ಬೆಂಗಳೂರು, ಜೂ.26: ಬೆಂಗಳೂರಿನ ಬನಶಂಕರಿಯ 'ಸುಚಿತ್ರಾ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿ'ಯಲ್ಲಿ ಮತ್ತೊಂದು ಆಕರ್ಷಕ ಕಲಾ ಸಂಜೆ ಅನಾವರಣಗೊಳ್ಳಲು ಸಿದ್ಧವಾಗಿದೆ. 'ಪರಮ್ ಫೌಂಡೇಶನ್' (Param Foundation) ವತಿಯಿಂದ ಆಯೋಜಿಸಲಾಗುತ್ತಿರುವ 'ಪರಮ್ ವಿಹಾರ' ಸಾಂಸ್ಕೃತಿಕ ಸರಣಿ ಕಾರ್ಯಕ್ರಮವು ಇದೇ ಜೂನ್ 28ರಂದು ಭಾನುವಾರ ಸಂಜೆ 6 ಗಂಟೆಯಿಂದ ಜರುಗಲಿದೆ. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಈ ಅಪರೂಪದ ಗಾನ-ನೃತ್ಯ ಜುಗಲ್ಬಂದಿಗೆ ಬೆಂಗಳೂರಿನ ಕಲಾಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.
ಸುಶ್ರಾವ್ಯ ಕಂಠದಲ್ಲಿ ಮೂಡಲಿರುವ ಸುಗಮ ಸಂಗೀತ ಲಹರಿ
ಕಾರ್ಯಕ್ರಮದ ಆರಂಭದಲ್ಲಿ ಗಾಯಕಿ ನಿಕಿತಾ ಭಾರದ್ವಾಜ್ ಅವರ ಸುಗಮ ಸಂಗೀತ ಗಾಯನ ಪ್ರಸ್ತುತಿ ನಡೆಯಲಿದೆ. ಹಿತವಾದ ಸಾಹಿತ್ಯ ಮತ್ತು ಮಧುರ ನಾದದ ಮೂಲಕ ಶ್ರೋತೃಗಳನ್ನು ರಂಜಿಸಲಿರುವ ಈ ಕಛೇರಿಗೆ ತಬಲಾದಲ್ಲಿ ಪ್ರಮೋದ್ ಗಬ್ಬೂರ್ ಹಾಗೂ ಕೀಬೋರ್ಡ್ನಲ್ಲಿ ರಮೇಶ್ ಟಿ.ಎಸ್. ಸಾಥ್ ನೀಡಲಿದ್ದಾರೆ.
ನಯನಮನೋಹರ ಭರತನಾಟ್ಯ ವೈಭವ
ಗಾಯನದ ನಾದಲಹರಿಯ ನಂತರ ಶಾಸ್ತ್ರೀಯ ನೃತ್ಯದ ಅದ್ಭುತ ಪ್ರದರ್ಶನಗಳು ಸಭಿಕರನ್ನು ಕಣ್ಮನ ಸೆಳೆಯಲಿವೆ. ಮೊದಲಿಗೆ 'ಸಂಗೀತ ನಾಟ್ಯ ಕಲಾಲಯ' ಸಂಸ್ಥೆಯ ನಿರ್ದೇಶಕಿ ಸಂಗೀತ ದೀಪಕ್ ಅವರ ಶಿಷ್ಯವೃಂದದಿಂದ ಆಕರ್ಷಕ ಭರತನಾಟ್ಯ ಪ್ರದರ್ಶನ ಮೂಡಿಬರಲಿದೆ. ಇದರ ಬೆನ್ನಲ್ಲೇ 'ಈಷಾ ನಾಟ್ಯಶಾಲಾ' ಸಂಸ್ಥೆಯ ನಿರ್ದೇಶಕಿ ಮೋನಿಷಾ ಕಾಂತರಾಜು ಅವರ ಶಿಷ್ಯರಿಂದ ಭರತನಾಟ್ಯ ಶೈಲಿಯಲ್ಲಿ ಸಮೂಹ ನೃತ್ಯ ಪ್ರದರ್ಶನಗಳು ರಂಗದ ಮೇಲೆ ಅನಾವರಣಗೊಳ್ಳಲಿವೆ.
ಎನ್ಜಿಒಗಳಿಗೆ ಬರೋಬ್ಬರಿ 24 ಕೋಟಿ ರೂ. ಅನುದಾನ; ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಎಚ್ಸಿಎಲ್ ಫೌಂಡೇಶನ್
ಹೊಸ ತಲೆಮಾರಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಪರಮ್ ಫೌಂಡೇಶನ್ನ ಈ ಅಪರೂಪದ ಸಾಂಸ್ಕೃತಿಕ ಸಂಜೆಗೆ ಬೆಂಗಳೂರಿನ ಸಂಗೀತ ಮತ್ತು ನೃತ್ಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಹುರಿದುಂಬಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.