Bengaluru Stampede: ʼಶಾಕ್ನಲ್ಲಿದ್ದೇನೆ...ʼ ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಡಿಕೆ ಶಿವಕುಮಾರ್
ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ (Bengaluru Stampede) 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, ಸಂತ್ರಸ್ತರೆಲ್ಲ ನನ್ನ ಕುಟುಂಬದವರೆಂದೇ ಭಾವಿಸಿದ್ದೇನೆ, ಚಿಕ್ಕ ಮಕ್ಕಳ ಸಾವು ನನಗೆ ತುಂಬಾ ದುಃಖವುಂಟುಮಾಡಿದೆ ಎಂದಿದ್ದಾರೆ.

ಡಿಕೆ ಶಿವಕುಮಾರ್

ಬೆಂಗಳೂರು: ʼಕಾಲ್ತುಳಿತದಲ್ಲಿ (Bengaluru Stampede) ಸತ್ತವರು ನಮ್ಮ ಕುಟುಂಬದವರೇ, ನನಗೆ ಅತ್ಯಂತ ದುಃಖವಾಗುತ್ತಿದೆ. ಶಾಕ್ ಆಗಿದೆ. ಇಡೀ ಕರ್ನಾಟಕ ಇದಕ್ಕಾಗಿ ಶೋಕಿಸುತ್ತಿದೆʼ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಅವರು ಸಂತ್ರಸ್ತ ಕುಟುಂಬಗಳನ್ನು ನೆನೆದು ಕಣ್ಣೀರಿಟ್ಟರು. "ಸಣ್ಣ ಮಕ್ಕಳು ಸಂಕಷ್ಟಕ್ಕೀಡಾದ ದೃಶ್ಯಗಳನ್ನು ನಾನು ನೋಡಿದೆ. ಯಾವ ಫ್ಯಾಮಿಲಿಯೂ ಇದನ್ನು ಅರಗಿಸಿಕೊಳ್ಳಲಾಗದು. ನಮ್ಮ ಸರಕಾರ ಇರುವಾಗಲೇ ಇದು ನಡೆದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು, ಒಪ್ಪಿಕೊಳ್ಳುತ್ತೇವೆʼ ಎಂದು ಅವರು ನುಡಿದಿದ್ದಾರೆ.
ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಬಿಜೆಪಿಯವರು, ಕುಮಾರಸ್ವಾಮಿ ಮುಂತಾದವರು ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರು ಮೊದಲಿನಿಂದ ಇದನ್ನು ಮಾಡುತ್ತ ಬಂದಿದ್ದಾರೆ. ನಾನು ಪಟ್ಟಿ ಕೊಡಬಲ್ಲೆ. ನಾವು ಅಂಥದ್ದನ್ನು ಮಾಡುವುದಿಲ್ಲ. ಅವರು ಇದ್ದಾಗ ಏನೇನು ಆಗಿತ್ತು ಎಂಬುದನ್ನು ನಾನು ಬಲ್ಲೆ ಎಂದು ಅವರು ಟೀಕಿಸಿದರು.
ಇದಾದ ನಂತರ ಕೂಡಲೇ ಸ್ಟೇಡಿಯಂ ಒಳಗಿನ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದೇವೆ. ಪೊಲೀಸರು ನನಗೆ ಮಾಹಿತಿ ನೀಡಿದ ಕೂಡಲೇ ಎಲ್ಲ ಔಪಚಾರಿಕ ಕಾರ್ಯಕ್ರಮಗಳನ್ನು ಕೈಬಿಟ್ಟು, ಕೇವಲ ಕೆಲವೇ ನಿಮಿಷಗಳಲ್ಲಿ ಆಟಗಾರರನ್ನು ಗೌರವಿಸಿ ಕಳಿಸಿದ್ದೇವೆ. ನಾನೂ ಅಲ್ಲಿಗೆ ಹೋಗುವ ಉದ್ದೇಶ ಇರಲಿಲ್ಲ. ಆದರೆ ಕೆಎಸ್ಸಿಎ ಅಧ್ಯಕ್ಷರಿಗೆ ಒಳಗೆ ಹೋಗಲು ಸಾಧ್ಯವೇ ಇರಲಿಲ್ಲ. ನಾನು ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋದೆ ಎಂದರು.
