ಬೆಂಗಳೂರು: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಮ್ಮೆ ಹೆಚ್ಚಿನ ಜಿಡಿಪಿ (India's GDP growth) ಬೆಳವಣಿಗೆಯಾಗಿದೆ ಎಂದು ಸುಳ್ಳು ಅಂಕಿ-ಅಂಶವನ್ನು ತೋರಿಸಿ ಸಂಭ್ರಮಿಸುತ್ತಿದೆ. ಇದನ್ನೇ ದೇಶದ ಪ್ರತಿ ನಾಗರಿಕರ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಬಿಂಬಿಸಲಾಗುತ್ತಿದೆ. ನಮ್ಮ ಆರ್ಥಿಕತೆಯು ಇಷ್ಟು ವೇಗವಾಗಿ ಬೆಳೆಯುತ್ತಿದ್ದರೆ ಉತ್ತಮ ಉದ್ಯೋಗಾವಕಾಶಗಳು ಏಕೆ ಸೃಷ್ಟಿಯಾಗುತ್ತಿಲ್ಲ? ಜನರ ಆದಾಯ ಏಕೆ ಹೆಚ್ಚುತ್ತಿಲ್ಲ? ಬಹುತೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ಇನ್ನೂ ಏಕೆ ದೊರೆಯುತ್ತಿಲ್ಲ? ಎಂಬ ಪ್ರಶ್ನೆಗಳನ್ನು ದೇಶದ ಜನರು ಕೇಳುತ್ತಿದ್ದಾರೆ. ಜನರ ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ (Dr. G. Parameshwar) ಆಗ್ರಹಿಸಿದ್ದಾರೆ.
ದೇಶದ ಜಿಡಿಪಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಜಿಡಿಪಿಯ ಮೂಲ ವರ್ಷವನ್ನು 2011-12ರಿಂದ 2022-23ಕ್ಕೆ ಬದಲಾಯಿಸಿದೆ. ಜಿಡಿಪಿ ಲೆಕ್ಕಾಚಾರದ ವಿಧಾನ, ಅಂಕಿ-ಅಂಶಗಳ ಮೂಲಗಳು ಮತ್ತು ಅಂದಾಜು ಪ್ರಕ್ರಿಯೆಗಳಲ್ಲೂ ಜನರಿಗೆ ವಂಚಿಸುವ ಉದ್ದೇಶದಿಂದ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಕೋವಿಡ್-19 ಮಹಾಮಾರಿಯಿಂದ ಉಂಟಾದ ಆರ್ಥಿಕ ಕುಸಿತದ ವರ್ಷವನ್ನು ಮೂಲ ವರ್ಷವೆಂದು ಪರಿಗಣಿಸಿ ಜಗತ್ತಿನ ಅರ್ಥಶಾಸ್ತ್ರಜ್ಞರ ಮುಂದೆ ಹಾಸ್ಯಾಸ್ಪದ ಪ್ರವೃತ್ತಿಯನ್ನು ತೋರಿಸಿದ್ದಾರೆ. ಕೇವಲ ಹೆಚ್ಚಿನ ಬೆಳವಣಿಗೆ ದರಗಳ ಬಗ್ಗೆ ಮಾತ್ರ ಪ್ರಚಾರ ಮಾಡಲಾಗುತ್ತಿದೆ. ಒಂದು ಆರ್ಥಿಕತೆ ಒಂದು ವರ್ಷದಲ್ಲಿ ತೀವ್ರವಾಗಿ ಕುಸಿದರೆ, ಮುಂದಿನ ವರ್ಷ ಆ ಕುಸಿದ ಮಟ್ಟದಿಂದ ಆಗುವ ಬೆಳವಣಿಗೆ ಸಹಜವಾಗಿಯೇ ದೊಡ್ಡ ಶೇಕಡಾವಾರು ಬೆಳವಣಿಗೆಯಂತೆ ಕಾಣಿಸುತ್ತದೆ.
