ಮಂಗಳೂರು: ಧರ್ಮಸ್ಥಳ ಕ್ಷೇತ್ರದ ಕುರಿತು ನಿರಂತರವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದ ಬಿಜೆಪಿ ಶಾಸಕರು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ (BJP Delegation visits Dharmasthala) ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ, ತಾವು ಧರ್ಮಸ್ಥಳದ ಪರವಾಗಿ ಇರುವುದಾಗಿ ನೈತಿಕ ಬೆಂಬಲ ಸೂಚಿಸಿದ್ದಾರೆ.
ಬಿಜೆಪಿ ಶಾಸಕರ ನಿಯೋಗದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸ್ಥಳೀಯ ಶಾಸಕರಾದ ಹರೀಶ್ ಪೂಂಜಾ, ಬಿಜಿಪಿ ಶಾಸಕರು, ಪರಿಷತ್ ಸದಸ್ಯರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.

ಈ ವೇಳೆ ರಾಜ್ಯ ಬಿಜೆಪಿ ಬಿ.ವೈ.ವಿಜಯೇಂದ್ರ ಮಾತನಾಡಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕ ತನಿಖೆಯನ್ನು ನಾವು ಸ್ವಾಗತಿಸಿದ್ದೆವು. ಆದರೆ ತನಿಖೆಯ ಭರದಲ್ಲಿ ಧರ್ಮಸ್ಥಳದ ಕುರಿತು ಯಥೇಚ್ಛವಾಗಿ ಅಪಪ್ರಚಾರ, ಅವಹೇಳನಗಳು ನಡೆಯುತ್ತಿವೆ. ಇದರ ಹಿಂದೆ ಷಡ್ಯಂತ್ರವಿದೆ ಎಂದು ಸ್ವತಃ ಡಿಸಿಎಂ ಅವರೇ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತಾದ ಅಪಪ್ರಚಾರಕ್ಕೆ ಕಡಿವಾಣ ಹಾಕದೇ ಇರುವುದು ಕಾಂಗ್ರೆಸ್ ಸರ್ಕಾರದ ಅಪರಾಧ. ಇದಕ್ಕಾಗಿ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಹಿಂದೂಗಳನ್ನು ಅವಹೇಳನ ಮಾಡುವ ಷಡ್ಯಂತ್ರಗಳು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಜಾಸ್ತಿಯಾಗಿದೆ. ಧರ್ಮಸ್ಥಳ ವಿಚಾರವಾಗಿ ಸಿದ್ದರಾಮಯ್ಯನವರ ಹಿಂದೆ ಟಿಪ್ಪು ಗ್ಯಾಂಗ್ ಇದೆ. ಒಬ್ಬ ಅನಾಮಿಕ ನೀಡಿದ ದೂರನ್ನು ದೊಡ್ಡದಾಗಿ ಬಿಂಬಿಸಿದ್ದಾರೆ. ನಗರ ನಕ್ಸಲರು, ಅನಾಮಿಕ ಮುಸುಕುಧಾರನಿಂದ ಸರ್ಕಾರವೇ ಈಗ ಮುಸುಕು ಹಾಕಿಸಿಕೊಂಡಿದೆ. ಪ್ರತಿ ದಿನ ಸಾವಿರಾರು ದೂರುಗಳು ಬರುತ್ತವೆ. ಈ ಎಲ್ಲಕ್ಕೂ ಸರ್ಕಾರ ಎಸ್ಐಟಿ ರಚಿಸುತ್ತದೆಯೇ ? ಹಿಂದೂ ದೇವಸ್ಥಾನದ ವಿಷಯದಲ್ಲಿ ಈ ರೀತಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಮಸೀದಿ ವಿಷಯದಲ್ಲಿ ಇದೇ ರೀತಿ ನಡೆದುಕೊಳ್ಳುತ್ತದೆಯೇ ? ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಮಾತನಾಡಿ, ತನಿಖೆಗೂ ಮೊದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಕುರಿತು ಅಪಪ್ರಚಾರ ನಡೆಸಿದವರ ಹಿನ್ನೆಲೆಯ ಬಗ್ಗೆಯೂ ತನಿಖೆಯಾಗಬೇಕು. ಈಗಾಗಲೇ ಉಪಮುಖ್ಯಮಂತ್ರಿಗಳು ತನಿಖೆಯ ಹಿಂದೆ ಷಡ್ಯಂತ್ರವಿದೆ ಎಂದಿದ್ದಾರೆ. ಆ ಷಡ್ಯಂತ್ರ ಏನು ಎಂಬುದನ್ನ ಸಹ ಬಹಿರಂಗಪಡಿಸಬೇಕು. ಅಪಪ್ರಚಾರದ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಗೆ ಘಾಸಿಯಾಗುವ ರೀತಿ ವರ್ತನೆ ಮಾಡಿದವರ ಮೇಲೆ ಕ್ರಮ ಯಾಕಿಲ್ಲ? ಎಂದು ಅಸಮಾಧಾನ ಹೊರಹಾಕಿದರು.