Nirmala Sitharaman: ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿಗೆ ಮುತ್ತಿಗೆ ಯತ್ನ
Nirmala Sitharaman: ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಖಂಡಿಸಿ ಬೆಂಗಳೂರಿನ ಅಲಿ ಆಸ್ಕರ್ ರಸ್ತೆಯಲ್ಲಿರುವ ರಾಜ್ಯಸಭಾ ಸದಸ್ಯರ ಕಚೇರಿಗೆ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆ ಮುತ್ತಿಗೆಗೆ ಯತ್ನಿಸಿದೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ನಗರದಲ್ಲಿನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಕಚೇರಿಗೆ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಮುತ್ತಿಗೆಗೆ ಯತ್ನಿಸಿ, ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ.
ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಖಂಡಿಸಿ ಬೆಂಗಳೂರಿನ ಅಲಿ ಆಸ್ಕರ್ ರಸ್ತೆಯಲ್ಲಿರುವ ರಾಜ್ಯಸಭಾ ಸದಸ್ಯರ ಕಚೇರಿಗೆ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆ ಮುತ್ತಿಗೆಗೆ ಯತ್ನಿಸಿದೆ. ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಈ ಸುದ್ದಿಯನ್ನೂ ಓದಿ | Sports Budget: ಬಜೆಟ್ನಲ್ಲಿ ಕ್ರೀಡೆಗೆ 3794 ಕೋಟಿ ರೂ ನೀಡಿದ ಕೇಂದ್ರ ಸರ್ಕಾರ!
ಕೇಂದ್ರದಿಂದ ಅತ್ಯಂತ ನಿರಾಶದಾಯಕ ಬಜೆಟ್: ಸಿಎಂ ಸಿದ್ದರಾಮಯ್ಯ ಟೀಕೆ
ಬೆಂಗಳೂರು: ರಾಜ್ಯದಕ್ಕೆ ನಾವು ಹಲವು ಯೋಜನೆಗಳನ್ನು ನಿರೀಕ್ಷೆ ಮಾಡಿದ್ದೆವು. ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ. ಬಹಳ ನಿರಾಶದಾಯಕ ಬಜೆಟ್(Union Budget 2025), ಇದು ದೂರದೃಷ್ಟಿ ಇಲ್ಲದ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ 50,65,345 ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದೆ. ಕಳೆದ ವರ್ಷದ 48.20 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿತ್ತು, ಅದನ್ನು ಪರಿಷ್ಕೃತ ಅಂದಾಜು ಮಾಡಿದ್ದು 47.16 ಲಕ್ಷ ಕೋಟಿ. ಅಂದರೆ 1.04 ಲಕ್ಷ ಕೋಟಿ ಕಡಿಮೆಯಾಯಿತು. ಈ ಬಾರಿಯ ಬಜೆಟ್ನಲ್ಲಿ 15,68,936 ಕೋಟಿ ಸಾಲ ಇದೆ. ಶೇ.30 ಸಾಲ ಇರುತ್ತದೆ. ಅದರಲ್ಲಿ 12.7ಲಕ್ಷ ಕೋಟಿ ಬಡ್ಡಿ ಕೊಡುತ್ತಾರೆ. ಈ ದೇಶದ ಮೇಲೆ ಸುಮಾರು 202ರಿಂದ 205 ಲಕ್ಷ ಕೋಟಿಯಷ್ಟು ಸಾಲ ಇದೆ. ವಿತ್ತೀಯ ಕೊರತೆ ಶೇ.4.4, ಆದಾಯ ಕೊರತೆ ಶೇ.1.5 ಇದೆ.
ಅತ್ಯಂತ ಹೆಚ್ಚು ಆದಾಯ ನೀಡುವ ರಾಜ್ಯಗಳಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಅದರೆ ಅವರ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ಬಿಹಾರ ಹಾಗೂ ಆಂಧ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದೊಂದು ರೀತಿ ಆ ಎರಡು ರಾಜ್ಯಗಳಿಗೆ ಹೆಚ್ಚು ಒತ್ತು ನೀಡಿರುವ ಬಜೆಟ್. ನಮ್ಮ ರಾಜ್ಯದ ಯಾವುದೇ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ | Union Budget: ಬಜೆಟ್ನಲ್ಲಿ ಹಿರಿಯ ನಾಗರಿಕರಿಗೆ ಬಂಪರ್ ! ತೆರಿಗೆಯಲ್ಲಿ ವಿನಾಯಿತಿ
2023-24ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಇಲ್ಲಿವರೆಗೂ ಒಂದು ರೂಪಾಯಿಯೂ ಬಂದಿಲ್ಲ, ಈ ಬಜೆಟ್ನಲ್ಲೂ ಪ್ರಸ್ತಾಪ ಇಲ್ಲ. ರಾಯಚೂರಿನಲ್ಲಿ ಏಮ್ಸ್ ಘೋಷಣೆಯಾಗಲಿದೆ ಎಂದು ನಿರೀಕ್ಷೆ ಮಾಡಿದ್ದೆ. ಕೇಂದ್ರ ಸಚಿವರು ಭರವಸೆಯೂ ನೀಡಿದ್ದರು. ಅದರ ಪ್ರಸ್ತಾವನೆಯೂ ಇಲ್ಲ. ಕುಡಿಯುವ ನೀರು, ರೈಲ್ವೆ ಯೋಜನೆಗಳಿಗೆ ಹಣ ಒದಗಿಸಲು ಕೇಳಿದ್ದೆವು. ಆದರೆ, ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಮನವಿ ಮಾಡಿದ್ದೆವು. ಆದರೆ, ಪ್ರಯೋಜನವಾಗಿಲ್ಲ.
ಈ ಬಜೆಟ್ನಲ್ಲಿ ಬಡವರು, ಕಾರ್ಮಿಕರು, ಮಹಿಳೆಯರಿಗೆ ಖರ್ಚು ಮಾಡುವುದನ್ನು ಬಿಟ್ಟು ಕಾರ್ಪೋರೇಟ್ ಕಂಪನಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ಇನ್ನು ಬಿಹಾರ ರಾಜ್ಯದ ಚುನಾವಣೆ ಹಿನ್ನೆಲೆಯಲ್ಲಿ ಆ ರಾಜ್ಯದ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಅದೇ ರೀತಿ ಎಂಎಸ್ಎಂಇ ವಲಯಕ್ಕೆ ಕೊಡುತ್ತಿದ್ದ ಅನುದಾನವನ್ನೂ ಕಡಿಮೆ ಮಾಡಿದ್ದಾರೆ. ಒಟ್ಟಾರೆಯಾಗಿ ಮೋದಿ ಅವರ ಬಜೆಟ್ ಕರ್ನಾಟಕಕ್ಕೆ ಚೆಂಬು ಕೊಡುವುದನ್ನು ಮುಂದುವರಿಸಿದೆ ಎಂದು ಆಕ್ರೋಶ ಹೊರಹಾಕಿದರು.