ಚಿಕ್ಕಬಳ್ಳಾಪುರ: ನವರಾತ್ರಿಯ (Navaratri 2025) 8ನೇ ದಿನವಾದ ಸೋಮವಾರ (ಸೆ 29) ಶ್ವೇತವಸ್ತ್ರಧಾರಿಣಿ ಮಹಾಗೌರಿಯನ್ನು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ವಿಶೇಷವಾಗಿ ಆರಾಧಿಸಲಾಯಿತು. ಪ್ರತಿದಿನದಂತೆ ಅತಿರುದ್ರ ಮಹಾಯಜ್ಞ, ದುರ್ಗಾ ಪೂಜೆಯ ವಿಧಿಗಳು ಸಾಂಗವಾಗಿ ನೆರವೇರಿದವು. ಮೇಧಾ, ಮಹಾ ಸರಸ್ವತಿ ಮತ್ತು ದಕ್ಷಿಣಾಮೂರ್ತಿ ಹೋಮಗಳು ಭಕ್ತಿಯ ಭಾವ ಸ್ಫುರಿಸಿದವು. ಈ ಮೂರೂ ಹೋಮಗಳು ಜ್ಞಾನವನ್ನು ಬೆಳಗುವ, ಬುದ್ಧಿಯನ್ನು ಚುರುಕುಗೊಳಿಸುವ, ಅಧ್ಯಾತ್ಮದತ್ತ ಪ್ರೇರಣೆ ಕೊಡುವಂಥವು ಎಂದೇ ಜನಜನಿತವಾಗಿವೆ.
ಭೂಲೋಕದಲ್ಲಿರುವ ಎಲ್ಲ ಜೀವಿಗಳ ತಾಯಿ ಎನಿಸಿರುವ ಮಹಾಗೌರಿಯ ಆರಾಧನೆಯಿಂದ ಚಿತ್ತಶುದ್ಧಿ, ಮನಸ್ಸಿಗೆ ಶಾಂತಿ ಸಿಗುತ್ತದೆ. ಅಷ್ಟೇ ಅಲ್ಲದೆ ಆಂತರಿಕ ಶಕ್ತಿಯೂ ವೃದ್ಧಿಸುತ್ತದೆ. ಸನಾತನ ಪರಂಪರೆಯು ಆದಿಗುರು ಎಂದು ಬಣ್ಣಿಸುವ ದಕ್ಷಿಣಾಮೂರ್ತಿಯ ಆರಾಧನೆಯು ಜಗತ್ತಿನ ಅತ್ಯುನ್ನತ ಜ್ಞಾನ ಎನಿಸಿರುವ ಅಧ್ಯಾತ್ಮ ವಿದ್ಯೆಗೆ ಪ್ರೇರಣೆ ಕೊಡುತ್ತದೆ. ತಾಯಿ ಸರಸ್ವತಿಯ ಆರಾಧನೆಯಿಂದ ಜೀವನಕ್ಕೆ ಬೇಕಾದ ಎಲ್ಲ ಬಗೆಯ ಜ್ಞಾನ ಸಿಗುತ್ತದೆ ಎಂದು ಆಸ್ತಿಕರು ನಂಬುತ್ತಾರೆ.

ಪೂರ್ಣಾಹುತಿ, ಅಷ್ಟಾವಧಾನ ಸೇವಾ, ಚತುರ್ವೇದ ಪಾರಾಯಣಂ, ಅಷ್ಟಕಂ, ಸಂಗೀತ, ನಾದಸ್ವಾರ ಹಾಗೂ ಪಂಚ್ಯವಾದ್ಯ ವಾದನಗಳೊಂದಿಗೆ 8ನೇ ದಿನದ ಅತಿರುದ್ರ ಮಹಾಯಜ್ಞ ಪೂರ್ಣಗೊಂಡಿತು.
ತಮ್ಮ ಆಶೀರ್ಚನದಲ್ಲಿ ಮೌನದ ಮಹತ್ವದ ಬಗ್ಗೆ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಹೇಳಿದರು. 'ಮೌನ ಎಂದರೆ ಖಾಲಿಯಾಗಿರುವುದಲ್ಲ. ಅದು ಎಲ್ಲ ಶಬ್ದಗಳ ಮೊತ್ತ. ನಮ್ಮೊಳಗಿನ ದೇವರ ಮಾತು ಕೇಳಿಸಿಕೊಳ್ಳಲು ಮೌನದಿಂದ ಮಾತ್ರವೇ ಸಾಧ್ಯ' ಎಂದು ಹೇಳಿದರು.
ಒಗ್ಗೂಡಿ ಬದುಕು ನಡೆಸುವುದು ಸಂಸ್ಕೃತ ಧರ್ಮ: ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ

