ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ರಜತ ಮಹೋತ್ಸವು ಡಿ.21ರಂದು ವಿಜೃಂಭಣೆಯಿಂದ ನೆರವೇರಿತು. ಪರಮಪೂಜ್ಯ ಶ್ರೀ ತಿರುಚಿ ಮಹಾಸ್ವಾಮೀಜಿಯವರ ಪರಮಾನುಗ್ರಹದಿಂದ ಪ್ರಾರಂಭವಾದ ಈ ಶಾಲೆಯು, ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಮೌಲ್ಯಧಾರಿತ ಶಿಕ್ಷಣವನ್ನು ಯಾವುದೇ ರೀತಿಯ ಭೇದ-ಭಾವವಿಲ್ಲದೆ ಸರ್ವರಿಗೂ ಶಿಕ್ಷಣ ಎಂಬ ಧ್ಯೇಯದೊಂದಿಗೆ ನೀಡುತ್ತಾ ಬಂದಿದೆ.
ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಭವ್ಯ ಸಮಾರಂಭದ ವೇದಿಕೆಯನ್ನು ಅಲಂಕರಿಸಿದ ಎಲ್ಲಾ ಗಣ್ಯರು ಸಂವಾದ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರಶ್ನೆಗಳಿಗೆ ಬಹಳ ಅರ್ಥಪೂರ್ಣವಾಗಿ ಉತ್ತರಿಸಿದರು.
ಕರ್ನಾಟಕ ರಾಜ್ಯದ ಮಹಿಳಾ ಅಯೋಗ್ಯದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರು ಮಾತನಾಡಿ, ಮಕ್ಕಳು ತಾವು ಅಂದುಕೊಂಡಿದ್ದನ್ನು ಸಾಧಿಸಲು ಶ್ರದ್ಧೆ ಮತ್ತು ಶ್ರಮ ವಹಿಸಬೇಕು. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು ಇಲ್ಲದಿದ್ದರೂ ರಾಜಕೀಯವನ್ನು ಚೆನ್ನಾಗಿ ಅರಿಯಬೇಕು ಎಂದು ಹೇಳಿದರು.

ಇಸ್ರೋ ಡೆಪ್ಯೂಟಿ ಡೈರೆಕ್ಟರ್ ಡಾ. ಎಸ್ ವೆಂಕಟೇಶ್ವರ ಶರ್ಮ ಅವರು ಮಾತನಾಡಿ, ವಿಜ್ಞಾನ ಮತ್ತು ಅಧ್ಯಾತ್ಮ ಎರಡು ಜತೆಜತೆಯಲ್ಲಿ ಸಾಗಬೇಕು. ವಿದ್ಯಾರ್ಥಿಗಳ ಕೈಯಲ್ಲಿ ಒಂದು ಮಿನಿ ಸ್ಯಾಟಲೈಟ್ ಮಾಡಿಸುವಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಲೇಖಕರಾದ ಶಾಂತನು ಗುಪ್ತ ಅವರು ಮಾತನಾಡಿ, ನಮ್ಮ ಜೀವನದಲ್ಲಿ ಏನಾದರೂ ಕಷ್ಟಗಳು ಬಂದಾಗ ಶ್ರೀ ರಾಮನ ಜೀವನವನ್ನು ನೆನಪಿಸಿಕೊಳ್ಳಿ, ಕಷ್ಟಗಳನ್ನು ಸಹಿಸುವ ಶಕ್ತಿ ಬರುತ್ತದೆ ಎಂದರು.

ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯವರು ಮಾತನಾಡುತ್ತಾ, ತಮ್ಮ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳುವ ಮುನ್ನ ದೈಹಿಕ ಬಲ, ಬುದ್ಧಿಬಲ ಹಾಗೂ ಭಾವನಾತ್ಮಕ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಶ್ರೀ ಹರಿಹರಪುರ ಮಹಾಸ್ವಾಮೀಜಿ ಮಾತನಾಡಿ, ತಂತ್ರಜ್ಞಾನವು ನಮ್ಮ ಲೌಕಿಕ ಸವಲತ್ತುಗಳಿಗೆ ಅನುಕೂಲ ಮಾಡಿಕೊಡಬಹುದೇ ಹೊರತು ಆತ್ಮ ಶಕ್ತಿ ಜಾಗೃತಿಗಲ್ಲ . ಆದ್ದರಿಂದ ನಮ್ಮ ಆಚಾರ ವಿಚಾರಗಳ ಬಗ್ಗೆ ಎಂದೂ ಉದಾಸೀನ ಮಾಡಬೇಡಿ ಎಂದರು.
ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಮಾತನಾಡಿ, ನಾವು ಕಲಿಯುವ ವಿದ್ಯೆ ಸಮಾಜದ ಒಳಿತಿಗಾಗಿ ಇರಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರತಿದಿನ ಒಂದು ಗಂಟೆಯನ್ನು ಮೀಸಲಿಡಬೇಕು ಎಂದು ಜಾಗೃತಿ ಮೂಡಿಸಿದರು.
ಈ ಸುಸಂದರ್ಭದಲ್ಲಿ ಶಾಲೆಯ ಗೌರವಕಾರ್ಯದರ್ಶಿಗಳಾದ ಹಯಗ್ರೀವ ಆಚಾರ್ಯ ಅವರಿಗೆ ಎಲ್ಲಾ ಗುರು ಹಿರಿಯರ ಸಮ್ಮುಖದಲ್ಲಿ ʼಸರ್ವ ಸಂತ ಪ್ರಿಯ ಸೇವಾ ಸೇನಾಧಿಪತಿʼ ಎಂಬ ಬಿರುದನ್ನು ನೀಡಿ ಗೌರವಿಸಿದರು.
ಸಮರ್ಪಣಾ ಭಾವ ಇದ್ದಾಗ, ಸಿಗುವ ಭಗವಂತನ ಸಾನಿಧ್ಯ
ವಿದ್ಯಾರ್ಥಿಗಳು, ಮಕ್ಕಳು ಸೇರಿ 7000ಕ್ಕೂ ಮಂದಿ ಭಾಗವಹಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ, ಸೃಷ್ಟಿಯ ಮೂಲದಿಂದ ಆಧುನಿಕ ಭಾರತದ ವರೆಗೆ ಸನಾತನ ಕಥೆಗಳನ್ನು ಒಳಗೊಂಡ ಆದಿ ಅನಂತ ಮಾಯೆ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆದವು.