ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nikhil Kumaraswamy: ಬೆಂಗಳೂರು ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ: ನಿಖಿಲ್ ಕುಮಾರಸ್ವಾಮಿ

Bengaluru Stampede: ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಎಂದು ಜೆಡಿಎಸ್‌ ಮುಖಂಡ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು. ಸಾವಿನ ನಂತರವೂ ಡಿಕೆಶಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಎಂದು ಅವರು ಆರೋಪಿಸಿದರು.

ಬೆಂಗಳೂರು ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಲು ನಿಖಿಲ್‌ ಪಟ್ಟು

ನಿಖಿಲ್‌ ಕುಮಾರಸ್ವಾಮಿ.

Profile Ramesh B Jun 5, 2025 7:53 PM

ಬೆಂಗಳೂರು: ʼʼಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಆಗ ಮಾತ್ರ ಅಮಾಯಕ ಜೀವಗಳಿಗೆ ಮತ್ತು ಹೆತ್ತವರಿಗೆ ನ್ಯಾಯ ಒದಗಿಸಲು ಸಾಧ್ಯ. ಸಾವಿನಲ್ಲೂ ನಿಮ್ಮ ಸಣ್ಣತನ ಮಾಡಬಾರದು, ಕ್ರೀಡಾ ಮನೋಭಾವದಿಂದ ನೋಡಬೇಕುʼʼ ಎಂದು ಜೆಡಿಎಸ್‌ ಯುವ ಮುಖಂಡ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ʼʼಸಾವಿನ ನಂತರವೂ ಡಿಕೆಶಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಕಪ್‌ಗೆ ಮುತ್ತಿಕ್ಕಿ, ಫೋಟೊ ತೆಗೆಸಿಕೊಂಡು ರೀಲ್ಸ್‌ ಮಾಡಿದ್ದಾರೆ. ನಾಚಿಕೆ ಆಗಲ್ವಾ? ಈಗ ಕಣ್ಣೀರು ಹಾಕಿದರೆ ಪ್ರಯೋಜನ ಏನು?ʼʼ ಎಂದು ಅವರು ಕಿಡಿಕಾರಿದರು.

ʼʼಕಾಲ್ತುಳಿತದಲ್ಲಿ 12ರಿಂದ 33 ವರ್ಷದವರು ಸಾವನಪ್ಪಿದ್ದಾರೆ. ಸರ್ಕಾರ ಇವರಿಗೆ ಐವತ್ತು ಕೋಟಿ ರೂ. ಪರಿಹಾರ ನೀಡಿದರೂ ಹೋಗಿರುವ ಜೀವವನ್ನ ಮತ್ತೆ ತರಲು ಸಾಧ್ಯವಿಲ್ಲ. ಮಕ್ಕಳನ್ನ ಕಳೆದುಕೊಂಡ ಪೋಷಕರ ಭವಿಷ್ಯದ ಮುಂದಿನ ಸ್ಥಿತಿ ಏನು? ಆ ಕುಟುಂಬದಲ್ಲಿ ಅಕ್ಕ ತಂಗಿ ಇದ್ದರೆ ಅವರ ವಿದ್ಯಾಭ್ಯಾಸಕ್ಕೆ ಸರ್ಕಾರ ಜವಾಬ್ದಾರಿ ತಗೋಬೇಕು. ಅವರಿಗೆ ಮುಂದೆ ಉದ್ಯೋಗವಕಾಶ ಮಾಡಿಕೊಡಬೇಕುʼʼ ಎಂದು ಅವರು ಅಗ್ರಹಿಸಿದರು.

