ಬೆಂಗಳೂರು, ಮಾ.4: ಮೀಸಲಾತಿ ಮತ್ತು ಒಳಮೀಸಲಾತಿ ಜಾರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ (State Congress Government) ಬದ್ಧತೆಯೇ ಇಲ್ಲ. ಘೋಷಣೆ ಮಾಡುವಾಗ ಗೊಂದಲ ಸೃಷ್ಟಿಸಿ ಅನ್ಯಾಯ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಮೀಸಲಾತಿ ಮತ್ತು ಒಳಮೀಸಲಾತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕಳ್ಳಾಟ ಆಡುತ್ತಿದೆ. ಯಾರಾದರೂ ಕೋರ್ಟಿಗೆ ಹೋಗಲಿ, ಪ್ರಶ್ನೆ ಮಾಡಲಿ, ಹೇಗಾದರೂ ನಿಂತು ಹೋಗಲಿ ಎಂಬ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಂತಿದೆ. ಇದರ ವಿರುದ್ಧ ಜನರ ಆಕ್ರೋಶ ಇದೆ. ಅದನ್ನು ಆಂದೋಲನವಾಗಿ ಪರಿವರ್ತಿಸುತ್ತೇವೆ. ಇಡೀ ರಾಜ್ಯದಲ್ಲಿ ದೊಡ್ಡ ಹೋರಾಟ ಆರಂಭವಾಗಲಿದೆ. ಇದರ ರೂಪರೇಷೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಪರಿಶಿಷ್ಟ ಜಾತಿ ಮತ್ತು ವರ್ಗಗಳು ಹೋರಾಟ ಮಾಡುತ್ತಿರುವುದನ್ನು ಗಮನಿಸಿ, ಪರಿಶಿಷ್ಟ ಜಾತಿಗೆ ಶೇ.15 ರಿಂದ 17ಕ್ಕೆ, ವರ್ಗಗಳಿಗೆ ಶೇ.3 ರಿಂದ 7 ಕ್ಕೆ ಅಂದರೆ ಎರಡೂ ಸೇರಿ ಶೇ.25 ಮೀಸಲಾತಿ ಕೊಟ್ಟಿದ್ದೆವು. ಇದನ್ನು ಅಂದು ವಿರೋಧ ಪಕ್ಷ ಸೇರಿ ಎಲ್ಲರ ಒಪ್ಪಿಗೆ ಪಡೆದ ನಂತರವೇ ಘೋಷಣೆ ಮಾಡಲಾಗಿತ್ತು. ಆದರೂ ಚುನಾವಣೆ ವೇಳೆ ಸಿದ್ದರಾಮಯ್ಯ ವಿರೋಧಿಸಿದ್ದರು ಎಂದು ಅವರು ದೂರಿದರು.
ಶೇ.17 ಹೆಚ್ಚಿಸದೆ ಒಳಮೀಸಲಾತಿ ಜಾರಿ ಮಾಡಲು ಆಗಲ್ಲ. ಅದನ್ನು ಮುಟ್ಟಲು ಹೋದರೆ ಈಗ ಪರಿಶಿಷ್ಟ ಜಾತಿಗೆ ಕೊಟ್ಟಿರುವ ಶೇ. 7 ಮೀಸಲಾತಿಯನ್ನು ಅನೂರ್ಜಿತ ಮಾಡಿದ್ದೀರಿ. ಸರ್ಕಾರ ಒಂದರ ಮೇಲೆ ಒಂದು ತಪ್ಪು ಮಾಡುತ್ತಾ ಬರುತ್ತಿದೆ. ಜನ ಒಂದು ತಾಳ್ಮೆಯಿಂದ ಇರ್ತಾರೆ. ತಾಳ್ಮೆಯ ಕಟ್ಟೆ ಒಡೆದಾಗ ದೊಡ್ಡ ಆಂದೋಲನ ಸೃಷ್ಟಿ ಮಾಡಲಿದ್ದಾರೆ ಎಂದು ಕಿಡಿಕಾರಿದರು.
ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಜನರನ್ನು ವಂಚನೆ ಮಾಡುತ್ತಾ ಬರುತ್ತಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ. ಬಿಜೆಪಿ ಕಾಲದಲ್ಲಿ ಯಾವ ರೀತಿ ನ್ಯಾಯ ಕೊಟ್ಟದ್ದೆವು ಎಂಬುದನ್ನೂ ತಿಳಿಸುತ್ತೇವೆ. ರಾಜ್ಯ ಮತ್ತು ಕೇಂದ್ರದ ಮುಖಂಡರು ಸೇರಿ ಚರ್ಚಿಸಿ ಆಂದೋಲನದ ರೂಪರೇಷೆ ಸಿದ್ಧಪಡಿಸುತ್ತೇವೆ. ಇಡೀ ರಾಜ್ಯದಲ್ಲಿ ಎಂದೂ ಕಂಡರಿಯದ ಆಂದೋಲನ ಮಾಡುತ್ತೇವೆ ಎಂದರು.
SC Internal Reservation: ಒಳ ಮೀಸಲಾತಿಯಡಿ ಹುದ್ದೆಗಳ ಭರ್ತಿ ಮಾಡಿ: ಬಿ.ವೈ. ವಿಜಯೇಂದ್ರ ಆಗ್ರಹ
ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್ಗೆ ನೀತಿಪಾಠ ಹೇಳುವ ಕೆಲಸವನ್ನು ಮಾಡುತ್ತೇವೆ. ಯಾರನ್ನು ಓಟ್ ಬ್ಯಾಂಕ್ ಮಾಡಿಕೊಂಡು ವಂಚಿಸುತ್ತಾ ಬಂದಿದ್ದೀರೋ ಅವರ ಕೈನಲ್ಲೇ ಪಾಠ ಕಲಿಸುತ್ತೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗುಡುಗಿದರು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು.