ಚಿಕ್ಕಮಗಳೂರು, ಫೆ.23: ಕಾಡಾನೆ ದಾಳಿಗೆ (Elephant Attack) ಕಾರ್ಮಿಕ ಮಹಿಳೆ ಸಾವು ಮತ್ತು ನಂತರದ ಲಾಠಿಚಾರ್ಜ್ ವಿಚಾರವಾಗಿ ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಶೃಂಗೇರಿ (Srungeri) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ, ಎನ್.ಆರ್.ಪುರ, ಮತ್ತು ಶೃಂಗೇರಿ ತಾಲೂಕುಗಳಲ್ಲಿ ಬಂದ್ಗೆ (bandh) ಕರೆ ನೀಡಲಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಡಬಗೆರೆ ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ ಮುಂಗಟ್ಟು ಮುಚ್ಚಿ ವರ್ತಕರು ಬಂದ್ ಬೆಂಬಲಿಸಿದ್ದಾರೆ. ನಿನ್ನೆ ಇಡೀ ದಿನ ಕಡಬಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆದಿದ್ದು, ಸಂಜೆ ಲಾಠಿಚಾರ್ಜ್ ಕೂಡ ನಡೆದಿತ್ತು.
ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್
ಜನರ ಆಕ್ರೋಶದ ಕಟ್ಟೆ ಒಡೆದ ಪರಿಣಾಮ ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್ ಆಗಿದೆ. ನಿನ್ನೆ ನಡೆದ ಘಟನೆ ಖಂಡಿಸಿ ಬಾಳೆಹೊನ್ನೂರಿನ JCI ಸರ್ಕಲ್ ನಲ್ಲಿ ಪ್ರತಿಭಟನೆ ನಡೆದಿದ್ದು, ನೂರಾರು ಜನರು ಭಾಗಿಯಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ರೈತ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದು, ರೈತ ವಿರೋಧಿ ರಾಜ್ಯ ಸರ್ಕಾರ ಎಂಬ ಘೋಷಣೆಗಳು ಈ ವೇಳೆ ಮೊಳಗಿವೆ.
Elephant Attack: ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿ, ರೊಚ್ಚಿಗೆದ್ದ ಜನರಿಂದ ಪ್ರತಿಭಟನೆ, ಲಾಠಿಚಾರ್ಜ್
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ್, ಮೃತ ದೇಹ ರವಾನೆ ವೇಳೆ ಜನರನ್ನು ಚದುರಿಸುವ ಕೆಲಸ ಮಾಡಿದ್ದೇವೆಯೇ ಹೊರತು ಲಾಠಿಚಾರ್ಜ್ ಮಾಡಿಲ್ಲ. 29 ಜನರ ಮೇಲೆ FIR ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನೆ ವೇಳೆ ನಮ್ಮ ಸಿಬ್ಬಂದಿಗೆ ಗಾಯವಾಗಿದ್ದು, ತನಿಖೆ ನಡೆಸಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಧಿಕಾರಿ ಮತ್ತು ನಾನು ಹೋರಾಟಗಾರರಿಗೆ ಮನವಿ ಕೂಡ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಗೆ ಕರೆ ಹಿನ್ನೆಲೆ ಬಾಳೆಹೊನ್ನೂರಿನ ಅರಣ್ಯ ಇಲಾಖೆ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಸ್ಥಳದಲ್ಲಿ KSRP ತುಕಡಿ ಸೇರಿದಂತೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡುವ ಮೂಲಕ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.