿಳೆಯರು ಈ ಹಂತವನ್ನು ಮೌನವಾಗಿ ಯಾವುದೇ ಬೆಂಬಲವಿಲ್ಲದೇ ಸಾಗುವಂತೆ ಮಾಡುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು.
ಮಹಿಳೆಯರು ಈ ನೈಸರ್ಗಿಕ ಪರಿವರ್ತನೆಗಳನ್ನು ತಮ್ಮ ಬೆಳವಣಿಗೆಯ ಭಾಗವೆಂದು ಅರ್ಥ ಮಾಡಿಕೊಂಡು ಸ್ವೀಕರಿಸಿದಾಗ ಅದು ಅವರ ಅನುಭವವನ್ನು ಶಕ್ತಿ ಮತ್ತು ನವೀಕರಣದ ಪ್ರಯಾಣವಾಗಿ ಪರಿವರ್ತಿಸುತ್ತದೆ. ಈ ಕುರಿತು ಜಾಗೃತಿ ಮತ್ತು ಸಹಾನುಭೂತಿ ಸಾಮಾಜಿಕ ಗ್ರಹಿಕೆಗಳನ್ನು ಬದಲಾಯಿಸುವಲ್ಲಿ ಪ್ರಬಲ ಸಾಧನಗಳಾಗಿವೆ. ಕೆಲಸದಲ್ಲಿ ಅಥವಾ ಸಮುದಾಯಗಳಲ್ಲಿ ಮುಕ್ತ ಸಂವಾದ ವನ್ನು ಬೆಳೆಸುವುದು ಮತ್ತು ಬೆಂಬಲಿತ ವಾತಾವರಣವನ್ನು ಸೃಷ್ಟಿಸುವುದು ಈ ನಿರ್ಣಾಯಕ ಜೀವನದ ಹಂತದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಅತ್ಯಗತ್ಯ, ಅಲ್ಲಿ ಅವರು ಸಮಾಜಕ್ಕೆ ಸಕ್ರಿಯವಾಗಿ ಕೊಡುಗೆ ನೀಡುತ್ತಲೇ ಇರುತ್ತಾರೆ ಎಂದರು.
ಆರೋಗ್ಯ ತಪಾಸಣೆ, ಶಿಕ್ಷಣ ಮತ್ತು ಸಮುದಾಯ ಸಂಭಾಷಣೆಗಳ ಮೂಲಕ ಆರಂಭಿಕ ಜಾಗೃತಿಯನ್ನು ಮೂಡಿಸಬೇಕು. ಇದು ವಿರಾಮವಲ್ಲ ಪ್ರಬಲ ಪರಿವರ್ತನೆ. ಸಹಾನುಭೂತಿ ಮತ್ತು ಸನ್ನದ್ಧತೆಯೊಂದಿಗೆ ಅಳವಡಿಸಿಕೊಳ್ಳುವುದರಿಂದ ಮಹಿಳೆಯರು ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ಉದ್ದೇಶದೊಂದಿಗೆ ಈ ಹಂತವನ್ನು ದಾಟಲು ಸಹಾಯ ಮಾಡುತ್ತದೆ ಎಂದು ಬಿರ್ಲಾ ತಿಳಿಸಿದರು.
ಇದನ್ನೂ ಓದಿ: Actor Darshan: ಜಾಮೀನು ರದ್ದು ಮಾಡಬೇಡಿ; ಸುಪ್ರೀಂ ಕೋರ್ಟ್ಗೆ ಲಿಖಿತ ಕಾರಣಗಳನ್ನು ನೀಡಿದ ನಟ ದರ್ಶನ್, ಪವಿತ್ರಾ ಗೌಡ
ಎಂಪವರ್ (Mpower) ಜತೆಗೂಡಿ ಮಾನಸಿಕ ಆರೋಗ್ಯದ ಮೇಲಿನ ಕಳಂಕವನ್ನು ನಿರ್ಮೂಲನೆ ಮಾಡುವ ಹಾಗೂ ಯಾವುದೇ ಭಯವಿಲ್ಲದೇ ಮಹಿಳೆ ಮುಕ್ತವಾಗಿ ತನ್ನ ಸಮಸ್ಯೆಯನ್ನು ಮಾತನಾಡುವ ವೇದಿಕೆಯನ್ನು ಕಲ್ಪಿಸುವುದನ್ನು ಪ್ರತಿಪಾದಿಸಿರುವ ಬಿರ್ಲಾ, ಫಿಕಿ ಫ್ಲೋ (FICCI FLO) ಬೆಂಗಳೂರಿನೊಂದಿಗಿನ ಸಹಯೋಗವು ತಪ್ಪು ಕಲ್ಪನೆಗಳನ್ನು ಮುರಿದು, ಜಾಗೃತಿ ಮೂಡಿಸುವುದು ಮತ್ತು ಮಹಿಳೆಯರ ಆರೋಗ್ಯದ ಸುತ್ತ ಸಹಾನುಭೂತಿಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಭಾವನಾತ್ಮಕ ದುರ್ಬಲತೆಯನ್ನು ಮರೆ ಮಾಡಲಾಗುವುದಿಲ್ಲ. ಆದರೆ ಕೇಳಲಾಗುತ್ತದೆ, ಗೌರವಿಸಲಾಗುತ್ತದೆ ಮತ್ತು ಗುಣಪಡಿಸಲಾಗುತ್ತದೆ ಎಂದರು.