ʼʼವಿಜಯೋತ್ಸವವನ್ನು ಎರಡು ಕಡೆ ಯಾಕೆ ಆಯೋಜನೆ ಮಾಡಬೇಕಿತ್ತು? ಚಿನ್ನಸ್ವಾಮಿ ಸ್ಟೇಡಿಯಂಗಿಂತ ಜಾಗ ಬೇಕಾ? ಜನಕ್ಕೆ ಫ್ರಿ ಟಿಕೆಟ್ ಅಂತ ಹೇಳಿದ್ರು, ಫ್ರಿ ಅನ್ನೋದು ಇವರಿಗೆ ರೂಢಿಯಾಗಿದೆ. ಅದಕ್ಕೆ ಫ್ರಿ ಸಾವು ಕೊಟ್ಟಿದ್ದಿರಾ?ʼʼ ಎಂದು ಅವರು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ: Bengaluru Stampede: ʼಶಾಕ್‌ನಲ್ಲಿದ್ದೇನೆ...ʼ ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಡಿಕೆ ಶಿವಕುಮಾರ್

ದುರಂತವನ್ನು ಕ್ರೀಡಾ ಮನೋಭಾವದಿಂದ ನೋಡಿ

ʼʼಅಭಿನಂದನಾ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಆಟಗಾರರಿಗೆ ಯಾವ ರೀತಿ ಗೌರವ ಕೊಟ್ಟಿದ್ದಿರಾ? ನಾವೆಲ್ಲ ಬೌರಿಂಗ್ ಆಸ್ಪತ್ರೆಗೆ ತೆರಳಿದ್ದಾಗ ಸಿಎಂ ಬೇಟಿ ನೀಡಿದ್ದಾರೆ. ಅಲ್ಲಿಯವರೆಗೂ ಸಿಎಂ ಜನಾರ್ದನ ಹೋಟೆಲ್‌ನಲ್ಲಿ ಟೀ ಕುಡಿತ್ತಿದ್ರಾ? ಆಗಿರುವ ಘಟನೆಯನ್ನ ಕ್ರೀಡಾ ಮನೋಭಾವದಿಂದ ನೋಡಿ ರಾಜಕೀಯ ಮಾಡ್ಬೇಡಿʼʼ ಎಂದು ಕಿಡಿಕಾರಿದರು.

ʼʼತೆಲಂಗಾಣದಲ್ಲಿ 'ಪುಷ್ಪ 2' ಚಿತ್ರ ಬಿಡುಗಡೆ ವೇಳೆ ಇದೇ ಮಾದರಿಯ ದುರ್ಘಟನೆ ನಡೆದಾಗ ಯಾವ ರೀತಿ ಕ್ರಮ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಗಮನಿಸಬೇಕು. ಅವತ್ತು ನೀವು ನಟ ಅಲ್ಲು ಅರ್ಜುನ್‌ ವಿರುದ್ಧ ಎಫ್ಐಆರ್ ಹಾಕಲಾಗಿತ್ತು. ಕಾಂಗ್ರೆಸ್ ಸರ್ಕಾರ ಅವರನ್ನು ಅರೆಸ್ಟ್ ಮಾಡಿತ್ತು. ಇಲ್ಲೂ ನಿಮ್ಮ ಸರ್ಕಾರ ಇದೆ. ಯಾರ ಮೇಲೆ ಎಫ್ಐಆರ್ ಹಾಕ್ತಿರಾ?ʼʼ ಎಂದು ಪ್ರಶ್ನಿಸಿದರು.

ನ್ಯಾಯಾಧೀಶರ ಮೂಲಕ ತನಿಖೆಗೆ ಒತ್ತಾಯ

ʼʼಈಗ ಮ್ಯಾಜಿಸ್ಟ್ರೇಟ್ ಮೂಲಕ ತನಿಖೆ ಮುಂದುವರೆಸಿ ಪಾರದರ್ಶಕವಾಗಿ ಮಾಡ್ತಿವಿ ಎಂದು ಬಿಂಬಿಸಲು ಹೊರಟಿದ್ದಿರಾ. ಅವರು ಯಾರ ಅಂಗಳದಲ್ಲಿ ಕೆಲಸ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಪಾರದರ್ಶಕವಾಗಿ ತನಿಖೆ ಮಾಡುವುದಾದರೆ ನ್ಯಾಯಾಧೀಶರ ಮೂಲಕ ತನಿಖೆಯಾಗಲಿʼʼ ಎಂದು ನಿಖಿಲ್‌ ಆಗ್ರಹಿಸಿದರು.

