ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Bird Flu: ರಾಜ್ಯದಲ್ಲಿ ಹಕ್ಕಿ ಜ್ವರದ ಹಾಹಾಕಾರ, 17000 ಕೋಳಿಗಳ ಹತ್ಯೆ

ಬಳ್ಳಾರಿ ಜಿಲ್ಲೆಯಲ್ಲಿ ಈ ವರೆಗೆ 17400 ಕೋಳಿಗಳು ಸತ್ತಿವೆ. ಅಸಿಲ್ ಹಾಗೂ ಕಾವೇರಿ ತಳಿ ಕೋಳಿಗಳೇ ಹಕ್ಕಿಜ್ವರಕ್ಕೆ ಟಾರ್ಗೆಟ್ ಆಗಿವೆ. ಬಳ್ಳಾರಿಯ ದರೋಜಿ ಕೆರೆಗೆ ಸಾವಿರಾರು ವಲಸೆ ಪಕ್ಷಿಗಳು ಬರುತ್ತವೆ. ಇದೇ ಪಕ್ಷಿಗಳಿಂದ ಹಕ್ಕಿಜ್ವರ ಜಿಲ್ಲೆಗೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್‌ ಮಿಶ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಹಕ್ಕಿ ಜ್ವರದ ಹಾಹಾಕಾರ, 17000 ಕೋಳಿಗಳ ಹತ್ಯೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 4, 2025 9:02 AM

ಬೆಂಗಳೂರು: ರಾಜ್ಯದಲ್ಲಿ ಹಕ್ಕಿ ಜ್ವರ (Bird Flu) ಹಾಹಾಕಾರ ಎಬ್ಬಿಸಿದೆ. ರಾಜ್ಯಾದ್ಯಂತ ಹಕ್ಕಿ ಜ್ವರ ವ್ಯಾಪಿಸುತ್ತಲೇ ಇದ್ದು, ಬಳ್ಳಾರಿಯಲ್ಲಿ (Bellary news) ಹಕ್ಕಿ ಜ್ವರದ ಅಬ್ಬರಕ್ಕೆ ಇಡೀ ಕೋಳಿ ಫಾರಂಗಳೇ (Poultry) ಖಾಲಿ ಆಗುತ್ತಿವೆ. ಜಿಲ್ಲೆಯಲ್ಲಿ ಸುಮಾರು 17 ಸಾವಿರ ಕೋಳಿಗಳ ಹತ್ಯೆ ಮಾಡಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಅಬ್ಬರಿಸುತ್ತಿದ್ದ ಹಕ್ಕಿ ಜ್ವರ ಇದೀಗ ಕರ್ನಾಟಕದಲ್ಲೂ (Karnataka) ಸಾಕಷ್ಟು ಹಾನಿ ಮಾಡಿದೆ.

ಬಳ್ಳಾರಿಯಲ್ಲಿ ಕೋಳಿಗಳ ಮಾರಣಹೋಮವೇ ನಡೆದಿದೆ. ಹಕ್ಕಿಜ್ವರ ಕಾಣಿಸಿಕೊಂಡ ಕಾರಣಕ್ಕೆ ಜಿಲ್ಲಾಡಳಿತವೇ 7 ಸಾವಿರ ಜೀವಂತ ಕೋಳಿಗಳನ್ನು ಹತ್ಯೆ ಮಾಡಿಸಿದೆ. ಹಕ್ಕಿಜ್ವರದಿಂದ ಕುರೇಕುಪ್ಪದಲ್ಲಿ 2400 ಕೋಳಿಗಳು ಸತ್ತಿವೆ. ಜಿಲ್ಲೆಯಲ್ಲಿ ಈ ವರೆಗೆ 17400 ಕೋಳಿಗಳು ಸತ್ತಿವೆ. ಅಸಿಲ್ ಹಾಗೂ ಕಾವೇರಿ ತಳಿ ಕೋಳಿಗಳೇ ಹಕ್ಕಿಜ್ವರಕ್ಕೆ ಟಾರ್ಗೆಟ್ ಆಗಿವೆ.