ಆದ್ದರಿಂದ ಜನರಿಗೆ ಆರ್ಥಿಕತೆ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಷ್ಟೇ ಅಲ್ಲ, ಆ ಬೆಳವಣಿಗೆಯಲ್ಲಿ ನಿಜವಾದ ಆರ್ಥಿಕ ಚಟುವಟಿಕೆಯ ಪ್ರಮಾಣ ಎಷ್ಟಿದೆ ಮತ್ತು ಅಂಕಿ-ಅಂಶಗಳ ಪರಿಣಾಮ ಎಷ್ಟಿದೆ ಎಂಬುದನ್ನೂ ತಿಳಿದುಕೊಳ್ಳುವ ಹಕ್ಕಿದೆ. ಇಂತಹ ಬದಲಾವಣೆಗಳು ದೇಶದ ಆರ್ಥಿಕತೆಯ ಗಾತ್ರ ಮತ್ತು ಬೆಳವಣಿಗೆಯ ದಿಕ್ಕನ್ನೇ ಬದಲಾಯಿಸುವ ಸಂದರ್ಭದಲ್ಲಿ, ಸಂಪೂರ್ಣ ಪಾರದರ್ಶಕತೆ ಮತ್ತು ಸ್ವತಂತ್ರ ಪರಿಶೀಲನೆಗೆ ಆಗ್ರಹಿಸುವ ಹಕ್ಕು ಜನರಿಗೆ ಖಂಡಿತವಾಗಿಯೂ ಇದೆ ಎಂದು ತಿಳಿಸಿದ್ದಾರೆ.
ಕಲಬುರಗಿಯ 105 ಕೋಟಿ ರುಪಾಯಿ ಮೊತ್ತದ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ
ಜಿಡಿಪಿ ಅಂಕಿ-ಅಂಶವು ಸಮೃದ್ಧಿಯ ಪ್ರಮಾಣಪತ್ರವಲ್ಲ. ಕಾರಣ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದೆಂದು ಹೇಳಿಕೊಳ್ಳುವ ಭಾರತದ ತಲಾ ಆದಾಯ ಜಗತ್ತಿನ ಬಡರಾಷ್ಟ್ರಗಳಿಗೆ ಸಮಾನವಾಗಿದೆ. ಐಎಂಎಫ್ ಅಂದಾಜಿನ ಪ್ರಕಾರ, 2026ರಲ್ಲಿ ಭಾರತದ ತಲಾವಾರು ಜಿಡಿಪಿ ಸುಮಾರು 2,813 ಅಮೆರಿಕನ್ ಡಾಲರ್ ಮಾತ್ರವಾಗಿದ್ದು, ತಲಾ ಆದಾಯದ ದೃಷ್ಟಿಯಿಂದ ಭಾರತವು ಜಾಗತಿಕವಾಗಿ ಸುಮಾರು 150ನೇ ಸ್ಥಾನದಲ್ಲಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಭಾರತವು ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ. ಬಾಂಗ್ಲಾದೇಶದ ತಲಾವಾರು ಜಿಡಿಪಿ ಸುಮಾರು 2,911 ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಭಾರತದ ತಲಾ ಆದಾಯ ಈಗ ಅಂದಾಜು ಮಾಡಿರುವುದಕ್ಕಿಂತಲೂ ಕಡಿಮೆಯಿದೆ. ಉತ್ತಮ ಗುಣಮಟ್ಟದ ಉದ್ಯೋಗಗಳು ದೇಶದ ಕಾರ್ಮಿಕ ವಲಯದ ಕೇವಲ ಸಣ್ಣ ವರ್ಗಕ್ಕಷ್ಟೇ ತಲುಪುತ್ತಿವೆ ಎಂದು ಐಎಂಎಫ್ ಕೂಡ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ,
ಕೇಂದ್ರ ಸರ್ಕಾರ ಉತ್ತರಿಸಬೇಕಾದ ಕೆಲವು ಪ್ರಶ್ನೆಗಳು ನಮ್ಮ ಮುಂದಿವೆ:
- ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದ ಯುವಜನರಿಗೆ 7–8% ಜಿಡಿಪಿ ಬೆಳವಣಿಗೆಯಿಂದ ಏನು ಪ್ರಯೋಜನ?
- ಕೊಳ್ಳುವ ಸಾಮರ್ಥ್ಯ ಕುಸಿಯುತ್ತಿರುವ ಕುಟುಂಬಕ್ಕೆ ಇದರಿಂದ ಯಾವ ಉಪಯೋಗ?
- ಕಡಿಮೆ ಸಂಬಳ ಅಥವಾ ಉದ್ಯೋಗ ಭದ್ರತೆಯಿಲ್ಲದ ಕಾರ್ಮಿಕರಿಗೆ ಈ ಅಂಕಿ-ಅಂಶಗಳಿಂದ ಯಾವ ಲಾಭ?
