ಬೆಂಗಳೂರು, ಡಿ.7: ನಗರದ ಕನ್ನಡ ಭವನದ ನಯನಾ ಸಭಾಂಗಣದಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯಿಂದ ಭಾನುವಾರ ʼಮಹಿಳಾ ಉತ್ಸವ- 2025ʼ (Mahila Utsava 2025) ಆಯೋಜಿಸಲಾಗಿತ್ತು. ಯಕ್ಷಗಾನ ವೈಭವ ಕಾರ್ಯಕ್ರಮದಲ್ಲಿ ಆರು ತಿಂಗಳ ಕಾಲ ಸಂಸ್ಥೆಯಿಂದ ವಿದ್ಯಾರ್ಥಿವೇತನ ಪಡೆದ ಮಹಿಳಾ ಕಲಾವಿದರಿಂದಲೇ ʼಶಶಿಪ್ರಭಾ ಪರಿಣಯʼ ಎಂಬ ಆಖ್ಯಾನವನ್ನು ಆಡಿತೋರಿಸಲಾಯಿತು. ತಂಡದ ಕಲಾವಿದರಿಂದ ಕೃಷ್ಣಾರ್ಜುನ ಕಾಳಗ ಎಂಬ ಪ್ರಸಂಗವನ್ನೂ ಪ್ರದರ್ಶಿಸಲಾಯಿತು.
ಈ ಎರಡೂ ಪ್ರಸಂಗಗಳನ್ನು ಯಕ್ಷ ಗುರು ಶ್ರೀನಿವಾಸ ಸಾಸ್ತಾನ ಅವರು ಸಂಯೋಜಿಸಿದ್ದು, ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆ ಗೌರಿ ಕೆ. ನಿರ್ದೇಶಿಸಿದ್ದರು. ಮುಮ್ಮೇಳದಲ್ಲಿ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆ ಗೌರಿ ಕೆ., ಆಶಾ ಆರ್. ಅನ್ನಪೂರ್ಣೇಶ್ವರಿ, ಸುಮಾ ಅನಿಲ್ ಕುಮಾರ್, ಶಶಿಕಲಾ, ಲಕ್ಷ್ಮೀರಾವ್, ಶ್ವೇತಾ, ಅಮಿತ, ಅಂಬಿಕಾ, ಚೈತ್ರಾ ಆರ್. ಆಚಾರ್, ಚೈತ್ರಾ ಭಟ್, ದೀಕ್ಷಾ ಭಟ್, ಸಹನಾ ಜಿ, ಧೃತಿ ಅಮ್ಮೆಂಬಳ, ಅಭಿಶ್ರೀ ಶ್ರೀಹರ್ಷ, ರಕ್ಷಾ ವಿ, ಮಾನ್ಯ, ಯಾದ್ವಿ, ಸಹನಾ ಅನಿಲ್ ಕುಮಾರ್, ಗಗನ ಅನಿಲ್ ಕುಮಾರ್, ಕೃತಿ ಅಮ್ಮೆಂಬಳ ಭಾಗವಹಿಸಿದ್ದರು.

ಸಂಸ್ಥೆಯ ಪುಟಾಣಿ ಕಲಾವಿದರಿಂದ ಧೀರವೈಯ್ಯಾರ ಹಾಗೂ ಮಹಿಳಾ ಕಲಾವಿದರಿಂದ ಯಕ್ಷಗಾನ ಪೂರ್ವರಂಗ ಪ್ರಯೋಗವೂ ನಡೆಯಿತು. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ ಭಾಗವತರಾಗಿ, ಗೌತಮ ಸಾಸ್ತಾನ ಮೃದಂಗದಲ್ಲಿ, ಸುಬ್ರಹ್ಮಣ್ಯ ಎಂ ಅವರು ಚೆಂಡೆ ವಾದಕರಾಗಿದ್ದರು. ಬಳಿಕ ʼಕೃಷ್ಣ ಕೃಷ್ಣ ಕೃಷ್ಣʼ- ಶ್ರೀಕೃಷ್ಣ ರಸಾಮೃತ ಎಂಬ ಭರತನಾಟ್ಯ ವೈಭವ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ರಾಮನ ಬಾಣದಿಂದ ಸೃಷ್ಟಿಯಾದ ಥಾರ್ ಮರುಭೂಮಿ
ಖ್ಯಾತ ನೃತ್ಯ ಇತಿಹಾಸ ತಜ್ಞೆ ಡಾ. ಕರುಣಾ ವಿಜಯೇಂದ್ರ ಭಾಗವಹಿಸಿ ಮಾತನಾಡಿ, ಯಕ್ಷಗಾನ ಕಲೆಯನ್ನು ಜಾನಪದ ಕಲೆ ಎಂದು ಹೇಳುತ್ತಿದ್ದೇವೆ. ಆದರೆ, ಅದು ಜನರಿಂದ ಹರಡಿ ಹೆಮ್ಮರವಾದ ಒಂದು ಕಲಾ ಪ್ರಕಾರ ಎಂದು ವ್ಯಾಖ್ಯಾನಿಸಿದರು.
ಕಾರ್ಯಕ್ರಮವನ್ನು ಚೈತ್ರಾ ರಾಜೇಶ್ ಆಚಾರ್ ಮತ್ತು ಡಾ. ಸುಪ್ರೀತಾ ಗೌತಮ್ ನಡೆಸಿಕೊಟ್ಟರು.