2ನೇ ಅತಿ ದೊಡ್ಡ ಕಾಲ್ತುಳಿತ

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತ ರಾಜ್ಯದ ಇತಿಹಾಸದ ಅತೀ ಎರಡನೇ ದೊಡ್ಡ ಪ್ರಕರಣ. ಭಾರತ ವರ್ಲ್ಡ್ ಕಪ್ ಗೆದ್ದಾಗ ಮುಂಬೈಯಲ್ಲಿ ಆಯೋಜಿಸಿದ್ದ ಪರೇಡ್‌ನಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಆಗ ಚಿಕ್ಕ ದುರ್ಘಟನೆಯೂ ನಡೆಯಲಿಲ್ಲʼʼ ಎಂದು ತಿಳಿಸಿದರು.

ʼʼಮುಖ್ಯಮಂತ್ರಿ ಸಿದ್ದರಾಮಯ್ಯ 3-4 ಲಕ್ಷ‌ ಜನ ಜನ ಸೇರಿದ್ದರು ಎಂದಿದ್ದಾರೆ. ಪಹಲ್ಗಾಮ್ ಘಟನೆಯ ಬಳಿಕ ಇಂಟೆಲಿಜೆನ್ಸ್‌ ಸತ್ತು ಹೋಗಿತ್ತಾ ಎಂದು ಸಿಎಂ ಅವರು ಹೇಳಿದ್ರು. ಇವತ್ತು ಟಿ ಕುಡಿಯೋಕೆ ಟಿಫನ್ ತಿನ್ನೋಕೆ ಹೋಗಿತ್ತಾ? ಘಟನೆ ಬಗ್ಗೆ ಗೃಹ ಸಚಿವರಿಂದ ಒಂದು ಹೇಳಿಕೆ ಕೊಟ್ಟಿಲ್ಲʼʼ ಎಂದು ಕಿಡಿಕಾರಿದರು.

ʼʼಗೃಹ ಸಚಿವರು ಅಧಿಕಾರ ಮೇಲೆ ಸವಾರಿ ಮಾಡಿ ಜಿಪಿಎ ತಗೊಂಡಿದ್ದಾರೆ ಕೆಲವರು. ಇದರ ಬಗ್ಗೆ ಗೃಹ ಸಚಿವರಿಗೆ ಯಾವುದೆ ಮಾಹಿತಿ ಇದ್ದಂಗಿಲ್ಲಾ! ಸಿಎಂ‌ ಅವರನ್ನ ಓವರ್ ಟೇಕ್ ಮಾಡಿದ ಮಹಾನುಭಾವ ಒಬ್ಬರು ಇದ್ದಾರೆ. ಡಿಸಿಎಂ ಏನಾದ್ರು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬದಲು ಕಪ್‌ ಗೆಲ್ಲೋದಕ್ಕೆ ಕಾರಣ ಆಗಿದ್ರಾ?ʼʼ ಎಂದು ನಿಖಿಲ್‌ ಆಕ್ರೋಶ ವ್ಯಕ್ತಪಡಿಸಿದರು.

ʼʼನಾಲ್ಕೈದು ಸಾವಿನ ಪ್ರಕರಣ ಆಗಿದೆ ಅಂತ ಗೊತ್ತಾದ ಮೇಲೂ, ಡಿಸಿಎಂ ಡಿಕೆಶಿ ಕಪ್‌ಗೆ ಮುತ್ತು ಕೊಟ್ಟು, ರೀಲ್ಸ್ ಮಾಡಿದ್ರು. ಘಟನೆಗೆ ಮುಖದಲ್ಲಿ ಸ್ವಲ್ಪವೂ ವಿಷಾದ ಭಾವನೆ ಕಾಣ್ತಾ ಇರಲಿಲ್ಲʼʼ ಎಂದು ವಾಗ್ದಾಳಿ ನಡೆಸಿದರು.