ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಸಂಜೆ ಪದಗ್ರಹಣ ಮಾಡಿದರು. ಇವರ ಜತೆಗೆ ಮೊದಲ ಹಂತದಲ್ಲಿ ಸಚಿವರಾಗಿ 13 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಏಕೈಕ ಡಿಸಿಎಂ ಆಗಿ ಡಾ.ಜಿ.ಪರಮೇಶ್ವರ್ ಅಧಿಕಾರ ಸ್ವೀಕರಿಸಿದರೆ, ಮೊದಲ ಬಾರಿ ಸಚಿವರಾಗಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಡಿಕೆಶಿ ಸಂಪುಟ ಸೇರಿದ್ದಾರೆ. ಇನ್ನು ವಿಧಾನಸಭೆ ಸ್ಪೀಕರ್ ಆಗಿದ್ದ ಯು.ಟಿ.ಖಾದರ್ ಅವರೂ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ.

ಪ್ರಮಾಣ ಸ್ವೀಕಾರ ಮಾಡಿದ ಸಚಿವರ ಪಟ್ಟಿ
- ಡಿ.ಕೆ.ಶಿವಕುಮಾರ್-ಸಿಎಂ
- ಡಾ.ಜಿ.ಪರಮೇಶ್ವರ್ – ಡಿಸಿಎಂ
- ಕೆ.ಎಚ್.ಮುನಿಯಪ್ಪ- ಸಚಿವರು
- ಕೆ.ಜೆ. ಜಾರ್ಜ್ - ಸಚಿವರು
- ಎಂ.ಬಿ. ಪಾಟೀಲ್ - ಸಚಿವರು
- ರಾಮಲಿಂಗಾರೆಡ್ಡಿ - ಸಚಿವರು
- ಸತೀಶ್ ಜಾರಕಿಹೊಳಿ - ಸಚಿವರು
- ಕೃಷ್ಣಬೈರೇಗೌಡ - ಸಚಿವರು
- ಪ್ರಿಯಾಂಕ್ ಖರ್ಗೆ - ಸಚಿವರು
- ಯು.ಟಿ. ಖಾದರ್ – ಸಚಿವರು
- ಈಶ್ವರ್ ಖಂಡ್ರೆ - ಸಚಿವರು
- ಯತೀಂದ್ರ ಸಿದ್ದರಾಮಯ್ಯ - ಸಚಿವರು
- ಭೈರತಿ ಸುರೇಶ್ - ಸಚಿವರು
- ಶರಣಪ್ರಕಾಶ್ ಪಾಟೀಲ್-ಸಚಿವರು
ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಲೋಕಭವನದಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಿಎಂಗೆ ಪ್ರಮಾಣ ವಚನ ಬೋಧಿಸಿದರು. ಕುಟುಂಬಸ್ಥರು, ಹೈಕಮಾಂಡ್ ನಾಯಕರು, ಪಕ್ಷದ ಶಾಸಕರು ಸೇರಿ ಗಣ್ಯರು ಸೇರಿ ಸಾವಿರಾರು ಮಂದಿ ಸಮ್ಮುಖದಲ್ಲಿ ಪದಗ್ರಹಣ ನೆರವೇರಿತು.
ವಂದೇ ಮಾತರಂ ಗೀತೆ, ರಾಷ್ಟ್ರಗೀತೆ, ನಾಡಗೀತೆ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ರಾಜ್ಯಪಾಲರು ನೂತನ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. "ಡಿಕೆ ಶಿವಕುಮಾರ್ ಎಂಬ ಹೆಸರಿನಾದ ನಾನು, ಮುಖ್ಯಮಂತ್ರಿಯಾಗಿ ಕರ್ತವ್ಯವನ್ನು ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಮಾಡಿ ನಿರ್ವಹಿಸುತ್ತೇನೆ ಎಂದು ಡಿಕೆಶಿ ಪದಗ್ರಹಣ ಮಾಡಿದರು.

ಸಮಾರಂಭದ ವೇದಿಕೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳ ಸಿಎಂ ವಿ.ಡಿ.ಸತೀಶನ್, ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಸಾವಿರಾರು ಮಂದಿ ಉಪಸ್ಥಿತರಿದ್ದರು.