ಚಾಮರಾಜನಗರ: ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದರು. ಸದ್ಯ ಪ್ರಕರಣದ (Hanur Encounter Case) ತನಿಖೆ ನಡೆಯುತ್ತಿದ್ದು, ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸ್ಥಳದಿಂದ ಪರಾರಿಯಾಗಿದ್ದ ಮಹಿಮಾ ದಾಸ್ ಅಜ್ಞಾತ ಸ್ಥಳದಿಂದ ವೀಡಿಯೊ ಬಿಡುಗಡೆ ಮಾಡಿ, ತನಗೆ ಜೀವ ಭಯವಿದೆ ಮತ್ತು ರಕ್ಷಣೆ ಬೇಕು ಎಂದು ಹೇಳಿಕೊಂಡಿದ್ದಾರೆ. ಅಭಯಾರಣ್ಯದಲ್ಲಿ ಗುಂಡು ಹಾರಿಸಿದಾಗ ಮೃತ ಮೂವರೊಂದಿಗೆ ಇದ್ದ ದಾಸ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಚಿವ ಪುಟ್ಟರಂಗ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಆದರೆ, ಚಿಕಿತ್ಸೆಯ ನಂತರ, ದಾಸ್ ನಾಪತ್ತೆಯಾಗಿದ್ದರು. ಇದೀಗ ವಿಡಿಯೋ ಮೂಲಕ ಹೇಳಿಕೆ ನೀಡಿರುವ ದಾಸ್, ನಾಲ್ವರು ಬೆಟ್ಟದಿಂದ ಇಳಿದ ತಕ್ಷಣ ಅರಣ್ಯ ಅಧಿಕಾರಿಗಳು ಗುಂಡು ಹಾರಿಸಿದರು ಎಂದು ಹೇಳಿದ್ದಾರೆ. ನಾನು ಬೆಳಿಗ್ಗೆ 5.30 ರ ಸುಮಾರಿಗೆ ಬೆಟ್ಟದಿಂದ ಇಳಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದು ಗುಂಡು ಹಾರಿಸಿದರು.
ವಿಡಿಯೋ ನೋಡಿ
ನಾನು ಭಯಭೀತನಾಗಿ ಓಡಿಹೋದೆ. ಸುಮಾರು ಐದು ನಿಮಿಷಗಳ ಕಾಲ ಯಾವುದೇ ಶಬ್ದ ಬರಲಿಲ್ಲ. ನಾನು ಮನೆಗೆ ಮರಳಿದೆ. ನಾನು ಅಸ್ವಸ್ಥನಾಗಿದ್ದರಿಂದ, ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ದಾಸ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಚಿವ ಪುಟ್ಟರಂಗ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಆದರೆ, ಚಿಕಿತ್ಸೆಯ ನಂತರ, ದಾಸ್ ನಾಪತ್ತೆಯಾಗಿದ್ದರು.
ಬೇಟೆಗಾರರು ಮೊದಲು ಅವರ ಮೇಲೆ ಗುಂಡು ಹಾರಿಸಿದರು ಮತ್ತು ಅವರು ಆತ್ಮರಕ್ಷಣೆಗಾಗಿ ಮಾತ್ರ ಪ್ರತಿದಾಳಿ ನಡೆಸಿದ್ದೆವು ಎಂದು ಅರಣ್ಯ ಇಲಾಖೆ ಹೇಳಿಕೊಂಡಿದ್ದರು. ಆದರೆ ನಾವು ಬೆಟ್ಟದಿಂದ ಇಳಿದ ತಕ್ಷಣ ಅರಣ್ಯಾಧಿಕಾರಿಗಳೇ ಮೊದಲು ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಮಹಿಮಾ ದಾಸ್ ಹೇಳಿದ್ದಾರೆ. ಸುಮಾರು 80 ಸೆಕೆಂಡ್ ವಿಡಿಯೋದಲ್ಲಿ ಕನ್ನಡ ಹಾಗೂ ತಮಿಳಿನಲ್ಲಿ ಅವರು ಮಾತನಾಡಿದ್ದಾರೆ.
ಅರಣ್ಯ ಇಲಾಖೆ ನಡೆ ಮೇಲೆ ಅನುಮಾನ!
ಮೃತ ಪೀಟರ್, ಆಂಥೋನಿ ಹಾಗೂ ಕುಮಾರ್ ಅವರ ಅಂತ್ಯಕ್ರಿಯೆ ನೇರವೇರಿದ ಬಳಿಕ ಅರಣ್ಯ ಇಲಾಖೆ ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ತನಿಖಾಧಿಕಾರಿಗಳಿ ಒಪ್ಪಿಸಿತ್ತು. ಆದರೆ ಇದೀಗ ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಸಾಕ್ಷ್ಯಗಳ ಮೇಲೆ ಅನುಮಾನ ಹುಟ್ಟಿಕೊಂಡಿದೆ. ಘಟನಾ ಸ್ಥಳದಲ್ಲಿ ಬೇಟೆಗಾರರಿಂದ ಅಕ್ರಮವಾಗಿ ಬಳಸಲಾಗುತ್ತಿದ್ದ ಬಂದೂಕು ಹಾಗೂ ಬರೋಬ್ಬರಿ 34.25 ಕೆಜಿ ಜಿಂಕೆ ಮಾಂಸ ತುಂಬಿದ್ದ ಚೀಲ ಹಾಗೂ ಜಿಂಕೆಗೆ ಮೂರು ಕಡೆಗಳಲ್ಲಿ ಬಿದ್ದಿದ್ದ ಗುಂಡೇಟಿನ ಪುರಾವೆಯನ್ನು ಅರಣ್ಯ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಅಲ್ಲದೆ 4 ಜೊತೆ ಪ್ಯಾರಾಗನ್ ಚಪ್ಪಲಿ, 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು ಸೇರಿದಂತೆ ಇನ್ನೂ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.
ಹನೂರು ಎನ್ಕೌಂಟರ್ ಪ್ರಕರಣ; ಜಿಂಕೆ ಮಾಂಸ ಸೇರಿ ಹಲವು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ!
ಹೊಸ ಚಪ್ಪಲಿಯ ಮೇಲಿನ ಸ್ಟಿಕ್ಕರ್ ಕೂಡ ತೆಗೆಯದಿರುವುದು ಸಾರ್ವಜನಿಕರಲ್ಲಿ ಮತ್ತು ತನಿಖಾಧಿಕಾರಿಗಳಲ್ಲಿ ತೀವ್ರ ಅನುಮಾನ ಮೂಡಿಸಿದೆ. ಅಧಿಕಾರಿಗಳು ನಕಲಿ ಸಾಕ್ಷಿ ಸೃಷ್ಟಿಸಲು ಹೊಸ ಚಪ್ಪಲಿ ತಂದಿಟ್ಟಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.