ಭಾರತಕ್ಕೆ ಅಂಕಿ-ಅಂಶಗಳಲ್ಲ, ಉದ್ಯೋಗಗಳು ಬೇಕು
ಭಾರತಕ್ಕೆ ಬೆಳವಣಿಗೆಯ ಅಂಕಿ-ಅಂಶಗಳಿಗಿಂತ ಉದ್ಯೋಗಾವಕಾಶಗಳು ಮುಖ್ಯ. ನಮ್ಮ ಜನಸಂಖ್ಯಾ ಸಾಮರ್ಥ್ಯವನ್ನು ಉತ್ಪಾದಕ ಶಕ್ತಿಯಾಗಿ ಪರಿವರ್ತಿಸುವ ಆರ್ಥಿಕತೆಯ ಅಗತ್ಯವಿದೆ. ಕೇವಲ ಬಂಡವಾಳ ಆಧಾರಿತ ಉತ್ಪಾದನೆಯಲ್ಲ, ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಉತ್ಪಾದನಾ ವಲಯ ಬೇಕಾಗಿದೆ. ಹೆಚ್ಚಿನ ವೇತನ, ಬಲಿಷ್ಠ ಎಂಎಸ್ಎಂಇಗಳು ಮತ್ತು ವಿದ್ಯಾವಂತ ಯುವ ಜನರಿಗೆ ಹೆಚ್ಚಿನ ಅವಕಾಶಗಳು ಅಗತ್ಯ ಎಂದು ಡಿಸಿಎಂ ಹೇಳಿದ್ದಾರೆ.
ಬಾಹ್ಯ ಆರ್ಥಿಕ ಸ್ಥಿತಿಯತ್ತವೂ ಗಮನ ಹರಿಸಬೇಕು
ಜಿಡಿಪಿ ಅಂಕಿ-ಅಂಶಗಳಾಚೆಗೆ ಹೋಗಿ ಭಾರತದ ಬಾಹ್ಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಬೇಕಾಗಿದೆ. ಸರಕು ವ್ಯಾಪಾರ ಕೊರತೆ (Merchandise Trade Deficit) ವೇಗವಾಗಿ ಹೆಚ್ಚುತ್ತಿದೆ. 2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ (Current Account Deficit) 4.2 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸರಕು ವ್ಯಾಪಾರ ಕೊರತೆ 86.1 ಬಿಲಿಯನ್ ಡಾಲರ್ಗೆ ತಲುಪಿದೆ. 2025-26ರ ಇಡೀ ಹಣಕಾಸು ವರ್ಷದಲ್ಲಿ ಈ ಕೊರತೆ 333.19 ಬಿಲಿಯನ್ ಡಾಲರ್ ಆಗಿತ್ತು.
ಇದಕ್ಕಿಂತಲೂ ಮುಖ್ಯವಾಗಿ, ಮೌಲ್ಯಮಾಪನ ಪರಿಣಾಮಗಳನ್ನು ಹೊರತುಪಡಿಸಿದ ಬಾಕಿ ಪಾವತಿ (Balance of Payments) ಆಧಾರದ ಮೇಲೆ, ಭಾರತದ ವಿದೇಶಿ ವಿನಿಮಯ ಮೀಸಲುಗಳು 2026ರ ಏಪ್ರಿಲ್–ಜೂನ್ ಅವಧಿಯಲ್ಲಿ 8.1 ಬಿಲಿಯನ್ ಡಾಲರ್ ಕುಸಿದಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 4.5 ಬಿಲಿಯನ್ ಡಾಲರ್ ಹೆಚ್ಚಳವಾಗಿತ್ತು. ಈ ಬದಲಾವಣೆಯು ಭಾರತದ ಬಾಹ್ಯ ಆರ್ಥಿಕ ದೌರ್ಬಲ್ಯದ ಬಗ್ಗೆ ಗಂಭೀರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಶಕ್ತಿ ಎಂದರೆ ಸ್ವಾವಲಂಬನೆ
ತೈಲ ಬೆಲೆಗಳು, ಜಾಗತಿಕ ಸಂಘರ್ಷಗಳು, ಆಮದಿನ ಮೇಲಿನ ಅವಲಂಬನೆ ಮತ್ತು ಜಾಗತಿಕ ವ್ಯಾಪಾರ ಏರಿಳಿತಗಳನ್ನು ಎದುರಿಸುವಲ್ಲಿ ಭಾರತವು ದುರ್ಬಲ ಸ್ಥಿತಿಯಲ್ಲಿರುವಾಗ ತನ್ನ ಆರ್ಥಿಕ ಶಕ್ತಿಯ ಬಗ್ಗೆ ಹೆಮ್ಮೆಪಡುವುದು ಸಮಂಜಸವಲ್ಲ.
