ಬೆಂಗಳೂರು, ನ.19: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂ. ದರೋಡೆ ಮಾಡಿರುವ ಘಟನೆ ನಡೆದಿದೆ. ನಗರದ ಹೃದಯಭಾಗದಲ್ಲೇ ಬುಧವಾರ ಕೃತ್ಯ ನಡೆದಿದ್ದು, ಎಟಿಎಂಗಳಿಗೆ ಹಣ ಹಾಕಲು ಡೇರಿ ಸರ್ಕಲ್ ಫ್ಲೈಓವರ್ ಮೇಲೆ ಹೋಗುತ್ತಿದ್ದ ವಾಹನ ತಡೆದು ದರೋಡೆ (Bengaluru Robbery Case) ಮಾಡಲಾಗಿದೆ. ಸುದ್ದಗುಂಟೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹಣ ತುಂಬಿಸಿಕೊಂಡು ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಹೊರಟಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದಿದ್ದ 7-8 ಜನರ ಗ್ಯಾಂಗ್, ನಾವು ಆರ್ಬಿಐನವರು ಎಂದು ಹೇಳಿಕೊಂಡು ಹೆದರಿಸಿದ್ದಾರೆ. ಗನ್ಮ್ಯಾನ್ ಸೇರಿದಂತೆ ಎಲ್ಲರನ್ನೂ ಅಲ್ಲೇ ಇಳಿಸಿದ್ದ ಗ್ಯಾಂಗ್, ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್ಗೆ ಕರೆದೊಯ್ದಿದ್ದಾರೆ. ಡೇರಿ ಸರ್ಕಲ್ ಬಳಿ ಫ್ಲೈಓವರ್ನಲ್ಲಿ ವಾಹನ ನಿಲ್ಲಿಸಿ, ವಾಹನದಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.
ಪೊಲೀಸರಿಂದ ಸಿಬ್ಬಂದಿಯ ವಿಚಾರಣೆ
ಪ್ರಕರಣ ಹಿನ್ನೆಲೆ ಬೆಂಗಳೂರಿನಾದ್ಯಂತ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಮತ್ತು ಡಿಸಿಪಿಯಿಂದ ತನಿಖೆ ನಡೆಯುತ್ತಿದ್ದು, ಮೇಲ್ನೋಟಕ್ಕೆ ಸಿಎಂಎಸ್ ಸಿಬ್ಬಂದಿಯ ಮೇಲೂ ಅನುಮಾನವಿದೆ. ಘಟನೆ ನಡೆದ ಬಳಿಕ ತಡವಾಗಿ ಮಾಹಿತಿ ನೀಡಿದ್ದಾರೆ. ಅವರ ಬಳಿ ಇದ್ದ ಗನ್ ಯಾಕೆ ಬಳಕೆ ಮಾಡಿಲ್ಲ ಎನ್ನುವ ಪ್ರಶ್ನೆ ಇದೆ. ಈ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದ್ದು, ಸದ್ಯ ಚಾಲಕ, ಇಬ್ಬರು ಗನ್ಮೆನ್ ಗಳು ಹಾಗೂ ಓರ್ವ ಹಣ ಡೆಪಾಸಿಟ್ ಮಾಡುವ ಸಿಬ್ಬಂದಿಯನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂದಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸಿಂಮತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಹಲವು ದಿನಗಳಿಂದಲೇ ಸ್ಕೆಚ್
ಹಲವು ದಿನಗಳಿಂದಲೇ ದರೋಡೆಗೆ ಸಂಚು ರೂಪಿಸಿದ್ದ ದರೋಡೆಕೋರರ ಗ್ಯಾಂಗ್ ಬುಧವಾರ ಬೆಳಗ್ಗೆ ಎಟಿಎಂಗಳಿಗೆ ಹಣ ಸಾಗಿಸುವ ವ್ಯಾನ್ ಹಿಂಬಾಲಿಸಿದೆ. ಆ ಬಳಿಕ ವಾಹನವನ್ನು ಅಡ್ಡಗಟ್ಟಿ ಸಿಬ್ಬಂದಿಯನ್ನ ಬೆದರಿಸಿ ವಾಹನದ ಹಿಂಬದಿಯ ಡೋರ್ ತೆರೆದು ಎಟಿಎಂಗಳಿಗೆ ತುಂಬಲು ಇದ್ದ ಕೋಟ್ಯಂತರ ರೂಪಾಯಿ ಹಣ ತುಂಬಿಕೊಂಡು ಇನ್ನೋವಾ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಪ್ರಾಥಮಿಕ ತನಿಖೆ ನಡೆಸಲಾಗುತ್ತಿದ್ದು, ಮೇಲ್ನೋಟಕ್ಕೆ ಸಿಎಂಎಸ್, ಚಾಲಕ, ಸಿಬ್ಬಂದಿ ಮೇಲೆ ಅನುಮಾನ ಮೂಡಿದೆ. ಈ ಹಿನ್ನೆಲೆ ಪೊಲೀಸರು ಚಾಲಕನ ಪೂರ್ವಾಪರ ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಸಿದ್ಧಾಪುರ ಹಾಗೂ ಆಡುಗೋಡಿ ಪೊಲೀಸರಿಂದಲೂ ಸ್ಥಳ ಪರಿಶೀಲನೆ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯೂ ನಡೆಸಲಾಗುತ್ತಿದೆ.