ಬಳ್ಳಾರಿಯ ದರೋಜಿ ಕೆರೆಗೆ ಸಾವಿರಾರು ವಲಸೆ ಪಕ್ಷಿಗಳು ಬರುತ್ತವೆ. ಇದೇ ಪಕ್ಷಿಗಳಿಂದ ಹಕ್ಕಿಜ್ವರ ಜಿಲ್ಲೆಗೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್‌ ಮಿಶ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮೊದಲು ಹಕ್ಕಿಜ್ವರ ಕಾಣಿಸಿಕೊಂಡಿದ್ದೇ ಚಿಕ್ಕಬಳ್ಳಾಪುರ ಜಿಲ್ಲೆಯ ವರದಹಳ್ಳಿಯಲ್ಲಿ. ಅದೇ ಗ್ರಾಮಕ್ಕೆ ಸೋಮವಾರ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಆಯುಕ್ತರು ಹಾಗೂ ಜೈವಿಕ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿಗಳು ಕೂಡಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲೂ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಯಾವುದೇ ಕೋಳಿ ಫಾರಂನಲ್ಲೂ ಹಕ್ಕಿಜ್ವರ ಕಾಣಿಸಿಕೊಂಡರೆ ಆ ಫಾರಂ ಅನ್ನು ಸೀಲ್‌ಡೌನ್‌ ಮಾಡುವಂತೆ ಹೇಳಲಾಗಿದೆ .

ಕೊಡಗು, ಚಾಮರಾಜನಗರ, ಮೈಸೂರು ಗಡಿಯಲ್ಲಿ ತಪಾಸಣೆ

ಕೇರಳದ ಜತೆ ಗಡಿ ಹಂಚಿಕೊಂಡಿರುವ ಕೊಡಗಿನಲ್ಲೂ ಹಕ್ಕಿಜ್ವರ ಆತಂಕ ಇದೆ. ಹೀಗಾಗಿ ವಿರಾಜಪೇಟೆ ತಾಲೂಕಿನ ಮಾಕುಟ್ಟ ಹಾಗೂ ಪೆರುಂಬಾಡಿ ಚೆಕ್‌ಪೋಸ್ಟ್‌, ಪೊನ್ನಂಪೇಟೆ ತಾಲೂಕಿನ ಕುಟ್ಟ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಹೊರರಾಜ್ಯದ ಕೋಳಿಗಳನ್ನ ತಪಾಸಣೆ ನಡೆಸಲಾಗ್ತಿದೆ. ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆಯಲ್ಲಿ ಕೇರಳದಿಂದ ಆಗಮಿಸುತ್ತಿರುವ ಕೋಳಿ ಸಾಗಾಣ ವಾಹನಗಳಿಗೆ ಸ್ಯಾನಿಟೈಜೇಷನ್​ ಮಾಡಲಾಗ್ತಿದೆ. ಕರ್ನಾಟಕ- ಕೇರಳ ಗಡಿ ಬಾವಲಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ.

ಹಕ್ಕಿಜ್ವರ ನಿಯಂತ್ರಣಕ್ಕೆ ಮಾರ್ಗಸೂಚಿ

ಹಕ್ಕಿ ಜ್ವರ ಕಂಡುಬಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಮಾರಾಟ ಬಂದ್.

3 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಮಾಂಸ ಮಾರಾಟ ಮಾಡುವಂತಿಲ್ಲ.

ಹಕ್ಕಿಜ್ವರ ಕಂಡು ಬಂದ 10 ಕಿಲೋ ಮೀಟರ್ ಸರ್ವಲೆನ್ಸ್ ಸ್ಥಳ.

ಯಾರೂ ಕೂಡ 3 ಕಿ.ಮೀ. ವ್ಯಾಪ್ತಿಯಲ್ಲಿ ಓಡಾಡುವಂತಿಲ್ಲ.

ಮಾಂಸ ಬೇಯಿಸಿ ತಿನ್ನಬೇಕು, ಹಸಿ ಮಾಂಸ ತಿನ್ನುವಂತಿಲ್ಲ.

ಕೋಳಿ ಮಾಂಸ ಕತ್ತರಿಸುವಾಗ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ.

ಹಕ್ಕಿಗಳು, ಕೋಳಿಗಳ ಜೊತೆ ಇರುವವರಿಗೆ ಔಷಧ ನೀಡಬೇಕು.

ಹಕ್ಕಿ ಜ್ವರದ ಗುಣಲಕ್ಷಣ ಇರುವವರಿಗೆ RTPCR ಟೆಸ್ಟ್ ಕಡ್ಡಾಯ.

ಹಕ್ಕಿ ಜ್ವರ ಬಂದವರ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆರೆಯಬೇಕು .

ಜಿಲ್ಲೆಯಿಂದ ಜಿಲ್ಲೆಗೆ ಹಕ್ಕಿಜ್ವರ ವ್ಯಾಪಿಸುತ್ತಿದ್ದಂತೆ ಆರೋಗ್ಯ ಇಲಾಖೆ ಗೈಡ್‌ಲೈನ್ ಜಾರಿಗೊಳಿಸಿದ್ದು, ಜನ ಇವುಗಳನ್ನ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.

ಇದನ್ನೂ ಓದಿ: Road Accident: ರಾಯಚೂರಿನಲ್ಲಿ ಬೈಕ್‌ಗಳು ಡಿಕ್ಕಿಯಾಗಿ ಮೂವರು ಸಾವು