ವಿಶ್ವದಾದ್ಯಂತ ನಡೆಯುತ್ತಿರುವ ಯುದ್ಧಗಳು ಮತ್ತು ಸಂಘರ್ಷಗಳು ಪ್ರತಿ ಭಾರತೀಯರ ಕುಟುಂಬದ ಮೇಲೂ ಪರಿಣಾಮ ಬೀರುತ್ತವೆ. ಕಚ್ಚಾ ತೈಲದ ಬೆಲೆ, ಸಾರಿಗೆ ವೆಚ್ಚ, ಅಗತ್ಯ ವಸ್ತುಗಳ ದರ ಏರಿಕೆ, ರೂಪಾಯಿ ಮೌಲ್ಯ ಮತ್ತು ಆಮದು ಸರಕುಗಳ ಬೆಲೆಗಳ ರೂಪದಲ್ಲಿ ಈ ಪರಿಣಾಮಗಳು ಮನೆಮನೆಗೂ ತಲುಪುತ್ತವೆ.
ಇಂಧನ ಮತ್ತು ಪ್ರಮುಖ ವಸ್ತುಗಳ ಮೇಲಿನ ನಮ್ಮ ಆಮದು ಅವಲಂಬನೆಯು ಇಂತಹ ಜಾಗತಿಕ ಆಘಾತಗಳನ್ನು ದೇಶದ ಆರ್ಥಿಕ ದೌರ್ಬಲ್ಯವನ್ನಾಗಿಸುತ್ತದೆ. ಇದೇ ವೇಳೆ, “ಮೇಕ್ ಇನ್ ಇಂಡಿಯಾ” ಮತ್ತು “ಆತ್ಮನಿರ್ಭರ ಭಾರತ” ಘೋಷಣೆಗಳನ್ನು ನೀಡಿ ದಶಕದ ಬಳಿಕವೂ, ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ದೇಶದ ಆಮದು ಅವಲಂಬನೆ ಇನ್ನೂ ಏಕೆ ಹೆಚ್ಚಾಗಿಯೆ ಇದೆ ಎಂಬ ಪ್ರಶ್ನೆಯನ್ನು ದೇಶದ ಜನ ಕೇಳಬೇಕಾಗಿದೆ.
ಕೇಂದ್ರ ಸರ್ಕಾರವು ಉದ್ಯೋಗ, ವೇತನ, ಅಸಮಾನತೆ, ತಲಾ ಆದಾಯ, ಉತ್ಪಾದನೆ, ರಫ್ತು ಮತ್ತು ಕುಟುಂಬಗಳ ಆರ್ಥಿಕ ಪ್ರಗತಿ ಕುರಿತ ಪ್ರಶ್ನೆಗಳಿಗೆ ಉತ್ತರಿಸದೆ, ಕೇವಲ ಜಿಡಿಪಿ ಅಂಕಿ-ಅಂಶವನ್ನು ಸಂಭ್ರಮಿಸುವಂತೆ ನಾಗರಿಕರಿಗೆ ಹೇಳುವುದು ಹಾಸ್ಯಾಸ್ಪದ.
ಭಾರತದ ಯುವ ಜನಾಂಗ ದೇಶದ ದೊಡ್ಡ ಶಕ್ತಿಯಾಗಿದೆ. ಆದರೆ ಲಕ್ಷಾಂತರ ವಿದ್ಯಾವಂತ ಯುವಕರಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗಗಳು ಸಿಗುತ್ತಿಲ್ಲ. ಘನತೆಯುತ ಉದ್ಯೋಗಾವಕಾಶಗಳ ಕೊರತೆಯಿಂದ ನಮ್ಮ ಜನಸಂಖ್ಯಾ ಸಾಮರ್ಥ್ಯವೇ ಒಂದು ಸವಾಲಾಗಿ ಪರಿಣಮಿಸುವ ಅಪಾಯವಿದೆ.
ಜಿಡಿಪಿ ಅಂಕಿ-ಅಂಶಗಳನ್ನು ತಿರುಚುವುದು ಉತ್ತರವಲ್ಲ. ನೈಜ ಆರ್ಥಿಕತೆಯನ್ನು ಬಲಪಡಿಸುವುದೇ ಇದಕ್ಕೆ ಪರಿಹಾರ. ತಂತ್ರಜ್ಞಾನ, ನಾವೀನ್ಯತೆ, ಮಾನವ ಸಂಪನ್ಮೂಲ, ಉದ್ಯಮಶೀಲತೆ, ಉತ್ಪಾದನೆ ಮತ್ತು ಜಾಗತಿಕ ಏಕೀಕರಣದ ಮೂಲಕ ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂಬುದನ್ನು ಕರ್ನಾಟಕ ತೋರಿಸಿಕೊಟ್ಟಿದೆ.
