ಚಿಕ್ಕಬಳ್ಳಾಪುರ, ಏ.25: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ (Sathya Sai Grama) ಭಾರತದ ಮೊದಲ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜಿನಲ್ಲಿ ಜಾಗತಿಕ ಕಾರ್ಡಿಯೊಥೊರಾಸಿಕ್ ತಜ್ಞರು ಒಂದೇ ವೇದಿಕೆಯಲ್ಲಿ ಸೇರಿ, ಮುಂದಿನ ತಲೆಮಾರಿನ ಹೃದಯ ಶಸ್ತ್ರವೈದ್ಯರಿಗೆ ಎರಡು ದಿನಗಳ ವಿಶೇಷ ತರಬೇತಿ ನೀಡುವ ‘ಸ್ಕೋರ್–2026’ ಕಾರ್ಯಕ್ರಮ ಶನಿವಾರ ಆರಂಭವಾಯಿತು.
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ನಡೆಯುತ್ತಿರುವ ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ದೇಶ–ವಿದೇಶಗಳ ಖ್ಯಾತ ಹೃದಯ ಮತ್ತು ಥೊರಾಸಿಕ್ ಶಸ್ತ್ರಚಿಕಿತ್ಸಾ ತಜ್ಞರು ಭಾಗವಹಿಸಿದ್ದಾರೆ. ಅಂತಿಮ ವರ್ಷದ ಕಾರ್ಡಿಯೊಥೊರಾಸಿಕ್ ಶಸ್ತ್ರಚಿಕಿತ್ಸಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ, ವೈದ್ಯಕೀಯ ಜ್ಞಾನ ವೃದ್ಧಿ ಹಾಗೂ ಕ್ಲಿನಿಕಲ್ ಕೌಶಲ್ಯಾಭಿವೃದ್ಧಿ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಖ್ಯ ಅತಿಥಿಯಾಗಿ ಇಸ್ರೋ ವಿಜ್ಞಾನಿ ಹಾಗೂ ಪದ್ಮಶ್ರೀ ಪುರಸ್ಕೃತ ಮೈಲ್ಸ್ವಾಮಿ ಅಣ್ಣಾದುರೈ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಈ ಸಂಸ್ಥೆಯಲ್ಲಿ ಯಾವುದೇ ಬಿಲ್ ಕೌಂಟರ್ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕೃತಕ ಬುದ್ಧಿಮತ್ತೆ (ಎಐ) ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದೆ ಎಂದು ಅಭಿಪ್ರಾಯಪಟ್ಟರು.
ಫಿಜಿ ದೇಶದಲ್ಲಿರುವ ಕಾರಣ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆನ್ಲೈನ್ ಮೂಲಕ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು. ಕಳೆದ 12 ವರ್ಷಗಳಿಂದ ‘ಸ್ಕೋರ್’ ಕಾರ್ಯಕ್ರಮದ ಮೂಲಕ ಯುವ ಶಸ್ತ್ರವೈದ್ಯರಿಗೆ ಜಾಗತಿಕ ತಜ್ಞರ ಮಾರ್ಗದರ್ಶನ ದೊರೆಯುತ್ತಿರುವುದನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ನೇರ ಹಾಗೂ ಆನ್ಲೈನ್ ಮೂಲಕ ಭಾಗವಹಿಸುವಂತೆ ಕಾರ್ಯಕ್ರಮವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿದೆ. ಭಾನುವಾರ ಥೊರಾಸಿಕ್ ಶಸ್ತ್ರಚಿಕಿತ್ಸೆ ಮತ್ತು ಹೃದಯ ರಚನೆಶಾಸ್ತ್ರ ಕುರಿತ ಅಧಿವೇಶನಗಳು ನಡೆಯಲಿವೆ. ಭಾಗವಹಿಸುವವರಿಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ನ ಕ್ರೆಡಿಟ್ ಪಾಯಿಂಟ್ಗಳನ್ನು ಮಂಜೂರು ಮಾಡಲಾಗಿದೆ.
Wind Energy: ಪವನ ಶಕ್ತಿ ಸಾಮರ್ಥ್ಯದಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ ಭಾರತ: ಪ್ರಲ್ಹಾದ್ ಜೋಶಿ
ಉಚಿತ ಆರೋಗ್ಯ ಸೇವೆ ಮತ್ತು ಮೌಲ್ಯಾಧಾರಿತ ವೈದ್ಯಕೀಯ ಶಿಕ್ಷಣದ ದಾರಿದೀಪರಾಗಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಪ್ರೇರಣೆ ಮತ್ತು ಸೇವಾ ಸಂಕಲ್ಪದ ಫಲವಾಗಿ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ವೈದ್ಯಕೀಯ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ‘ಒನ್ ವರ್ಲ್ಡ್, ಒನ್ ಫ್ಯಾಮಿಲಿ’ ಮಿಷನ್ ಅಡಿಯಲ್ಲಿ ಎಸ್ಎಂಎಸ್ಐಎಂಎಸ್ಆರ್ನ ಅಕಾಡೆಮಿಕ್ಸ್ ವಿಭಾಗದ ನಿರ್ದೇಶಕ ಡಾ. ಸತೀಶ್ ಕುಮಾರ್ ಹಾಗೂ ಮುಖ್ಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಿ.ಎಸ್. ಹಿರೇಮಠ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜಯದೇವ ಸಂಸ್ಥೆಯ ಪ್ರೊ. ಪಿ.ಎಸ್. ಸೀತಾರಾಮ ಭಟ್, ಮುಂಬೈನ ಪ್ರೊ. ಅನಿಲ್ ಜಿ. ತೆಂಡೂಲ್ಕರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.