ಬೆಂಗಳೂರು, ಆ.14: ಸದ್ಗುರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದ ಸಾಯಿ ಸಿಂಫೋನಿ ಆರ್ಕೆಸ್ಟ್ರಾ ಭಾರತದಲ್ಲಿಯೇ ತರಬೇತಿ ಪಡೆದ ಏಕೈಕ ಸಿಂಫೋನಿ ಆರ್ಕೆಸ್ಟ್ರಾ. ಇದು ಭಾರತದ ಹೆಮ್ಮೆಯ ಸಿಂಫೋನಿ ಆರ್ಕೆಸ್ಟ್ರಾ ಆಗಿದ್ದು, ಮುಂದಿನ ದಿನಗಳಲ್ಲಿ ಸದ್ಗುರುಗಳ ನೇತೃತ್ವದ ಸಾಯಿ ಸಿಂಫೋನಿ ಆರ್ಕೆಸ್ಟ್ರಾದೊಂದಿಗೆ ನಾನೂ ಸಹಯೋಗ ವಹಿಸುತ್ತೇನೆ. ಹೊಸದೇನಾದರೂ ಮಾಡುತ್ತೇನೆ ಎಂದು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಂಗೀತ ಕಲಾವಿದ ರಿಕಿ ಕೇಜ್ (Ricky Kej) ಭರವಸೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ 'ದಿವ್ಯ ಸಂಜೆ' ಸಂವಾದ ಕಾರ್ಯಕ್ರಮದಲ್ಲಿ ರಿಕಿ ಕೇಜ್ ಮಾತನಾಡಿದರು. ನಾನು ವಿಶ್ವದ ಹಲವು ಸಿಂಪೋನಿ ಆರ್ಕೆಸ್ಟ್ರಾಗಳೊಂದಿಗೆ ಕೆಲಸ ಮಾಡುತ್ತೇನೆ. ಆಗೆಲ್ಲಾ ನನಗೆ ಸದಾ ಭಾರತದ ನೆನಪು ಬರುತ್ತದೆ. ಸಿಂಫೋನಿ ಆರ್ಕೆಸ್ಟ್ರಾದಲ್ಲಿ ಹಲವು ಶೈಲಿಯ, ಹಲವು ವಿಧದ ವಾದ್ಯಗಳಿವೆ. ಅದರಲ್ಲಿರುವ ಪ್ರತಿ ವಾದ್ಯವು ವಿಶಿಷ್ಟ ಮತ್ತು ತನ್ನದೇ ಆದ ಅಸ್ತಿತ್ವ ಹೊಂದಿರುತ್ತದೆ. ಅದು ಎಂದಿಗೂ ಮತ್ತೊಂದನ್ನು ಮೀರಲು ಅಥವಾ ಮತ್ತೊಂದರಂತೆ ಆಗಲು ಪ್ರಯತ್ನಿಸುವುದಿಲ್ಲ ಎಂದು ಅವರು ವಿವರಿಸಿದರು.
ಆದರೆ ಈ ಎಲ್ಲ ವಾದ್ಯಗಳು ಒಗ್ಗೂಡಿ ಒಂದು ಹದದಲ್ಲಿ ಮೇಳೈಸಿದಾಗ ಅದ್ಭುತವಾಗಿ ಸಂಗೀತ ಹೊರಹೊಮ್ಮುತ್ತದೆ. ಅದೇ ರೀತಿ ಭಾರತದಲ್ಲಿಯೂ ಹಲವು ಧರ್ಮ, ಭಾಷೆ, ಆಹಾರ ಪದ್ಧತಿಯಿದೆ. ಇದ್ಯಾವುದೂ ಮತ್ತೊಂದರಂತೆ ಅಲ್ಲ. ಆದರೆ ಎಲ್ಲವೂ ಸೇರಿ ಭಾರತೀಯ ಸಂಸ್ಕೃತಿಗೆ ಮೆರುಗು ತಂದಿದೆ ಎಂದು ವಿಶ್ಲೇಷಿಸಿದರು.

ಬೆಳಗಾವಿ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಪರಿಶೀಲನೆ: ಶ್ರೀ ಮಧುಸೂದನ ಸಾಯಿ
ನೂರು ಕೋಟಿಗೂ ಹೆಚ್ಚು ಜನರಿರುವ ಭಾರತದಲ್ಲಿ ಒಂದೇ ಒಂದು ಸಿಂಫೋನಿ ಆರ್ಕೆಸ್ಟ್ರಾ ಇದೆ. ಅದು ಸಾಯಿ ಸಿಂಫೋನಿ ಆರ್ಕೆಸ್ಟ್ರಾ. ನಮ್ಮ ಜನರು ಇದರ ಮಹತ್ವ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ "ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್" ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು. ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಡಿಯೊ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ನಲ್ಲಕದಿರೇನಹಳ್ಳಿ ಕ್ಯಾಂಪಸ್ ವಿದ್ಯಾರ್ಥಿನಿಯರಿಂದ "ಶಿಷ್ಯ ಅನುಶಾಸನಂ" ಉಪನಿಷತ್ ಭಾಗದ ಪಾರಾಯಣದೊಂದಿಗೆ ಸಂವಾದ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ "ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ" ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.
ನೈಜಿರಿಯಾದ ಕತ್ತಲಲ್ಲಿ ಕಾರಿನ ಬಾಗಿಲು ಬಡಿದ ಮಕ್ಕಳು ಇಂದು ವೈದ್ಯರು: ಸದ್ಗುರು ಶ್ರೀ ಮಧುಸೂದನ ಸಾಯಿ
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕ ಅಶ್ವಥ್ ನಾರಾಯಣ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.