ತಲಾ ಆದಾಯದಲ್ಲಿ ಪ್ರಮುಖ ರಾಜ್ಯವಾಗಿ ಹೊರಹೊಮ್ಮಿರುವ ಕರ್ನಾಟಕ, ವಿಶ್ವಬ್ಯಾಂಕ್ನ ಮೇಲ್ಮಧ್ಯಮ ಆದಾಯದ ಮಿತಿಯನ್ನು ದಾಟುವ ಮೂಲಕ ದೇಶದ ಮುಂಚೂಣಿ ರಾಜ್ಯಗಳಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಯ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು ಎಂಬುದನ್ನು ಕರ್ನಾಟಕ ಸಾಬೀತುಪಡಿಸಿದೆ.
ದೇಶಕ್ಕೆ ಕೇವಲ ಹೆಚ್ಚಿನ ಜಿಡಿಪಿ ಅಂಕಿ-ಅಂಶ ಬೇಕಿರುವುದಲ್ಲ. ಹೆಚ್ಚು ಆದಾಯ, ಉತ್ತಮ ಉದ್ಯೋಗಾವಕಾಶ, ಬಲಿಷ್ಠ ರಫ್ತು ವ್ಯವಸ್ಥೆ, ಸ್ಪರ್ಧಾತ್ಮಕ ಉತ್ಪಾದನೆ ಮತ್ತು ಆರ್ಥಿಕ ಭದ್ರತೆಯೂ ಬೇಕಿದೆ. ಅಭಿವೃದ್ಧಿ ಪ್ರತಿಯೊಂದು ಮನೆಗೂ ತಲುಪಬೇಕಿದೆ. ಭಾರತ ಅಭಿವೃದ್ಧಿ ಹೊಂದುತ್ತಿದೆ. ಆದರೆ ನಾವು ನಮ್ಮ ಜನರ ಭವಿಷ್ಯವನ್ನು ಸುರಕ್ಷಿತಗೊಳಿಸುವಷ್ಟು ವೇಗವಾಗಿ, ಎಲ್ಲರನ್ನೂ ಒಳಗೊಂಡಂತೆ, ಸುಸ್ಥಿರವಾಗಿ ಪ್ರಗತಿ ಸಾಧಿಸುತ್ತಿದ್ದೇವೆಯೇ ಎಂಬುದೇ ನಿಜವಾದ ಪ್ರಶ್ನೆ ಎಂದಿದ್ದಾರೆ.
ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಡಿ.ಕೆ. ಶಿವಕುಮಾರ್
ಇದಕ್ಕೆ ಉತ್ತರ ಜಿಡಿಪಿ ಹೆಡ್ಲೈನ್ನಲ್ಲಿ ಸಿಗುವುದಿಲ್ಲ. ಸಾಮಾನ್ಯ ನಾಗರಿಕನ ಬದುಕಿನಲ್ಲಿ ಕಾಣಿಸಬೇಕು. ಭಾರತದ ಆರ್ಥಿಕತೆಯನ್ನು ಅಂಕಿಅಂಶಗಳ ರಾಜಕೀಯದಿಂದ ಹೊರತೆಗೆದು, ಜನಕೇಂದ್ರಿತ ಆರ್ಥಿಕ ವ್ಯವಸ್ಥೆಯತ್ತ ಕೊಂಡೊಯ್ಯಬೇಕಾಗಿದೆ. ಭಾರತಕ್ಕೆ ಅಭಿವೃದ್ಧಿ ಬೇಕು, ಭಾರತಕ್ಕೆ ಉದ್ಯೋಗಗಳು ಬೇಕು, ಭಾರತಕ್ಕೆ ಹೆಚ್ಚಿನ ಆದಾಯ ಬೇಕು, ಭಾರತಕ್ಕೆ ಆರ್ಥಿಕ ಭದ್ರತೆ ಬೇಕು ಮತ್ತು ಇದಕ್ಕಾಗಿ ಭಾರತ ಈಗಲೇ ಕಾರ್ಯಪ್ರವೃತ್ತವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.