ಒಡೆದು ಬದುಕು ನಡೆಸುವುದು ವಿಕೃತ ಕರ್ಮ, ಒಗ್ಗೂಡಿ ಬದುಕು ನಡೆಸುವುದು ಸಂಸ್ಕೃತ ಧರ್ಮ. ಇದೇ ವಸುಧೈವ ಕುಟುಂಬಕಂ ಆಶಯ ಎಂದು ವಿಜಯನಗರ ಜಿಲ್ಲೆ ನವಲಿ ಕಟ್ಟಿಮನಿ ಹಿರೇಮಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನದ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪ್ರೇಮಾಮೃತಂ ಸಭಾಂಗಣದಲ್ಲಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳನ್ನು ಮರೆತಿರುವ ಈ ಕಾಲದಲ್ಲಿ ಸ್ವಾರ್ಥ, ಈರ್ಷ್ಯೆ ಮತ್ತು ದ್ವೇಷದ ಮನೋಭಾವಗಳೇ ವಿಜೃಂಭಿಸುತ್ತಿವೆ. ಇಂಥ ಸಂದರ್ಭದಲ್ಲಿ 100 ದೇಶಗಳ ಜನರನ್ನು ಇಲ್ಲಿಗೆ ಕರೆಸಿ ಇವರೆಲ್ಲಾ ಅವರೆಲ್ಲಾ ನನ್ನವರು ಎಂದು ಘೋಷಿಸುವುದು ಗಮನಾರ್ಹ ಸಂಗತಿ. ಇದಕ್ಕಾಗಿ ಸದ್ಗುರುಗಳಿಗೆ ಎಲ್ಲರೂ ಆಭಾರಿಗಳಾಗಿರಬೇಕು ಎಂದರು.
ಮಠಾಧೀಪತಿಯಾದರೆ ಅರ್ಧಮಿಗಳ ಕಾಟ, ಸಂಸಾರಿಯಾದರೆ ಸತಿಸುತರ ಕಾಟ, ದೇಶಭಕ್ತನಾದರೆ ದೇಶದ್ರೋಹಿಗಳ ಕಾಟ, ಸ್ವದೇಶಿಯಾದರೆ ವಿದೇಶಿ ಕಾಟ, ಈ ಕಾಟಗಳನ್ನು ಕೂಟಗಳನ್ನು ಮೀರಿಸಿ ನಮ್ಮೆಲ್ಲರ ಸದ್ಗುರುವಿನ ಭವ್ಯ ತಾಣದ ಕೂಟ ಎಲ್ಲಾದರೂ ಇದೆ ಎಂದರೆ ಅದು ಮುದ್ದೇನಹಳ್ಳಿಯಲ್ಲಿದೆ. ಇಲ್ಲಿ ಯಾವ ಕಾಟವೂ ಇಲ್ಲ. ತಾಕಲಾಟವೂ ಇಲ್ಲ, ಪರದಾಟವೂ ಇಲ್ಲ. ಭಗವಂತನ ಆಟ ಇಲ್ಲಿದೆ. ನೀವೆಲ್ಲರು ಭಗವಂತನ ಭವ್ಯ ಮಕ್ಕಳಾಗಿ ಇಲ್ಲಿದ್ದೀರಿ ಎಂದು ಶ್ಲಾಘಿಸಿದರು.
ಸಾಯಿ ಶ್ಯೂರ್ ನೂತನ ಘಟಕ ಆರಂಭಕ್ಕೆ ಸಂಕಲ್ಪ
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಮ್ಮ ಆಶೀರ್ವಚನದಲ್ಲಿ ಸಾಯಿ ಶ್ಯೂರ್ನ ಮತ್ತೊಂದು ಘಟಕವನ್ನು ಶೀಘ್ರ ನಿರ್ಮಿಸಲಾಗುವುದು ಎಂದು ಘೋಷಿಸಿದರು. 'ಸಾಯಿ ಶ್ಯೂರ್ ಪೌಷ್ಟಿಕ ಆಹಾರ ತಯಾರಿಕೆಯ ಘಟಕ ಸತ್ಯ ಸಾಯಿ ಗ್ರಾಮದಲ್ಲಿದೆ. ಇದನ್ನು ದೇಶದ ಇತರೆ ಪ್ರದೇಶಗಳಲ್ಲಿಯೂ ಸ್ಥಾಪಿಸುವ ಗುರಿ ಇದೆ. ಇದರಿಂದ ಸಾಗಾಣಿಕೆಗೆ ತಗಲುತ್ತಿರುವ ವೆಚ್ಚ ಕಡಿಮೆಯಾಗುತ್ತದೆ. ಸ್ಥಳೀಯ ರೈತರಿಂದಲೇ ಆಹಾರ ಪದಾರ್ಥಗಳನ್ನು ಖರೀದಿಸಿ ಅವರ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ' ಎಂದು ಹೇಳಿದರು.

ಶಾಲೆಗೆ ಹೋಗುವ 25 ಕೋಟಿ ಮಕ್ಕಳ ಪೈಕಿ ಬಡತನ ರೇಖೆಗಿಂತ ಕಡಿಮೆ ಇರುವ ಕನಿಷ್ಠ 8 ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಗುರಿಯನ್ನು ಹೊಂದಿದ್ದೇವೆ. ಈ ಯೋಜನೆ ಭಾರತದ ಗಡಿಯನ್ನು ದಾಟಿಹೋಗಿದೆ. ಆಫ್ರಿಕಾ, ಕಾಂಬೋಡಿಯಾ ಹಾಗೂ ಇತರೆ ದೇಶಗಳ ಹಲವು ಪ್ರದೇಶಗಳಿಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ | Sathya Sai Grama: ಜ್ಞಾನ-ಧ್ಯಾನ ಮೇಳೈಸಿದ ಅಪರೂಪದ ವ್ಯಕ್ತಿತ್ವವೇ ಸದ್ಗುರು ಶ್ರೀ ಮಧುಸೂದನ ಸಾಯಿ: ಬೊಮ್ಮಾಯಿ
ಶ್ರೀ ಸತ್ಯ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಗೆ ಬೆಂಬಲ ನೀಡುತ್ತಿರುವ 'ನು ಟೆಕ್ ಇನ್ಸ್ಟ್ರುಮೆಂಟ್ಸ್' (Nu Tek Instruments Pvt Ltd) ಕಂಪನಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಈಶ್ವರ್ ದತ್ ಕುಂದೂರಿ ಅವರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.