ನಾನು ಸ್ಟೇಡಿಯಂ ಒಳಗೆ ಹೋಗುವವರೆಗೂ ನನಗೆ ಹೀಗೆಲ್ಲ ಆಗಿದೆ ಎಂದು ಗೊತ್ತೇ ಇರಲಿಲ್ಲ. ಮೀಡಿಯಾದವರೇ ಕೆಲವರು ಫೋನ್ ಮಾಡಿ ಹೀಗಾಗಿದೆ ಎಂದು ತಿಳಿಸಿದರು. ಮೊಬೈಲ್ ನೆಟ್ವರ್ಕ್ ಕೂಡ ಜಾಮ್ ಆಗಿತ್ತು. ನಂತರ ಕಮಿಷನರ್ ನನಗೆ ಕಾಲ್ತುಳಿತದ ವಿಷಯ ತಿಳಿಸಿದರು. ಕೂಡಲೇ ಕಾರ್ಯಕ್ರಮ ಮೊಟಕು ಮಾಡಿದೆವು. ಇದು ಒಬ್ಬರು ಇನ್ನೊಬ್ಬರ ಮೇಲೆ ದೋಷಾರೋಪಣೆ ಮಾಡುವ ಸಂದರ್ಭವಲ್ಲ. ಯಾರು ರಾಜಕೀಯ ಮಾಡುತ್ತಾರೆ ಎಂಬುದು ಕೂಡ ನನಗೆ ಲೆಕ್ಕವಿಲ್ಲ. ಅವೆಲ್ಲವೂ ಅಸೆಂಬ್ಲಿಯಲ್ಲಿ ಬರುತ್ತವೆ, ಅದಕ್ಕೆ ಅಲ್ಲಿ ಉತ್ತರ ಕೊಡುತ್ತೇನೆ ಎಂದರು.
ಕಾರ್ಯಕ್ರಮದ ತೀರ್ಮಾನ ಯಾರೇ ಮಾಡಿರಲಿ, ನಮ್ಮ ಸರಕಾರ ಮಾಡಿದೆ. ನಾನು ಕನಕಪುರ ಕೋರ್ಟಿನಲ್ಲಿದ್ದೆ. ಕೂಡಲೇ ನಾನು ಧಾವಿಸಿ ಬರಬೇಕಾಯಿತು. ನಾವ್ಯಾರೂ ಇಂಥದ್ದನ್ನು ನಿರೀಕ್ಷೆ ಮಾಡಿರಲಿಲ್ಲ. ಕೂಡಲೇ ಜನ ಬರುವ ಹಾದಿಗಳನ್ನೇ ಬ್ಲಾಕ್ ಮಾಡಲಾಗಿದೆ. ಮೆಟ್ರೋ ನಿಲ್ಲಿಸಲಾಗಿದೆ. ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗ ನಾನು ಡರ್ಟಿ ಪಾಲಿಟಿಕ್ಸ್ ಮಾತನಾಡಲಾರೆ. ಬಿಜೆಪಿಯವರ ಅಜೆಂಡಾ ಸ್ಪಷ್ಟವಿದೆ, ಅದಕ್ಕೆ ನಾನು ಉತ್ತರಿಸಲ್ಲ ಎಂದರು.
ನಾವು ಇತರರನ್ನು ಹೊಣೆ ಮಾಡಲ್ಲ. ಇದರಿಂದ ಕರ್ನಾಟಕದ, ಬೆಂಗಳೂರಿನ ಇಮೇಜ್ಗೆ ಧಕ್ಕೆಯಾಗಿದೆ. ಇಂಥ ಜನಜಂಗುಳಿ ಯಾರೂ ನಿರೀಕ್ಷಿಸಿರಲಿಲ್ಲ. 18 ವರ್ಷಗಳ ನಂತರ ಕಪ್ ಬಂದಿದೆ. ಯುವಜನರ ಮನಸ್ಸಿನಲ್ಲಿ ಏನು ಕುದಿಯುತ್ತಿತ್ತೋ. ಅವರೆಲ್ಲ ಬಂದಿದ್ದಾರೆ. ಕೆಲವು ಕ್ರಮಗಳನ್ನು ಪ್ರಶ್ನಿಸಬಹುದು. ಆದರೆ ಈಗ ಶೋಕದ ಸಮಯ. ಅವರೆಲ್ಲ ನಮ್ಮ ಕುಟುಂಬ ಭಾಗ. ಅವರ ಶೋಕದಲ್ಲಿ ನಾವೂ ಪಾಲ್ಗೊಂಡಿದ್ದೇವೆ. ಸಿಎಂ ಸೇರಿದಂತೆ ನಾವೆಲ್ಲಾ ಶಾಕ್ನಲ್ಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Bangalore Stampede: ‘ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಕಾಲ್ತುಳಿತ- ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ದೂರು